ಪಿಎಸ್ಐ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಯತ್ನ, 5 ಜನರ ಬಂಧನ
ಗದಗ, ಜನವರಿ 13 : ಪಿಎಸ್ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಪ್ರಯತ್ನವನ್ನು ಸಿಸಿಬಿ ಪೊಲೀಸರು ತಡೆದಿದ್ದಾರೆ. ಬೆಂಗಳೂರು ಮೂಲದ ಮೂವರು ಸೇರಿದಂತೆ ಒಟ್ಟು 5 ಜನರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಭಾನುವಾರ ರಾಜ್ಯಾದ್ಯಂತ ಪಿಎಸ್ಐ ನೇಮಕಾತಿ ಪರೀಕ್ಷೆ ನಿಗದಿಯಾಗಿತ್ತು. ಈ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಲು ಕೆಲವರು ಪ್ರಯತ್ನ ನಡೆಸಿದ್ದರು. ಆದರೆ, ಸಿಸಿಬಿ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಢದಲ್ಲಿ ಬೆಂಗಳೂರು ಮೂಲದ ಮೂವರು ಮತ್ತು ಗದಗ ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ಶನಿವಾರ ಸಂಜೆಯೇ ಸಿಸಿಬಿ ಪೊಲೀಸರಿಗೆ ಪೇಪರ್ ಲೀಕ್ ಮಾಡುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಎಂಟು ತಂಡಗಳನ್ನು ರಚನೆ ಮಾಡಿ ಹುಡುಕಾಟ ಆರಂಭಿಸಲಾಗಿತ್ತು.

ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ನಾಲ್ವರು ಏಜೆಂಟ್ಗಳು ಪರಾರಿಯಾಗಿದ್ದಾರೆ. ಐದು ಜನರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಏಜೆಂಟ್ಗಳು ಕೈಯಲ್ಲಿ ಪ್ರಶ್ನೆ ಪತ್ರಿಕೆ ಇಲ್ಲದೇ ಅಭ್ಯರ್ಥಿಗಳ ಬಳಿ ಹಣ ಪಡೆಯಲು ಮುಂದಾಗಿದ್ದರು. ನೂರಾರು ಅಭ್ಯರ್ಥಿಗಳನ್ನು ಸಂಪರ್ಕಿಸಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಮಾಹಿತಿ ಅನ್ವಯವೇ ಪೊಲೀಸರು ದಾಳಿ ನಡೆಸಿದ್ದಾರೆ.











Click it and Unblock the Notifications