ಎಸ್ಸೆಸ್ಸೆಲ್ಸಿ ಫೇಲಾದವನ ಬದುಕು 15 ವರ್ಷದಿಂದ ಕಗ್ಗತ್ತಲಲ್ಲಿ
ಗದಗ, ಅಕ್ಟೋಬರ್ 28: ಪರೀಕ್ಷೆಯೊಂದರ ಫಲಿತಾಂಶ ಬದುಕನ್ನು ಬದಲಿಸುತ್ತದೆ ಅನ್ನೋದು ಹಲವಾರು ಸಲ ಕೇಳಿಬರುವ ಮಾತು. ಆದರೆ ಆ ಫಲಿತಾಂಶ ಎಂಥ ಬದಲಾವಣೆ ತರುತ್ತದೆ ಎಂಬುದು ಕೂಡ ಮುಖ್ಯವೇ. ಇಲ್ಲೊಂದು ವರದಿಯಿದೆ. ಈ ವರದಿಯಲ್ಲಿನ ಯುವಕನ ಬದುಕನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುದು ಕತ್ತಲೆಗೆ ದೂಡಿ ಹದಿನೈದು ವರ್ಷವಾಗಿದೆ.
ಅಷ್ಟಕ್ಕೂ ಆಗಿದ್ದೇನು ಅಂದರೆ, ಗೆಳೆಯನೊಬ್ಬ ಈತನಿಗೆ "ನೀನು ಎಸ್ಸೆಸ್ಸೆಲ್ಸಿ ಪಾಸಾಗಿದ್ದೀಯಾ" ಎಂದಿದ್ದಾನೆ. ಆದರೆ ಈತ ಫೇಲಾಗಿದ್ದ. ಅದರಿಂದ ಮಾನಸಿಕವಾಗಿ ವಿಚಲಿತನಾದವನು ಮತ್ತೆ ಸರಿಹೋಗಲೇ ಇಲ್ಲ. ವರ್ಷಗಳ ಕಾಲ ಕೈ-ಕಾಲಿಗೆ ಸರಳು ಬಿಗಿದು, ಆತನನ್ನು ಮನೆಯಲ್ಲೇ ಬಂಧಿಸಿಟ್ಟರು. ಅಂತೂ ಆತನಿಗೆ ಮುಕ್ತಿ ಸಿಕ್ಕಿದ್ದು ಅಕ್ಟೋಬರ್ 28ರ ಶನಿವಾರ.
ಕಾಡಲ್ಲಿ ಅರ್ಧ ಶತಕ ಕಳೆದ ಕೆಂಚಪ್ಪ ಇನ್ನು ನೆನಪು ಮಾತ್ರ
ಗದಗ ಜಿಲ್ಲೆ, ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿನ ಈ ಯುವಕನ ಬಗ್ಗೆ ವಿವರ ತಿಳಿದಷ್ಟೂ ಹಿಂಸೆಯಾಗುತ್ತದೆ. ಈತನ ಹೆಸರು ಶರಣಪ್ಪ ಸಿದ್ದಪ್ಪ ಮಾದರ. 2002ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂಬ ಕಾರಣಕ್ಕೆ ಆಘಾತಕ್ಕೆ ಒಳಗಾಗಿ ಮಾನಸಿಕ ಅಸ್ವಸ್ಥನಾದವನು.
ಆ ನಂತರ ಗ್ರಾಮದಲ್ಲಿ ಅವರಿವರ ಮೇಲೆ ಹಲ್ಲೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಕುಟುಂಬ ಸದಸ್ಯರು ಗೃಹ ಬಂಧನದಲ್ಲಿ ಇರಿಸಿದರು. ಚಿಕಿತ್ಸೆ ಕೊಡಿಸುವುದಕ್ಕೆ ಕಡು ಬಡತನವಿತ್ತು. ಕೊನೆಗೆ ಅವರೇ ಕಂಡುಕೊಂಡ ದಾರಿ ಏನೆಂದರೆ ಈ ಯುವಕನಿಗೆ ಬೇಡಿ ಹಾಕಿ, ಮನೆಯಲ್ಲಿ ಬಂಧನದಲ್ಲಿ ಕೂಡಿಡಬೇಕು ಎಂಬುದು.
