ಗಜೇಂದ್ರಗಡದಲ್ಲಿ ರೆಡ್ಡಿ ಸಹೋದರರ ಮೇಲೆ ಬೆಂಕಿ ಉಗುಳಿದ ರಾಹುಲ್ ಗಾಂಧಿ
ಗದಗ, ಮೇ 04: ಇಂದು ಬೆಳಿಗ್ಗೆ ಕಲಬುರಗಿಯಲ್ಲಿ ಮಾಡಿದ ಭಾಷಣವನ್ನೇ ತಿರುಗು ಮುರುಗು ಮಾಡಿ ಮಾತನಾಡಿದ ಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿ 8 ರೆಡ್ಡಿ ಸಂಬಂಧಿಗಳಿಗೆ ಟಿಕೆಟ್ ಏಕೆ ನೀಡಿದೆ ಎಂದು ಖಾರವಾಗಿ ಪ್ರಶ್ನಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಶುಕ್ರವಾರ 'ಕಾಂಗ್ರೆಸ್ ಮತ್ತೊಮ್ಮೆ' ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷವು ಕಳ್ಳರನ್ನು ವಿಧಾನಸಭೆ ಪ್ರವೇಶಿಸಲು ಬಿಡುವುದಿಲ್ಲ, ನಾವು ರೆಡ್ಡಿ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳನ್ನು ಬಿಜೆಪಿ ಶಾಸಕರಿಂದ ರಕ್ಷಿಸಿ: ರಾಹುಲ್ ಗಾಂಧಿ
ಅಕ್ರಮ ಗಣಿಗಾರಿಕೆಯ ಆರೋಪಿ ಜನಾರ್ದನ ರೆಡ್ಡಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ರೆಡ್ಡಿ ಸಹೋದರರು ಕೊಳ್ಳೆ ಹೊಡೆದ ಹಣ ರೈತರ ಹಣ, ಆ ಹಣದಿಂದ ರೈತರ ಸಾಲ ಮನ್ನಾ ಮಾಡಬೇಕಿತ್ತು ಎಂದರು.
ಕಾಂಗ್ರೆಸ್ ಪಕ್ಷ ಈ ಬಾರಿ ಚುನಾವಣೆ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಎಲ್ಲರೂ ಬಸವಣ್ಣನ ಆದರ್ಶದ ದಾರಿಯಲ್ಲಿ ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದರು.
ದೇಶ ಬಿಟ್ಟು ಪರಾರಿಯಾಗಿರುವ ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಸ್ಕಿ ಅವರುಗಳ ಹೆಸರುಗಳನ್ನು ಉಲ್ಲೇಖ ಮಾಡಿದ ರಾಹುಲ್ ಗಾಂಧಿ, ಅವರುಗಳ ಸಾಲವನ್ನು ನರೇಂದ್ರ ಮೋದಿ ಮನ್ನಾ ಮಾಡಿದ್ದಾರೆ, ಅವರ ಬಗ್ಗೆ ಮೋದಿ ತುಟಿ ಬಿಚ್ಚುತ್ತಲೇ ಇಲ್ಲ ಎಂದು ಆರೋಪ ಮಾಡಿದರು.
ದಲಿತ ಖರ್ಗೆಯನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದ ಮೋದಿಗೆ ಖರ್ಗೆ ಉತ್ತರ
ಸಿದ್ದರಾಮಯ್ಯ ಸರ್ಕಾರ ಈಗಾಗಲೇ ರೈತರ ಸಾಲವನ್ನು ಮನ್ನಾ ಮಾಡಿದ್ದು, ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕೇವಲ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ, ನುಡಿದಂತೆ ನಡೆಯಲಿದ್ದೇವೆ ಎಂದು ಅವರು ಭರವಸೆ ನೀಡಿದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಹೊಗಳಿದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ರೈತರ ಸಾಲ ಮನ್ನಾ ಮಾಡಿದ್ದಾರೆ, ದಲಿತರ ಮತ್ತು ಅಲ್ಪಸಂಖ್ಯಾತರ ಪ್ರಗತಿಗೆ ದೇಶವೇ ಮಾದರಿಯಾಗುವಂತಹ ಕಾರ್ಯ ಮಾಡಿದೆ. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದೆ ಎಂದು ಸಿದ್ದರಾಮಯ್ಯ ಸರ್ಕಾರದ ಸಾಧನೆಗಳ ಪಟ್ಟಿ ನೀಡಿದರು.