ವಿನಯ್ ಕುಲಕರ್ಣಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಜಗದೀಶ್ ಶೆಟ್ಟರ್
ಧಾರವಾಢ, ನವೆಂಬರ್ 25: ಯೋಗೀಶ್ ಗೌಡ ಅವರ ಕೊಲೆ ಪ್ರಕರಣದಲ್ಲಿ ಸಾಕ್ಷಿ ನಾಶದ ಆರೋಪ ಹೊತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, "ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ," ಎಂದು ಹೇಳಿದರು.

ಇನ್ನು, "ಈಗಾಗಲೇ ಈ ಕೊಲೆ ಪ್ರಕರಣ ದಾರಿ ತಪ್ಪುತ್ತಿದೆ. ಆದರೆ ನಿಜವಾದ ಆರೋಪಿ ಯಾರು ಎಂಬ ಸತ್ಯ ಹೊರಬರಬೇಕಾದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕ," ಎಂದು ಶೆಟ್ಟರ್ ಆಗ್ರಹಿಸಿದರು. "ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತುಳಜಪ್ಪಾ ಸುಲ್ಫಿ ಅವರು ಧಾರವಾಡಕ್ಕೆ ಯಾಕೆ ಸಂಧಾನಕ್ಕೆ ಬಂದ್ರು? ಇಲ್ಲಿ ಸುಲ್ಫಿ ರಾಜಕೀಯ ಮಾಡಲು ಬಂದಿದ್ರಾ," ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.
ಏತನ್ಮಧ್ಯೆ ಸುಲ್ಫಿ ವಿರುದ್ಧ ಕೂಡಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ನಮಗೆ ಮಾಧ್ಯಮಗಳಲ್ಲಿ ಕೊಲೆ ಪ್ರಕರಣದ ವಿಷಯಗಳು ತಿಳಿದ ಮೇಲೆ ನಾವು ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೇವೆ. ಆದರೆ ನಮ್ಮದೇ ತಪ್ಪು ಎನ್ನುವ ರೀತಿಯಲ್ಲಿ ಸಚಿವರು ಹೇಳುತ್ತಿದ್ದಾರೆ . ಆದರೆ ಇದರಲ್ಲಿ ನಮ್ಮ ಪಾತ್ರ ಏನಿದೆ? ನಮ್ಮದು ಪ್ರತಿಪಕ್ಷ; ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸುತ್ತಿದ್ದೇವೆ ಎಂದು ಅವರು ಹೇಳಿದರು.












Click it and Unblock the Notifications