ನಾಟಕ ಬಿಡಿ: ಆರ್ಎಸ್ಎಸ್ ಕಚೇರಿ ಮೇಲೆ ತಿರಂಗಾ ಹಾರಿಸಿ- ಶಿವರಾಜ ತಂಗಡಗಿ
ಕೊಪ್ಪಳ, ಆಗಸ್ಟ್, 08: ದೇಶದಲ್ಲಿ 75ನೇ ಅಮೃತ ಮಹೋತ್ಸವದ ಸ್ವಾತಂತ್ರೋತ್ಸವಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಈ ಬಗ್ಗೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, 'ಹರ್ ಘರ್ ತಿರಂಗಾ' ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಹಿಂದೆ ಈಶ್ವರಪ್ಪ ಭಗವದ್ವಜ ಹಾರಿಸುವುದಾಗಿ ಹೇಳಿದ್ದರು. ಅದನ್ನು ಮೊದಲು ಆರ್ಎಸ್ಎಸ್ ಕಚೇರಿಯ ಮೇಲೆ ಹಾರಿಸಿ. ನಾಲ್ಕು ಜನ ಗುಜರಾತಿಗಳು ದೇಶವನ್ನು ಮಾರಾಟ ಮಾಡಲು ಹೊರಟಿದ್ದಾರೆ. ಮತ್ತೊಂದೆಡೆ ನೂತನ ಸಂಸತ್ ಭವನದ ಮೇಲೆ ಸಿಂಹ ಲಾಂಚನವನ್ನು ಸ್ಥಾಪಿಸಿದ್ದಾರೆ. ಈ ಸಿಂಹಗಳು ಬಾಯಿ ತೆಗೆದಿದ್ದು, ಅದೇ ರೀತಿ ಬಿಜೆಪಿಯವರು 40 ಪರ್ಸೆಂಟ್ ಹಣಕ್ಕಾಗಿ ಬಾಯಿ ತೆಗೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಷ್ಟ್ರ ಧ್ವಜ, ಅಶೋಕ ಚಕ್ರಕ್ಕೆ ಅದರದ್ದೇ ಆದ ನಿಯಮವಿದೆ. ಈ ನಿಯಮ ಪಾಲನೆ ಮಾಡದೆ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಸಿದ್ದು, ಹಿಂದೂ, ಮುಸ್ಲಿಂರ ನಡುವೆ ಜಗಳ ಹಚ್ಚುವ ಸಿನಿಮಾಕ್ಕೆ ತೆರಿಗೆ ತೆಗೆದಿದ್ದಾರೆ. ಆದರೆ ಇವರು ತಿನ್ನುವ ಆಹಾರಕ್ಕೆ ತೆರಿಗೆ ಹಾಕಿದ್ದು, ಇದನ್ನೂ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದರು. ಇನ್ನು ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದಿಂದ ಬಿಜೆಪಿಯಲ್ಲಿ ನಡುಕ ಉಂಟಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲಲಿದ್ದು, ಕೊಪ್ಪಳದಲ್ಲಿ 5 ಸ್ಥಾನ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿರುದ್ಯೋಗ ಮುಕ್ತ ದೇಶವನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಎಷ್ಟೋ ಜನ ಯುವಕರು ಈಗಲೂ ಉದ್ಯೋಗ ಇಲ್ಲದೇ ಬೀದಿಗೆ ಬರುತ್ತಿದ್ದಾರೆ. ಮೋದಿ ಅವರಿಗೆ ಸರಿಯಾಗಿ ಗೊತ್ತಿರುವುದು ಅಂದರೆ ದೆಹಲಿಯಿಂದ ಬೆಂಗಳೂರಿಗೆ ಬಂದ ಮೇಲೆ ಒಂದು ರೀತಿಯ ಬಟ್ಟೆ, ಬೆಂಗಳೂರಿನಲ್ಲಿ ಒಂದು ರೀತಿಯ ಬಟ್ಟೆ ಹಾಕಿಕೊಳ್ಳುವು ಮಾತ್ರ. ಇವರು ಸಾಮಾನ್ಯ ರೀತಿಯ ವ್ಯಕ್ತಿನಾ? ಎಂದು ಪ್ರಶ್ನಿಸುವುದರ ಮೂಲಕ ಶಿವರಾಜ ತಂಗಡಗಿ ಕಿಡಿಕಾರಿದರು. ಇನ್ನು ರಾಹುಲ್ ಗಾಂಧಿ ಅವರು ಸಾಮಾನ್ಯರಂತೆ ಖಾದಿ ಬಟ್ಟೆ ಧರಿಸುವುದರ ಮೂಲಕ ಎಲ್ಲರೊಂದಿಗೆ ಬೆರೆಯುತ್ತಾರೆ. ಆದರೆ ಪ್ರಧಾನಿ ಮೋದಿ ಅವರು ಮಾತುಗಳಲ್ಲೇ ಜನರಿಗೆ ಮೋಡಿ ಮಾಡುತ್ತಾ ಬಂದಿದ್ದಾರೆ ಎಂದು ಹರಿಹಾಯ್ದರು.