ಧಾರವಾಡದಲ್ಲಿ ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದ ಪ್ರಲ್ಹಾದ್ ಜೋಶಿ
ಧಾರವಾಡ, ಅಕ್ಟೋಬರ್, 28: ನಾಡು ನುಡಿಯ ಬಗ್ಗೆ ಅಭಿಯಾನ ಮೂಡಿಸುವ ಗೀತೆ, ಕವನಗಳನ್ನು ನಮ್ಮ ಹೆಮ್ಮೆಯ ಕವಿಗಳು ರಚಿಸಿದ್ದಾರೆ. ಇವುಗಳನ್ನು ಕೇಳುವುದಕ್ಕೆ ನಮ್ಮ ನಾಡಿನ ಸಹಸ್ರಾರು ಜನರು ಕಾತುರದಿಂದ ಕಾಯುತ್ತಿರುತ್ತಾರೆ. ಈ ದೃಷ್ಟಿಯಿಂದ ಇಂದು (ಅಕ್ಟೋಬರ್ 28) "ಕೋಟಿ ಕಂಠ ಗೀತಗಾಯನ" ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ. ಹಾಗೆಯೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಡಾ. ರಾಜ್ಕುಮಾರ್ ಅವರು ಹಾಡಿದ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎನ್ನುವ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
"ನನ್ನ ನಾಡು - ನನ್ನ ಹಾಡು" ಸಮೂಹ ಗೀತಗಾಯನ ಕನ್ನಡ ನಾಡು-ನುಡಿಯ ಶ್ರೇಷ್ಠತೆಯನ್ನು ಸಾರುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಹುಬ್ಬಳ್ಳಿ ವಿಶ್ವೇಶ್ವರನಗರ ಪಿರಾಮಿಡ್ ಆವರಣದಲ್ಲಿ ಗಾಯನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ನಗರದ ಬಹುತೇಕ ಶಾಲೆಯ ಮಕ್ಕಳು ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ವಿದ್ಯಾರ್ಥಿಗಳ ಜೊತೆಗೆ ಸೇರಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧ್ವನಿಗೂಡಿಸಿದರು. ಈ ಮೂಲಕ ದೇಶದಲ್ಲಿ ಒಗ್ಗಟ್ಟು, ದೇಶ ಭಕ್ತಿ ಮೆರೆಯಲು ಕಾರ್ಯಕ್ರಮ ಸಾಕ್ಷಿ ಆಯಿತು. ಕರ್ನಾಟಕ ಸರ್ಕಾರ ಆಯೋಜಿಸಿರುವ 'ಕೋಟಿ ಕಂಠ ಗಾಯನ' ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
'ಕೋಟಿ ಕಂಠ ಗಾಯನ'ದಲ್ಲಿ 1.25 ಕೋಟಿ ಜನರು ಭಾಗಿಯಾಗುವ ನಿರೀಕ್ಷೆ: ಸುನೀಲ್ ಕುಮಾರ್
ಡಾ.ರಾಜ್ ಹಾಡಿಗೆ ಹೆಜ್ಜೆ ಹಾಕಿದ ಸಚಿವರು
ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಮೂಹಿಕವಾಗಿ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರು. ಕನ್ನಡಿಗರ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಸೂಪರ್ ಹಿಟ್ ಹಾಡನ್ನು ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹಾಡಲಾಗಿತ್ತು. ಕನ್ನಡ ಕಣ್ಮಣಿ ಡಾ.ರಾಜ್ಕುಮಾರ್ ಹಾಡಿದ್ದ "ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು" ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಲಾಯಿತು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಹಾಡಿಗೆ ಹೆಜ್ಜೆ ಹಾಕುವ ಮೂಲಕ "ಕೋಟಿ ಕಂಠ ಗಾಯನ" ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ವಿಶ್ವಾದ್ಯಂತ ಮಾದರಿಯಾದ ಅಪ್ಪು
ಹಾಗೆಯೇ ದೊಡ್ಮನೆ ಹುಡುಗ ಅಪ್ಪು ಅವರ ಉತ್ತಮ ಸಾಮಾಜ ಕಾರ್ಯ ಇದೀಗ ವಿಶ್ವದಾದ್ಯಂತ ಮಾದರಿಯಾಗಿದೆ. ಅಭಿಮಾನಿಗಳು ಸಹ ಅದೇ ಮಾದರಿಯಲ್ಲಿ ಸಾಗಿದ್ದು, ಪವರ್ ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಹೆಸರನ್ನು ಅಜರಾಮರ ಮಾಡುತ್ತಿದ್ದಾರೆ. ಇಂದು ಚಂದನವನದ ಪವರ್ ಸ್ಟಾರ್ ಅಚ್ಚುಮೆಚ್ಚಿನ ಪ್ರಕೃತಿ ಸೌಂದರ್ಯ ಸಾರುವ ಗಂಧದಗುಡಿ ಚಿತ್ರ ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ.
ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮ
ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕೂಡ ಅಭಿಯಂತೆ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ. ನೆಚ್ಚಿನ ಪರಮಾತ್ಮನಂತೆ ಅಭಿಮಾನಿಗಳು ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಾ ಯುವರತ್ನ ಇನ್ನೂ ನಮ್ಮೊಂದಿಗೆ ಇದ್ದಾರೆ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲೂ ಅದ್ದೂರಿಯಾಗಿ ಚಿತ್ರ ತೆರೆಕಂಡಿದ್ದು, ಅಪ್ಪು ಅಭಿಮಾನಿಗಳು ಸಂಭ್ರಮದೊಂದಿಗೆ ಮಾದರಿ ಕೆಲಸದಿಂದ ಅದ್ದೂರಿಯಾಗಿ ಗಂಧದಗುಡಿಯನ್ನು ಸ್ವಾಗತಿಸಿದರು. ಶ್ರವಣ ದೋಷ ಇರುವವರಿಗೆ ಉಚಿತವಾಗಿ ಮಷಿನ್ ಹಂಚುವ ಮೂಲಕ ಅಪ್ಪು ಅಭಿಮಾನಿಗಳು ಮಾದರಿ ಆದರು.
ಶ್ರವಣ ದೋಷವುಳ್ಳವರಿಗೆ ಮಷಿನ್ ಹಂಚಿಕೆ
ಸುಮಾರು 50 ಶ್ರವಣ ದೋಷ ಇರುವ ಜನರಿಗೆ ಮಷಿನ್ ಹಂಚಿದರು. ಹುಬ್ಬಳ್ಳಿ ತಾಲೂಕಿನ ವಿವಿಧ ಹಳ್ಳಿಗಳ ಬಡವರಿಗೆ ಅಪ್ಪು ಅಭಿಮಾನಿಗಳು ಮಷಿನ್ ವಿತರಣೆ ಮಾಡಿ ಅವರ ಬಾಳು ಬೆಳಗುವಂತೆ ಮಾಡಿದರು. ಅಪ್ಪುಅವರ ಅಭಿಮಾನಿ ಆಗಿರುವ ರಘು ಸ್ನೇಹಿತರಿಂದ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿರುವ ಮಷಿನ್ಗಳನ್ನು ವಿತರಣೆ ಮಾಡಿದರು. ಅಪ್ಪು ನಮಗೆ ಹೀರೋ ಅಲ್ಲ ದೇವರು, ನಮ್ಮ ಕೈಲಾದಷ್ಟು ಸೇವೆ ಮಾಡುತ್ತಿದ್ದೇವೆ ಎಂದು ಅಭಿಮಾನಿಗಳು ಹೇಳಿದರು.