ಗದಗ ಬೆಳ್ಳಿಹಬ್ಬ; ಹೇಗಿತ್ತು, ಹೇಗಾಯ್ತು ಈ ಜಿಲ್ಲೆ?
1997 ರಲ್ಲಿ ರಾಜ್ಯದಲ್ಲಿ 7 ಹೊಸ ಜಿಲ್ಲೆಗಳನ್ನು ರಚಿಸಲಾಯಿತು. ಜೆಎಚ್ ಪಟೇಲ್ ಆಗ ಸಿಎಂ ಆಗಿದ್ದರು. ಚಾಮರಾಜನಗರ, ದಾವಣಗೆರೆ, ಬಾಗಲಕೋಟೆ, ಗದಗ, ಹಾವೇರಿ, ಉಡುಪಿ ಮತ್ತು ಕೊಪ್ಪಳ ಎಂಬ ಹೊಸ ಜಿಲ್ಲೆಗಳ ಉದಯವಾಯಿತು. ಈ ಆರು ಜಿಲ್ಲೆಗಳಿಗೂ ಈಗ ರಜತ ಮಹೋತ್ಸವದ ಸಂಭ್ರಮ.
ಹುಬ್ಬಳ್ಳಿ-ಧಾರವಾಡದಿಂದ ಪ್ರತ್ಯೇಕಗೊಂಡ ಗದಗ ಜಿಲ್ಲೆ ಈಗ 25 ವರ್ಷಗಳ ಬಳಿಕ ಸಂಭ್ರಮಿಸಬೇಕೋ, ಕೊರಗಬೇಕೋ ಎಂಬ ಗೊಂದಲದ ಸ್ಥಿತಿಯಲ್ಲಿದೆ. ಧರ್ಮ ದಂಗಲ್, ಪರ್ಸೆಂಟೇಜ್ ಕಮಿಷನ್, ಮೊಟ್ಟೆ, ಮಾಂಸದಲ್ಲಿ ಜಿಲ್ಲೆಯ ಬೆಳ್ಳಿ ಮಹೋತ್ಸವ ಮರೆತ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ರೋಸಿ ಹೋಗಿದ್ದಾರೆ.
ಉಡುಪಿಗೆ ರಜತ ಮಹೋತ್ಸವ; ಜಿಲ್ಲೆ ರಚನೆ ಹಿಂದಿನ ಕಥೆ
ಗದಗ ಜಿಲ್ಲೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ ಕಳೆಗುಂದಿದೆ. 25 ವರ್ಷಗಳಾದ್ರೂ ಸರಿಯಾದ ರಸ್ತೆ, ಚರಂಡಿ, ಕುಡಿಯುವ ನೀರು, ವಾಹನ ಸೌಕರ್ಯ, ಕೈಗಾರಿಕೆ, ಕಾರ್ಖಾನೆ ಹೀಗೆ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಜಿಲ್ಲಾ ರಚನೆ ಸಂದರ್ಭದಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿದವು. ಸೀಮೆ ಎಣ್ಣೆ ಸುರಿದುಕೊಂಡು ಓರ್ವ ಯುವಕ ಸಾವನ್ನಪ್ಪಿದ, ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ಆಸ್ತಿ-ಪಾಸ್ತಿ, ದಾಖಲೆಗಳನ್ನು ನಾಶ ಮಾಡಲಾಯಿತು. ಅಹಿಂಸಾತ್ಮಕ ಹೋರಾಟಗಳು ನಡೆದವು. ಸತತವಾಗಿ ಪ್ರತಿಭಟನೆಗಳು ನಡೆದವು. ನಂತರ ಧಾರವಾಡ ಜಿಲ್ಲೆಯಿಂದ ಗದಗ ಹೊಸ ಜಿಲ್ಲೆಯಾಗಿ ಘೋಷಣೆ ಆಯಿತು.
ಜಿಲ್ಲೆಯಾಗಿ 25 ನೇ ವರ್ಷಾಚರಣೆಗೆ ಸರ್ಕಾರ ಹಾಗೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಕೊನೆಯಪಕ್ಷ ಗದಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು, ಶರಣರು, ಸಂತರು, ಸಾಹಿತಿಗಳು, ದಾರ್ಶನಿಕರ ಪುತ್ಥಳಿ ಸ್ವಚ್ಛಗೊಳಿಸಿ ಹೂ ಮಾಲೆ ಹಾಕಲಾಗದಷ್ಟು ಹೀನಾಯ ಸ್ಥಿತಿಗೆ ಸರ್ಕಾರ ಬಂತಾ ಅಂತ ಜನ ಕಿಡಿಕಾರುತ್ತಿದ್ದಾರೆ. ಅಭಿವೃದ್ಧಿ ಕುಂಠಿತ ಹಾಗೂ ನಿರ್ಲಕ್ಷ್ಯಕ್ಕೊಳಗಾದ ಜಿಲ್ಲೆಗೆ ಎಷ್ಟು ವರ್ಷವಾದರೇನು ಫಲ ಅಂತ ಜನ ಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಜಿಲ್ಲೆ ರಚನೆಯಾದ ಬಳಿಕ ಬಂದ ಭಾಗ್ಯ ಎಂದರೆ ಜಿಲ್ಲಾಧಿಕಾರಿ ಕಚೇರಿ ಸ್ಥಾಪನೆಯಾಗಿದ್ದು ಮತ್ತು ಎಸ್ಪಿ ಕಚೇರಿಗಳು ನಿರ್ಮಾಣವಾಗಿದ್ದು. ಜಿಲ್ಲಾಡಳಿತಕ್ಕೆ ಬೇಕಾದ ಕಟ್ಟಡಗಳು ಬಂದವು. ಒಂದಷ್ಟು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದವು. ಇದು ಹೊರತು ಅಭಿವೃದ್ಧಿ ಆಸೆಯಿಂದ ಪ್ರತ್ಯೇಕ ಜಿಲ್ಲೆಯಾಗಿದ್ದ ಗದಗಕ್ಕೆ ಬೇರೇನೂ ಭಾಗ್ಯ ಸಿಕ್ಕಿಲ್ಲ.
