ಚಾಲಾಕಿ ಸಹೋದರರು: ಗೂಗಲ್ ಮ್ಯಾಪ್ನಲ್ಲಿ ದೇವಾಲಯ ಹುಡುಕಿ ಕಳ್ಳತನ!
ಗದಗ, ಸೆಪ್ಟೆಂಬರ್ 17: ಗೂಗಲ್ ಮ್ಯಾಪ್ ಸಹಾಯದಿಂದ ದೇವಾಲಯಗಳನ್ನು ಹುಡುಕಿ ಆಭರಣ ಕಳ್ಳತನ ಮಾಡುತ್ತಿದ್ದ ಪ್ರಕರಣವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇವರಿಬ್ಬರು ಸಹೋದರರು ಎಂಬ ಅಂಶ ಬಯಲಾಗಿದೆ. ಅಲ್ಲದೇ ಇಬ್ಬರು ಸೇರಿ ತಮ್ಮ ಇನ್ನೊಬ್ಬ ಸಹೋದರನನ್ನು ಕೊಲೆ ಮಾಡಿರುವ ಪ್ರಕರಣವೂ ಈಗ ಬಯಲಾಗಿದೆ. ಗದಗ ಪೊಲೀಸರು ಕದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಈ ಕುರಿತು ತನಿಖೆಯನ್ನು ಮುಂದುವರೆಸಿದ್ದಾರೆ.
ಡಿಎಸ್ಪಿ ಗದಗ & ಸಿಪಿಐ ಶಿರಹಟ್ಟಿ ಅವರ ನೇತೃತ್ವದ ವಿಶೇಷ ತಂಡವು ಶಿರಹಟ್ಟಿ & ಲಕ್ಷ್ಮೇಶ್ವರ ಠಾಣೆಯ ಹಾಗೂ ಹಾವೇರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಕರಣಗಳು ಸೇರಿದಂತೆ ಒಟ್ಟು 8 ದೇವಾಲಯಗಳಲ್ಲಿ ನಡೆದ ಕಳ್ಳತನ ಹಾಗೂ 7 ಸರಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಒಟ್ಟು ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಇಬ್ಬರು ಸಹೋದರರು.

ಒಟ್ಟು ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, 328 ಗ್ರಾಂ ಬಂಗಾರ & 19100 ಗ್ರಾಂ ಬೆಳ್ಳಿ ಆಭರಣಗಳು, 12,000 ನಗದು, 1 ಸ್ಕಾರ್ಪಿಯೋ, 1 ಪಲ್ಸರ್ ಬೈಕ್ ಸೇರಿ ಒಟ್ಟು ರೂ. 46,22,000 ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರ ತನಿಖೆ ಮುಂದುವರೆದಿದೆ.
ಗೂಗಲ್ ಮ್ಯಾಪ್ ಮೂಲಕ ಹುಡುಕಾಟ: ಬಂಧಿತ ಆರೋಪಿಗಳ ಪೈಕಿ ಸಹೋದರರಾದ ಪ್ರಸಾದ (28) ಮತ್ತು ಪ್ರದೀಪ್ (24) ಇಬ್ಬರು ರಾಣೆಬೆನ್ನೂರು ನಿವಾಸಿಗಳು. ಇವರಿಬ್ಬರು ಸೇರಿ ತಮ್ಮ ಮತ್ತೊಬ್ಬ ಸಹೋದರ ರಾಮುವನ್ನು ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10/5/2023ರಂದು ಕೊಲೆ ಮಾಡಿ, ಮುಚ್ಚಿ ಹಾಕಿದ ಪ್ರಕರಣವೂ ಈಗ ಬೆಳಕಿಗೆ ಬಂದಿದೆ. ಕಳ್ಳತನದಲ್ಲಿ ಸಹೋದರರಿಗೆ ಸಹಾಯ ಮಾಡಿದ್ದ ಶ್ರೀಕಾಂತ (29) ರಾಣೆಬೆನ್ನೂರ ನಿವಾಸಿಯನ್ನು ಬಂಧಿಸಲಾಗಿದೆ.
