ಅಗಲಿದ ಮಗನ ಹೆಸರಲ್ಲಿ ಲೇಔಟ್ ನಿರ್ಮಿಸಿ ಬಡವರಿಗೆ, ವಸತಿ ರಹಿತರಿಗೆ ನಿವೇಶನ ದಾನ
ಗದಗ, ಅಕ್ಟೋಬರ್ 1 : ಮದುವೆಯಾಗಿ ಕೆಲವು ವರ್ಷಗಳ ನಂತರ ಹುಟ್ಟಿದ್ದ ಮಗುವನ್ನು ಕಳೆದುಕೊಂಡ ಪೋಷಕರು ತಮ್ಮ ಹಿರಿಯಿಂದ ಬಳುವಳಿಯಾಗಿ ಬಂದಿದ್ದ ಜಮೀನನ್ನು ಮಗನ ಹೆಸರಲ್ಲಿ ಲೇಔಟ್ಗಳಾಗಿ ನಿರ್ಮಿಸಿ ತನ್ನ ಕಂದಮ್ಮನ ತಿಥಿಯ ದಿನದಂದು ಬಡವರಿಗೆ, ವಸತಿರಹಿತ ಜನರಿಗೆ ನೀಡಿ ತಮ್ಮ ಮಗನ ಹೆಸರನ್ನು ಶಾಶ್ವತವಾಗಿ ನೆಲೆಯೂರಿಸು ಕೆಲಸ ಮಾಡಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ದ್ಯಾಮಣ್ಣ ನೀರಲಗಿ ಹಾಗೂ ಜ್ಯೋತಿ ನೀರಲಗಿ ದಂಪತಿ, ಗ್ರಾಮದಲ್ಲಿ ಜೀವನ್ ಹೆಸರಿನ ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ. ಲೇಔಟ್ನಲ್ಲಿ ಸುಮಾರು 40 ಸೈಟ್ ನಿರ್ಮಿಸಿ ಬಡವರಿಗೆ ವಸತಿ ರಹಿತರಿಗೆ ಉಚಿತವಾಗಿ ದಾನ ಮಾಡಬೇಕು ಎಂದುಕೊಂಡಿದ್ದಾರೆ. ಈ ಮೂಲಕ ಬಾಲ್ಯದಲ್ಲೇ ಇಹ ಲೋಕ ತೈಜಿಸಿದ ತಮ್ಮ ಮಗ 'ಜೀವನ್' ಹೆಸರನ್ನು ಗ್ರಾಮಸ್ಥರು ಶ್ವಾಶ್ವತವಾಗಿ ನೆನಪ್ಪಿಟ್ಟುಕೊಳ್ಳುವಂತೆ ಮಾಡುವ ಕೆಲಸ ಮಾಡುತ್ತಿದ್ದಾರೆ.
ಅಲ್ಪಾಯುವಾಗಿದ್ದ ಜೀವನ್ 6 ವರ್ಷದ ವಯೋಮಾನದಲ್ಲೇ ಅನಾರೋಗ್ಯಕ್ಕೆ ತುತ್ತಾಗಿ ಜೀವನದ ಪಯಣ ಮುಗಿಸಿದ್ದ. ದ್ಯಾಮಣ್ಣ ನೀರಲಗಿ ಹಾಗೂ ಜ್ಯೋತಿ ಮದುವೆಯಾಗಿ ಎಂಟು ವರ್ಷದ ಬಳಿಕ ಜೀವನ್ ಹುಟ್ಟಿದ್ದರಿಂದ ನೀರಲಗಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಒಂದು ವರ್ಷ ಆರೋಗ್ಯವಾಗಿದ್ದ ಜೀವನ್ ನಂತರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ. 2019 ಡಿಸೆಂಬರ್ 21 ರಂದು ಮೆದುಳು ಜ್ವರದಿಂದ ಮಗು ಕೊನೆಯುಸಿರೆಳೆದಿತ್ತ.
ಬಡವರ ಮಕ್ಕಳಲ್ಲಿ ಜೀವನ್ನ ಪ್ರತಿರೂಪ ಕಾಣಬೇಕು
ಮಗುವಿನ ಚಿಕಿತ್ಸೆಗೆ ಎಂದು ಮಾಡಿದ್ದ ಸಾಲವನ್ನು ಮೂರು ಎಕರೆ ಜಮೀನು ಮಾರಾಟ ಮಾಡಿ, ದ್ಯಾಮಣ್ಣ ನೀರಲಗಿ ತೀರಿಸಿದ್ದಾರೆ. ಸದ್ಯ ಇರುವ ಐದು ಎಕರೆ ಜಾಗದಲ್ಲಿ ಒಂದು ಎಕರೆಯಲ್ಲಿ ಲೇಔಟ್ ಮಾಡಿ ದಾನ ಮಾಡಬೇಕು ಎನ್ನುವ ಕನಸ್ಸು ಕಟ್ಕೊಂಡಿದಾರೆ. ಒಂದು ಮಗುವನ್ನು ದತ್ತು ಪಡೆದು ಸಾಕುವುದಕ್ಕಿಂತ, ಕಡು ಬಡವರ ಕನಸ್ಸಿನ ಮನೆಗೆ ಜಾಗ ಕೊಟ್ಟು ಅವರ ಮಕ್ಕಳಲ್ಲಿ ಜೀವನ್ನ ಪ್ರತಿರೂಪ ಕಾಣಬೇಕು ಎಂಬುವುದು ಜ್ಯೋತಿ ಮನದಾಳದ ಮಾತಾಗಿದೆ.