ಗದಗ್ನ ವಿಶೇಷ ಸ್ಥಳಗಳು:
ಗದಗ ಜಿಲ್ಲೆಯಲ್ಲಿ ಕವಿ ಕುಮಾರವ್ಯಾಸ, ಆದಿಕವಿ ಪಂಪರಂತಹ ದಿಗ್ಗಜರ ಕರ್ಮಭೂಮಿ. ಸಹಕಾರಿ ರಂಗಕ್ಕೆ ಏಷಿಯಾ ಖಂಡದಲ್ಲೇ ಜಿಲ್ಲೆ ಹೆಸರುವಾಸಿಯಾಗಿದೆ. 117 ಅಡಿ ಎತ್ತರದ ಬಸವೇಶ್ವರ ಪುತ್ಥಳಿ, ಐತಿಹಾಸಿಕ ಭೀಷ್ಮ ಕೆರೆ, ಬಿಂಕದಕಟ್ಟೆ ಮೃಗಾಲಯ, ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ, ಜುಮ್ಮಾ ಮಸೀದಿ, ರೆಮಿಂಗ್ಟನ್ ಚರ್ಚ್, ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಂಗೀತದ ಪುಣ್ಯಾಶ್ರಮ, ತೋಂಟದಾರ್ಯ ಮಠ, ಶಿವಾನಂದ ಮಠ, ಕೋಮು ಸೌಹಾರ್ದತೆಯ ಶಿರಹಟ್ಟಿ ಫಕ್ಕೀರೇಶ್ವರಮಠ, ಮುಂಡರಗಿ ಅನ್ನದಾನೀಶ್ವರ ಮಠ, ಹಾಲಕೇರಿ ಅನ್ನದಾನೇಶ್ವರ ಮಠ, ಲಕ್ಷ್ಮೇಶ್ವರ ಮುಕ್ತಿಮಂದಿರ, ಮಾಗಡಿ ಪಕ್ಷಿ ಧಾಮ, ಲಕ್ಕುಂಡಿ, ಸೂಡಿ, ಗಜೇಂದ್ರಗಡ ಐತಿಹಾಸಿಕ ಸ್ಥಳ, ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡ, ದಕ್ಷಿಣ ಕಾಶಿ ಕಾಲಕಾಲೇಶ್ವರ ದೇವಸ್ಥಾನ ಇವು ಜಿಲ್ಲೆಗೆ ಮುಕುಟಪ್ರಾಯವಾಗಿವೆ.
ಗದಗ್ನ ಖ್ಯಾತನಾಮರು:
ಗವಾಯಿಗಳು, ಭೀಮಸೇನ್ ಜೋಶಿ, ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಅಂದಾನಪ್ಪ ದೊಡ್ಡಮೇಟಿ, ಜಿ.ಬಿ.ಜೋಶಿ, ಗರುಡ ಸದಾಶಿವರಾಯರು, ಚೆಂಬೆಳಕಿನ ಕವಿ ಚನ್ನವೀರ ಕಣವಿ, ಆರ್.ಸಿ.ಹಿರೇಮಠ, ಗಿರಡ್ಡಿ ಗೋವಿಂದರಾಜ್, ಕ್ರಿಕೆಟ್ ಆಟಗಾರ ಸುನೀಲ್ ಜೋಷಿ, ಬಿನು ಭಾಟಿ, ಹಾಕಿ ಆಟಗಾರ ಮುಟಗಾರ ಹಾಗೂ ಇತ್ತಿಚಿನ ದಿನಗಳಲ್ಲಿ ಕುಸ್ತಿಯಲ್ಲಿ ಹೆಸರಾದ ಕುಮಾರಿ ಪ್ರೇಮಾ ಹುಚ್ಚಣ್ಣವರ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಗದಗ ಜಿಲ್ಲೆ ಪ್ರಸಿದ್ಧಿ ಪಡೆದಿದೆ.
ಮುದ್ರಣ ಕ್ಷೇತ್ರದಲ್ಲಿ ಗದಗ ಜಿಲ್ಲೆ ಮಾದರಿ. ಜಿಲ್ಲೆ ಸಣ್ಣದಾದರೂ ಸಾಧನೆ ಬಹುದೊಡ್ಡದು. ಇಷ್ಟೆಲ್ಲಾ ಇದ್ದರೂ ಅಭಿವೃದ್ಧಿ ಶೂನ್ಯವಾಗಿದೆ. ಒಟ್ಟಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಆಡಳಿತಾತ್ಮಕ ಕ್ಷೇತ್ರದಲ್ಲಿ ಗದಗ ಜಿಲ್ಲೆ ಬಹಳಷ್ಟು ಹಿಂದುಳಿದಿದೆ. ಅಭಿವೃದ್ಧಿಕುಂಠಿತದಿಂದ ಜನರು ಆಕ್ರೋಶದಿಂದ ಪುಟಿದೇಳುವಂತಾಗಿದೆ. ಅದೇನೇ ಇರಲಿ ಸರ್ಕಾರ ಜಿಲ್ಲೆಗಳ ಬೆಳ್ಳಿ ಮಹೋತ್ಸವ ಮರೆತಿರುವುದು ವಿಪರ್ಯಾಸವೇ ಸರಿ.
(ಒನ್ಇಂಡಿಯಾ ಸುದ್ದಿ)