ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಲಿ: ಕಾಂಗ್ರೆಸ್ಗೆ ನಳೀನ್ ಕುಮಾರ್ ಕಟೀಲ್ ಸವಾಲ್
ಗದಗ, ಏಪ್ರಿಲ್ 27: 2023ರ ಚುನಾವಣೆಯಲ್ಲಿ ನಾವು ಬಹುಮತದ ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ಇಡೀ ರಾಜ್ಯದಲ್ಲಿ ಅಭೂತಪೂರ್ವ ಅಲೆ ಇದೆ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಜನರಿಗೆ ಒಲವಿದೆ. ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ನಾಯಕತ್ವದಲ್ಲಿ ಅಭೂತಪೂರ್ವ ಯಶಸ್ಸು ಪಡೆಯಲಿದೆ. ಹಿಂದೆ ನಮ್ಮದು ಬಹುಮತದ ಸರ್ಕಾರ ಆಗಿರಲಿಲ್ಲ. ಆದರೆ, ಈ ಬಾರಿ ಬಹುಮತದ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಭವಿಷ್ಯ ನುಡಿದರು.

ಈ ಬಾರಿ ಗದಗ ಜಿಲ್ಲೆಯಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ನಿರಾಸೆಯಾಗಿದೆ. ತುಷ್ಠಿಕರಣದ ರಾಜನೀತಿ ಹಾಗೂ ಭ್ರಷ್ಟಾಚಾರದಿಂದ ಜನ ಅವರನ್ನು ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಭಯೋತ್ಪಾದನೆಗೆ ಬೆಂಗಾವಲಾಗಿ ನಿಂತಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಹಿಂದೂಗಳ ಹತ್ಯೆ ಆಗಿದೆ. ಜೈಲಲ್ಲಿರಬೇಕಾದ್ದ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದಾರೆ. ನಿರಂತರ ಗೋ ಹತ್ಯೆ. ಇದರ ವಿರುದ್ಧ ಗಟ್ಟಿಯಾಗಿ ತೀರ್ಮಾನ ತೆಗೆದುಕೊಳ್ಳದ ಕಾಂಗ್ರೆಸ್ ನಾಯಕರು, ಭಯೋತ್ಪಾದನೆಗೆ ತುಷ್ಠೀಕರಣ ಮಾಡಿದ್ದಾರೆ.
ಗರೀಬಿ ಹಠಾವೋ ಯೋಜನೆ ತಂದು ಕೇವಲ ಮತ ಪಡೆದರು. ಆದರೆ ಯಾವುದೇ ಯೋಜನೆ ಅನುಷ್ಠಾನ ಆಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅವರದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಬಿದ್ದರೂ ಮನೆಗೆ ಭೇಟಿ ಕೊಡಲಿಲ್ಲ. ಆ ಪ್ರಕರಣದಲ್ಲಿದ್ದ ಸಂಪತ್ ರಾಜ್ನನ್ನು ಪಕ್ಷದಿಂದ ಉಚ್ಛಾಟನೆಯೂ ಮಾಡಲಿಲ್ಲ. ಅಖಂಡ ಶ್ರೀನಿವಾಸ ಮೂರ್ತಿಗೆ ಯಾವ ಸ್ಥಾನ ಕೊಡದೇ ಅವರು ಕಣ್ಣೀರು ಹಾಕುವಂತೆ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಈ ಪ್ರದೇಶದಲ್ಲಿ ಗೂಂಡಾಗಿರಿ ರಾಜಕಾರಣ ನೋಡಿದ್ದೇವೆ. ನಾಮಪತ್ರ ಸಲ್ಲಿಕೆ ಮಾಡುವ ವೇಳೆ ನಮ್ಮ ಅಭ್ಯರ್ಥಿ ಮೇಲೆ ಹಲ್ಲೆ ಪ್ರಯತ್ನ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಗೂಂಡಾಗಿರಿಯಿಂದ ಈ ಕ್ಷೇತ್ರ ಗೆಲ್ಲಬಹುದೆಂದು ಪ್ರಯತ್ನ ಮಾಡಿದ್ದಾರೆ. ಆದರೆ ನಮ್ಮ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಈ ಬಾರಿ ಇಲ್ಲಿ ಗೆಲ್ಲುತ್ತಾರೆ ಎಂದು ಭರವಸೆ ನೀಡಿದರು.