ಪುಣ್ಯ ಸ್ಮರಣೆಯಂದ 40 ಕುಟುಂಬಕ್ಕೆ ಸೈಟ್ ವಿತರಣೆ
ಡಿಸೆಂಬರ್ 21 ನೇ ತಾರೀಕು ಮಗುವಿನ ಮೂರನೇ ಪುಣ್ಯ ಸ್ಮರಣೆ ದಿನದಂದೇ ಗ್ರಾಮದ ವಸತಿ ರಹಿತ 40 ಕುಟುಂಬಗಳಿಗೆ ನಿವೇಶನ ನೀಡುವ ಯೋಜನೆಯನ್ನು ದ್ಯಾಮಣ್ಣ ಹಾಕ್ಕೊಂಡಿದಾರೆ. ಸರ್ವೆ ನಂಬರ್ 224/1ರಲ್ಲಿ ಎರಡು ಎಕರೆ ಜಾಗ ಇದೆ. ಅದರಲ್ಲಿ 1 ಎಕರೆ ಜಾಗದಲ್ಲಿ 18/30 ವಿಸ್ತೀರ್ಣದ 40 ಸೈಟ್ ನಿರ್ಮಾಣ ಮಾಡುವುದಕ್ಕೆ ದ್ಯಾಮಣ್ಣ ಮುಂದಾಗಿದಾರೆ.
ಹಿರಿಯರ ಸಮ್ಮುಖದಲ್ಲೇ ಅರ್ಹರ ಆಯ್ಕೆ
ಸೂರಣಗಿ ಗ್ರಾಮದ 40 ಕಡು ಬಡವರನ್ನು ಆರಿಸಿ ನಿವೇಶನ ಹಂಚುವುದಕ್ಕೆಯೋಜನೆ ರೂಪಿಸಿಕೊಂಡಿದ್ದಾರೆ. ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲೇ ಅರ್ಹರ ಆಯ್ಕೆಯಾಗುತ್ತದೆ. ಉಳಿದಂತೆ ಗ್ರಾಮದ ಮಹಿಳಾ ಸಂಘ, ಯುವಕ ಮಂಡಳ, ದೇವಸ್ಥಾನಕ್ಕೂ ಜಾಗವನ್ನ ಮೀಸಲಿಡಲು ಯೋಚನೆ ನಡೆದಿದೆ. ಒಂದುಕಡೆ ಎನ್ಎ ಮಾಡಿಸುವುದಕ್ಕೆ ತಯಾರಿ ನಡೆದಿದ್ದರೆ, ಮತ್ತೊಂದುಕಡೆ ನಿವೇಶನ ರಹಿತ ಗ್ರಾಮಸ್ಥರಿಂದ ಅರ್ಜಿ ಪಡೆಯಲಾಗುತ್ತಿದೆ.
2 ಎಕರೆ ಜಮೀನನಲ್ಲಿ 40 ಕುಂಟೆ ದಾನ
ನನ್ನ ಮಗನ ಸವಿನೆನಪಿಗಾಗಿ ನಮ್ಮ 2 ಎಕರೆ ಜಮೀನನಲ್ಲಿ 40 ಕುಂಟೆ ಜಮೀನನ್ನು ಬಡ ಕುಟುಂಬಕ್ಕೆ 18*30ರ ಅಳತೆಯ 40 ಸೈಟ್ಗಳನ್ನು ನೀಡಲು ನಿರ್ಧರಿಸಿದ್ದೇವೆ. ಉಳಿದ ಜಮೀನನ್ನು ನಮ್ಮ ಜೀವನೋಪಾಯಕ್ಕೆ ಉಳಿಸಿಕೊಂಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಜೀವನ ಚೆನ್ನಾಗಿದ್ದರೆ ಈ ಜಮೀನನ್ನು ನೀಡುವ ಆಲೋಚನೆಯಿದೆ. ನಮ್ಮ ಈ ಕಾರ್ಯಕ್ಕೆ ಗ್ರಾಮಸ್ಥರು ನನ್ನ ಕಾರ್ಯಕ್ಕೆ ನೆರವಾಗಿ ಎನ್ಎ ಮಾಡಲು ಸಹಕರಿಸಬೇಕು ಎಂದು ದ್ಯಾಮಣ್ಣ ವಿನಂತಿಸಿಕೊಂಡಿದ್ದಾರೆ.