ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕನಸು ನನಸಾಗುವುದೇ?
ಹುಬ್ಬಳ್ಳಿ, ಅಕ್ಟೋಬರ್ 01 : ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯನ್ನು ಕೇಂದ್ರ ಸರ್ಕಾರ ಆದಷ್ಟು ಬೇಗ ಜಾರಿಗೊಳಿಸಬೇಕೆಂದು ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆ ಆಗ್ರಹಿಸಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗಿದೆ.
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ತಂದರೆ ಪಶ್ಚಿಮಘಟ್ಟದ ಅರಣ್ಯ ನಾಶವಾಗುತ್ತದೆ. ಕರಡಿ, ಆನೆ, ಹುಲಿಯಂತಹ ಪ್ರಾಣಿಗಳ ಜೀವಕ್ಕೆ ಸಂಚಕಾರ ಉಂಟಾಗುತ್ತದೆ ಎಂದು ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಸುಪ್ರೀಂಕೋರ್ಟ್ಗೆ ವರದಿ ನೀಡಿದೆ. [ರೈಲ್ವೆ ಟಿಕೆಟ್ ಕನ್ ಫರ್ಮ್ ಆಗಿಲ್ಲವೇ? ಚಿಂತೆ ಬಿಡಿ]

ಈ ರೈಲ್ವೆ ಮಾರ್ಗ ನಿರ್ಮಾಣದಿಂದ ಕಬ್ಬಿಣದ ಅದಿರು ಸಾಗಾಣಿಕೆಗೆ ಉಪಯೋಗವಾಗಲಿದೆ. ಈ ಭಾಗದಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಪ್ರಯಾಣಿಕರ ಕೊರತೆ ಉಂಟಾಗುತ್ತದೆ ಎಂದು ಸಿಇಸಿ ಸುಪ್ರೀಂಕೋರ್ಟ್ಗೆ ನೀಡಿರುವ ವರದಿಯಲ್ಲಿ ಹೇಳಿದೆ. ಆದ್ದರಿಂದ, ಯೋಜನೆ ಬಗ್ಗೆ ಕೇಂದ್ರ ಸರ್ಕಾರವೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. [ಕುಡಚಿ-ಬಾಗಲಕೋಟೆ ರೈಲು ಮಾರ್ಗ 2019ಕ್ಕೆ ಪೂರ್ಣ]
ವಾಣಿಜ್ಯೋದ್ಯಮ ಸಂಸ್ಥೆ ಹೇಳುವುದೇನು? : ಆದರೆ, ಹುಬ್ಬಳ್ಳಿಯ ವಾಣಿಜೋದ್ಯಮ ಸಂಸ್ಥೆ ಸಿಇಸಿ ಹೇಳಿರುವಂತೆ ಅಪಾರ ಪ್ರಮಾಣದ ಪರಿಸರ ನಾಶವಾಗುವುದಿಲ್ಲ ಎಂದು ಹೇಳಿದೆ. ಯೋಜನೆಯಿಂದ ಎನ್ಎಂಪಿಟಿ, ವಿದ್ಯುತ್ ಉತ್ಪಾದನಾ ಘಟಕ, ಸೀಬರ್ಡ್ ನೌಕಾನೆಲೆ ಸೇರಿದಂತೆ ಅನೇಕ ಉದ್ಯಮಗಳಿಗೆ ನೆರವಾಗಲಿದೆ ಎಂದು ಹೇಳಿದೆ. [ಗದಗ-ಕೂಡಗಿ-ಹುಟಗಿ ಜೋಡಿ ಮಾರ್ಗಕ್ಕೆ ಒಪ್ಪಿಗೆ]
ರೈಲು ಮಾರ್ಗ ನಿರ್ಮಾಣವಾದರೆ ಕರ್ನಾಟಕದ ಉತ್ತರ ಹಾಗೂ ಮಧ್ಯ ಭಾಗದ ಪ್ರದೇಶಗಳಿಂದ ಕರಾವಳಿಗೆ ಸಂಪರ್ಕ ಸಾಧ್ಯವಾಗುತ್ತದೆ. ಒಟ್ಟು 2 ಲಕ್ಷ ಚ.ಕಿ.ಮೀ. ವ್ಯಾಪ್ತಿಯ ಪ್ರದೇಶಗಳಿಗೆ ಸಂಪರ್ಕ ಸಾಧಿಸಬಹುದು. ಇದರಿಂದ ವಾಣಿಜ್ಯೋದ್ಯಮ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭವೃದ್ಧಿಗೆ ಸಹಾಯಕವಾಗುತ್ತದೆ ಎಂದು ಸಂಸ್ಥೆ ಹೇಳಿದೆ.
ಸಿಇಸಿ ಸುಪ್ರೀಂಕೋರ್ಟ್ಗೆ ಅವಾಸ್ತವಿಕ ವರದಿಯನ್ನು ಸಲ್ಲಿಸಿದೆ ಎಂದು ಹೇಳಿರುವ ವಾಣಿಜೋದ್ಯಮಿಗಳ ಸಂಘ ಕೇಂದ್ರ ಸರ್ಕಾರ ಜನರ ಅನುಕೂಲಕ್ಕೆ ಕೂಡಲೇ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದೆ.












Click it and Unblock the Notifications