ಸಮಾಜವನ್ನು ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಧಿಕಾರ ಇದ್ದಾಗ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಿದೆ. ಅಧಿಕಾರ ಬಿಟ್ಟಾಗ ಸಿದ್ದರಾಮಯ್ಯ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಇದೆಲ್ಲವನ್ನು ಜನ ಮನಗಂಡು ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಲಿಂಗಾಯತರ ಬಗ್ಗೆ ಮಾತನಾಡುವವರು ಅವರು ಗೆದ್ದರೆ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಲಿ ಎಂದು ನಳೀನ್ ಕುಮಾರ್ ಕಟೀಲ್ ಸವಾಲು ಹಾಕಿದರು.
ಬಿಜೆಪಿಯಲ್ಲಿ ಸದ್ಯ ಸಿ.ಟಿ ರವಿ ಹಾಗೂ ಆರ್.ಅಶೋಕ ಸಿಎಂ ಚರ್ಚೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಾರ್ಟಿಯಲ್ಲಿ ಯಾವ ಸಿಎಂ ಚರ್ಚೆಗೂ ಅವಕಾಶವಿಲ್ಲ. ಈಶ್ವರಪ್ಪ ಹಾಗೂ ಆ ರೀತಿ ಹೇಳಿಕೆ ನೀಡುವವರನ್ನು ಕರೆಸಿ ಮಾತನಾಡುತ್ತೇನೆ. ನಮ್ಮ ಪಾರ್ಟಿಯಲ್ಲಿ ಸದ್ಯ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಎಲ್ಲವನ್ನೂ ಪಾರ್ಲಿಮೆಂಟ್ರಿ ಬೋರ್ಡ್ ಯೋಚನೆ ಮಾಡುತ್ತದೆ. ರಾಷ್ಟ್ರೀಯ ನಾಯಕತ್ವ ಘೋಷಣೆ ಮಾಡುತ್ತದೆ ಎಂದರು.
ಮತ್ತೊಮ್ಮೆ ಲಿಂಗಾಯತ ಸಿಎಂ ಹೇಳಿಕೆ ವಿಚಾರ ಪ್ರಸ್ತಾಪಿಸಿದ ನಳೀನ್ ಕುಮಾರ್ ಕಟೀಲ್, ಈಗಾಗಲೇ ಬಿಜೆಪಿಯೇ ಲಿಂಗಾಯತ ಮುಖ್ಯಮಂತ್ರಿಗಳನ್ನು ಮಾಡಿದೆ. ಮುಂದೆಯೂ ಸಹ ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡುತ್ತದೆ. ಇದನ್ನೇ ಸಿದ್ರಾಮಣ್ಣ ಅಥವಾ ಡಿಕೆಶಿ ಶಕ್ತಿ ಇದ್ದರೆ ಹೇಳಲಿ. ಬಿಜೆಪಿಯಲ್ಲಿಯೇ ಮೂರು ಸಾರಿ ಲಿಂಗಾಯತ ಸಿಎಂ ಮಾಡಿದ್ದೇವೆ. ಮುಂದೆ ಮತ್ತೆ ಅಧಿಕಾರಕ್ಕೆ ಬಂದರೆ ಬಿಜೆಪಿಯಲ್ಲಿ ಲಿಂಗಾಯತರನ್ನೇ ಸಿಎಂ ಮಾಡುತ್ತೇವೆ ಎಂದು ಹೇಳಿದರು.












Click it and Unblock the Notifications