ಆ ಕ್ಷಣ ಯಾರಾದರೊಬ್ಬರು ನಿಲ್ಲಿಸಿ ಮಾತನಾಡಿಸಿದ್ದರೆ!
ಶರಣಪ್ಪನ ಸ್ಥಿತಿ ಕಂಡು ತಂದೆ ಸಿದ್ದಪ್ಪ ಅದೇ ಚಿಂತೆಯಲ್ಲಿ ಸಾವನ್ನಪ್ಪಿದ್ದಾರೆ. ಬಡತನ ಚಿಕಿತ್ಸೆಗೆ ಅಡ್ಡಿಯಾಗಿದೆ. ಯಾರಿಗೂ ತೊಂದರೆ ಆಗದಿರಲಿ ಎಂಬ ಏಕೈಕ ಕಾರಣಕ್ಕೆ ಗೃಹ ಬಂಧನದಲ್ಲಿ ಇಟ್ಟಿದ್ದೇವೆ ಎಂಬುದು ಕುಟುಂಬ ಸದಸ್ಯರ ಮಾತು.
ತಾಯಿ, ತಂಗಿಯ ಮೇಲೂ ಪರಿಣಾಮ
ಮಗನ ಮಾನಸಿಕ ಅಸ್ವಾಸ್ಥ್ಯದ ಪರಿಣಾಮವನ್ನು ತಾಯಿಯೂ ಅನುಭವಿಸಿದ್ದಾರೆ. ಮಗನಿಂದಲೇ ಕಾಲು ಮುರಿದುಕೊಂಡು ತಾಯಿ ಕೂಡಾ ಮನೆ ಹಿಡಿದಿದ್ದಾರೆ. ಈ ಯುವಕನ ತಂಗಿಯ ಬದುಕು ಕೂಡ ಬಿರುಗಾಳಿಗೆ ಸಿಲುಕಿದೆ. ಈಗ ಈ ಕುಟುಂಬದವರು ಅಂದಿನ ದುಡಿಮೆ ಮಾಡಿ, ಊಟ ಕಂಡುಕೊಳ್ಳುವ ಸ್ಥಿತಿ ಇದೆ.
ಚಿಕಿತ್ಸೆಗೆ 60 ಸಾವಿರ ಖರ್ಚಾಗುತ್ತದೆ
ಈ ಮಧ್ಯೆ ಚಿಕಿತ್ಸೆಗಾಗಿ ಶರಣಪ್ಪನನ್ನು ಧಾರವಾಡಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆಗೆ 60 ಸಾವಿರ ಖರ್ಚಾಗುತ್ತದೆ ಎಂದು ಗೊತ್ತಾದ ಮೇಲೆ ಕೈ ಚೆಲ್ಲಿದ್ದಾರೆ. ತಾಯಿ ಗ್ರಾಮದಲ್ಲಿ ಭಿಕ್ಷಾಟನೆ ಮಾಡಿ ಮಗನಿಗೆ ಆಹಾರವನ್ನು ತಂದು ಕೊಡುತ್ತಾರೆ. ದಾನಿಗಳು ಸಹಕರಿಸಿದರೆ ಈತನಿಗೆ ಉತ್ತಮ ಚಿಕಿತ್ಸೆ ಕೊಡಿಸಬಹುದು ಎಂದು ಸಂಬಂಧಿಗಳು ಹೇಳುತ್ತಾರೆ.
ಆರೋಗ್ಯ ತಪಾಸಣೆ
ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ, ಶರಣಪ್ಪನ ಆರೋಗ್ಯ ತಪಾಸಣೆ ಮಾಡಿದ್ದಾರೆ. ಯುವಕನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಗದಗ ನಗರಕ್ಕೆ ಕರೆತರಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಯಮುನವ್ವಗೆ ಮಾಸಾಶನ
ಶರಣಪ್ಪನ ತಂಗಿ ಯಮುನವ್ವ ಮಾದಾರ್ ಗೆ ಆಶ್ರಯ ಯೋಜನೆಯಲ್ಲಿ ಮನೆ ಹಾಗೂ ಮಾಸಾಶನ ಕೊಡಿಸುವುದಾಗಿ ರೋಣ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಆರ್.ಬೇವಿನಮರದ್ ಹೇಳಿದ್ದಾರೆ.