ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವೆ; ಬಿ.ವೈ. ವಿಜಯೇಂದ್ರ
ಗದಗ, ಜನವರಿ, 01: ಪಕ್ಷ ನನಗೆ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟಿದೆ. ಯಡಿಯೂರಪ್ಪ ಅವರ ಮಗ ಅನ್ನುವ ಬಗ್ಗೆ ನನಗೆ ಹೆಮ್ಮೆಯಿದೆ. ಬಿಎಸ್ವೈ ಮಗ ಅನ್ನುವ ಕಾರಣಕ್ಕೆ ಕಾರ್ಯಕರ್ತರು ಪ್ರೀತಿಯಿಂದ ಮಾತನಾಡಿಸುತ್ತಾರೆ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಗದಗದಲ್ಲಿ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದೇನೆ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ವಿಜಯೇಂದ್ರಗೆ ಹಿನ್ನೆಡೆ ಅಗಿದೆ ಅನ್ನುವುದು ಸತ್ಯಕ್ಕೆ ದೂರವಾದ ಮಾತು. ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡುವ ಕೆಲಸ ನಡೆಯುತ್ತಿದೆ. ಪ್ರತಿಪಕ್ಷದವರೂ ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತಾನಾಡಿದ್ದಾರೆ. ಅದೇ ರೀತಿ ಜನಾರ್ದನ್ ರೆಡ್ಡಿ ಅವರೂ ಕೂಡ ಒಳ್ಳೆಯ ಮಾತಾನಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ : ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಇದರ ಅರ್ಥ ಜನರ್ದನ್ ರೆಡ್ಡಿ ಪಕ್ಷಕ್ಕೆ ಯಡಿಯೂರಪ್ಪ ಅವರ ಬೆಂಬಲ ಇದೆ ಅಂತಲ್ಲ. ಯಡಿಯೂರಪ್ಪ ಅವರು ಹಿಂದೆ ನಿಂತು ರಾಜಕೀಯ ಮಾಡಿದವರಲ್ಲ. ನೇರವಾಗಿ ರಾಜಕಾರಣ ಮಾಡುವ ಎದೆಗಾರಿಕೆ ಯಡಿಯೂರಪ್ಪ ಅವರಿಗೆ ಇದೆ. ಪಕ್ಷ ಕರೆದ ಸಭೆಗೆ ಹಾಜರಾಗಬೇಕಾಗಿದ್ದು ನನ್ನ ಕರ್ತವ್ಯವಾಗಿದೆ. ಕಾರಣಾಂತರಗಳಿಂದ ಸರಿಯಾದ ಸಮಯಕ್ಕೆ ತಲುಪಲಾಗಲಿಲ್ಲ. ಯಡಿಯೂರಪ್ಪ ಅವರ ವಿದೇಶ ಪ್ರವಾಸ ಪೂರ್ವ ನಿಯೋಜಿತವಾಗಿದೆ. ಅಮಿತ್ ಶಾ ಅವರ ಕಾರ್ಯಕ್ರಮ ವಾರದ ಹಿಂದೆ ತೀರ್ಮಾನ ಆಗಿತ್ತು. ಯಡಿಯೂರಪ್ಪ ಅವರು ಅಮಿಶಾ ಜೊತೆ ದೂರವಾಣಿಯಲ್ಲಿ ಮಾತಾನಾಡಿದ್ದಾರೆ. ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲ. ಯಡಿಯೂರಪ್ಪ ಸಂತೋಷದಿಂದ ಪಕ್ಷ ಸಂಘಟನೆಯಲ್ಲಿದ್ದಾರೆ. ರಾಜ್ಯ, ದೇಶದಲ್ಲಿ ಇಷ್ಟು ವರ್ಷ ಯಾರು ಅಧಿಕಾರದಲ್ಲಿದ್ದರು ಅನ್ನುವುದು ಜನರಿಗೆ ಗೊತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕುತೂಹಲ ಮೂಡಿಸಿದ್ದ ರೆಡ್ಡಿ ನಡೆ
ಗೃಹ ಪ್ರವೇಶದ ನಂತರ ಮೊದಲ ಬಾರಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಗಂಗಾವತಿಗೆ ಆಗಮಿಸಿದ್ದು, ಟಂಪಲ್ ರನ್ ಮುಂದುವರೆಸಿದ್ದಾರೆ. ಇತ್ತೀಚೆಗಷ್ಟೇ ದೇವಸ್ಥಾನದ ಮತ್ತು ದರ್ಗಾಕ್ಕೆ ಭೇಟಿ ನೀಡಿದ್ದ ಜನಾರ್ದನ ರೆಡ್ಡಿ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ತೀವ್ರ ಕುತೂಹಲ ಮೂಡಿತ್ತು. ದೆಹಲಿ ಪ್ರವಾಸದ ನಂತರ ರಾಜ್ಯಾದ್ಯಂತ ಓಡಾಡುತ್ತಿರುವ ಜನಾರ್ದನ ರೆಡ್ಡಿ ಕಳೆದ ಗುರುವಾರ ಗಂಗಾವತಿಗೆ ಆಗಮಿಸಿದ್ದರು. ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಬಿಜೆಪಿ ಸ್ಥಳೀಯ ಮುಖಂಡರ ಜೊತೆ ಕಾಣಿಸಿಕೊಂಡಿದ್ದರು. ಜನಾರ್ದನ ರೆಡ್ಡಿ ಗಂಗಾವತಿಯ ಕರ್ನೂಲ್ ಬಾಬಾ ದರ್ಗಾ ಸೇರಿ ವಿವಿಧ ಮಸೀದಿಗೆ ಭೇಟಿ ನೀಡಿದ್ದರು. ಜೊತೆಗೆ ಮುಸ್ಲಿಂ ಮುಖಂಡರೊಬ್ಬರ ಗೃಹ ಪ್ರವೇಶದಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್ ಪಾಳೆಯದಲ್ಲೂ ಗೊಂದಲ ಸೃಷ್ಟಿಸಿದ್ದರು. ಜನಾರ್ದನ್ ರೆಡ್ಡಿಯ ಈ ನಡೆ ಸಾಕಷ್ಟು ಕುತೂಹಲ ಮೂಡಿಸಿತ್ತು. ರಾಜಕೀಯ ಕುರಿತು ಎಲ್ಲಾ ಪ್ರಶ್ನೆಗಳಿಗೂ ಡಿಸೆಂಬರ್ 25ರ ಕಡೆ ಕೈ ತೋರಿಸಿರುವ ಜನಾರ್ದನ್ ರೆಡ್ಡಿ, ನಾನು ಇಲ್ಲೇ ಇರುತ್ತೇನೆ ಎನ್ನುವ ಮೂಲಕ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂಬ ಸುಳಿವು ಬಿಟ್ಟುಕೊಟ್ಡಿದ್ದರು.