ಕೊಲೆ, ದೇವಾಲಯದಲ್ಲಿ ಕಳ್ಳತನ, ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ. ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ದೇವಾಲಯ ಕಳ್ಳತನ ಹಾಗೂ ಮಹಿಳೆಯರ ಕೊರಳಲ್ಲಿರುವ ತಾಳಿ ಕಳವು ಪ್ರಕರಣಗಳು ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ವರದಿಯಾಗಿತ್ತು. ಈ ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಆಧಾರದ ಮೇಲೆ ದಿನಾಂಕ 09/09/2024ರಂದು ಲಕ್ಷ್ಮೇಶ್ವರದ ಹೊರವಲಯದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಗೂಗಲ್ ಮ್ಯಾಪ್ ನೆರವಿನಿಂದ ಉತ್ತರ ಕರ್ನಾಟಕ ಭಾಗದ ಹೆಚ್ಚು ಪ್ರಚಾರವಿಲ್ಲದ, ಭದ್ರತೆ ಕಡಿಮೆ ಇರುವ ದೇವಾಲಯಗಳನ್ನು ಹುಡುಕುತ್ತಿದ್ದರು. ಬಳಿಕ ಅಲ್ಲಿ ಕಳ್ಳತನ ನಡೆಸಲು ಯೋಜನೆ ರೂಪಿಸುತ್ತಿದ್ದರು. ಇದೇ ಮಾದರಿಯಲ್ಲಿ ಹಲವು ದೇವಾಲಯಗಳಲ್ಲಿ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿಗಳು ವಿಚಾರಣೆ ವೇಳೆ ಅಂಬಾಭವಾನಿ ದೇವಾಲಯ ಶಿರಹಟ್ಟಿ, ಹೇಮಗಿರಿ ಮಠ ಬನ್ನಿಕೊಪ್ಪ, ಶಿರಹಟ್ಟಿ, ದುರ್ಗಾದೇವಿ ಹಾಗೂ ಮಾರುತಿ ದೇವಾಲಯ ವಡವಿ, ಶಿರಹಟ್ಟಿ. ಹೇಮಗಿರಿ ಚನ್ನಬಸವೇಶ್ವರ ಮಠ ಗುತ್ತಲ ಗ್ರಾಮ, ಹಾವೇರಿ. ಶ್ರೀ ಬನಶಂಕರಿ ದೇವಿ ದೇವಾಲಯ ತುಮ್ಮಿನಕಟ್ಟಿ ಗ್ರಾಮ, ರಾಣೆಬೆನ್ನೂರದಲ್ಲಿ ಕಳ್ಳತನ ಮಾಡಿರುವುದು ಬಯಲಾಗಿದೆ. ಅಲ್ಲದೇ ಗ್ರಾಮದೇವತೆ ದೇವಾಲಯ ನೀರಲಗಿ ಗ್ರಾಮ, ಹಾವೇರಿ. ಶ್ರೀ ಬನಶಂಕರಿ ದೇವಿ ದೇವಾಲಯ ತುಮ್ಮಿನಕಟ್ಟಿ ಗ್ರಾಮ, ರಾಣೆಬೆನ್ನೂರ. ಹಾಲು ರಾಮೇಶ್ವರ ಗಂಗಮ್ಮ ದೇವಾಲಯ ಹೊಸಳ್ಳಿ ಗ್ರಾಮ, ಹೊಸದುರ್ಗದಲ್ಲಿ ಕಳ್ಳತನವನ್ನು ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಲಕ್ಷ್ಮೇಶ್ವರ, ಗದಗ, ವಿಜಯನಗರ ಜಿಲ್ಲೆಯ ಕೊಟ್ಟೂರು, ಹರಪ್ಪನಹಳ್ಳಿ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪ್ಟಣದಲ್ಲಿ ಸರಗಳ್ಳತನ ಮಾಡಿದ ಪ್ರಕರಣಗಳು ದಾಖಲಾಗಿವೆ. ಆರೋಪಿತರು ಒಟ್ಟು 8 ದೇವಾಲಯದ ಕಳ್ಳತನ, 7 ಸರಗಳ್ಳತನ ಮಾಡಿದ್ದು, ಕೃತ ಎಸಗಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಹೋದರ ರಾಮುವನ್ನು 10.05.2023ರಂದು ಕೊಲೆ ಮಾಡಿ ಮುಚ್ಚಿ ಹಾಕಿದ ಬಗ್ಗೆಯೂ ಒಪ್ಪಿಕೊಂಡಿದ್ದಾರೆ.












Click it and Unblock the Notifications