ಹಣ ಮಾಡುವವರನ್ನು ಹಂದಿ ಅಂತಾರೆ : ಎಸ್ಆರ್ ಮೊರೆ ಟೀಕೆ
ಹುಬ್ಬಳ್ಳಿ, ಏಪ್ರಿಲ್ 19 : ಉಂಡ ಮನೆಗೆ ದ್ರೋಹ ಬಗೆಯುವ ವ್ಯಕ್ತಿ ನಾನಲ್ಲ. ಕಾಂಗ್ರೆಸ್ ನನಗೆ ಎಲ್ಲವನ್ನು ನೀಡಿದೆ. ಹೀಗಾಗಿ ಕಾಂಗ್ರೆಸ್ ಅನ್ನು ಯಾವುದೇ ಕಾರಣಕ್ಕೂ ತೊರೆಯವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಸ್. ಆರ್. ಮೊರೆ ಹೇಳಿದ್ದಾರೆ.
ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಧಾರವಾಡದಲ್ಲಿ ತಮ್ಮ ಬೆಂಬಲಿಗರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲವು ಹುಳುಗಳು ಜಿಲ್ಲಾ ಕಾಂಗ್ರೆಸ್ ನಲ್ಲಿವೆ. ಅವುಗಳನ್ನು ಹೊರ ಹಾಕುವ ಮೂಲಕ ಪಕ್ಷ ಉಳಿಸಿಕೊಳ್ಳಬೇಕಿದೆ ಎಂದು ಕೋರಿದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಕಾಂಗ್ರೆಸ್ ಪಟ್ಟಿಯಲ್ಲಿ ನನ್ನ ಹೆಸರಿರಲಿಲ್ಲ. ಗಾಬರಿ ಆಯಿತು. ಈ ಬಗ್ಗೆ ನಾನು ಅನೇಕರಿಗೆ ವಿಚಾರಿಸಿದೆ . ಧಾರವಾಡದ ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬುರಾನ್ ಹಾಗೂ ನವನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೀಗೌಡ ಅವರು ಮೊರೆ ಅವರಿಗೆ ಟಿಕೇಟ್ ನೀಡಿದರೆ ಸೋಲ್ತಾರೆ ಅಂತ ಬರೆದಿದ್ದಾರೆ. ಇದನ್ನು ಕೇಳಿ ನನಗೆ ನಿಜಕ್ಕೂ ನಗು ಬಂತು.

ಅಲ್ಲದೇ, ಪ್ರತ್ಯೇಕ ಧರ್ಮದ ಹೋರಾಟದ ವೇಳೆ ಸಚಿವ ವಿನಯ ಕುಲಕರ್ಣಿ ಬೆಂಬಲಿಸಿದ್ದಾರೆಂದು ಸಿಎಂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಇಸ್ಮಾಯಿಲ್ ತಮಟಗಾರಗೆ ಟಿಕೆಟ್ ನೀಡಿದರೆ, ಮುಸ್ಲಿಂ ಮತಗಳು ಬರುತ್ತೇವೆ. ಅವರಿಗೆ ಲಿಂಗಾಯತರ ಮತ ಹಾಕಿ ಗೆಲ್ಲಿಸುತ್ತೇನೆ ಎಂದು ಹೇಳಿದ್ದಕ್ಕೆ ಸಿದ್ದರಾಮಯ್ಯ ಅವರು ವ್ಯವಸ್ಥೆ ಜೊತೆಗೆ ರಾಜಿ ಆಗಿದ್ದಾರೆ ಎಂದು ತಿಳಿಸಿದರು.
ಇದು ಹೈ ಕಮಾಂಡ್ ಗೂ ಗೊತ್ತಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಳಂಕಿತರಿಗೆ ಟಿಕೆಟ್ ನೀಡಿರುವುದು ಸರಿಯಲ್ಲ. ನಾನು ಈ ಹಿಂದೆ ಸಹ ಎರಡು ಬಾರಿ ಟಿಕೆಟ್ ವಂಚಿತನಾಗಿದ್ದೇನೆ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿ, ಸಚಿವನಾಗಿ ಕೂಡ ಕೆಲಸ ಮಾಡಿದ್ದೇನೆ. ಆದರೆ ಹಣ ಮಾಡಿಲ್ಲ.
ಹಣ ಮಾಡುವವರನ್ನು ಹಂದಿ ಅಂತಾರೆ. ಪಾಪ ಮಾಡಿದವರು ಮುಂದೆ ಹಂದಿಯಾಗಿ ಹುಟ್ಟುತ್ತಾರೆ ಎಂದು ಟೀಕಿಸಿದರು. ನಾನು ಕಾಂಗ್ರೆಸ್ ಪರ ಇರುತ್ತೇನೆ. ಆದರೆ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗಲ್ಲ. ಮನೆಗೆ ಬಂದವರಿಗೆ ಬೆಂಬಲಿಸಲು ಹೇಳ್ತಿನಿ. ಆದ್ರೆ ನಾನು ಜೆಡಿಎಸ್ ಗೆ ಹೋಗಲ್ಲ ಬಂಡಾಯವಾಗಿಯೂ ಸ್ಪರ್ಧೆ ಮಾಡಲ್ಲ.
ಟಿಕೆಟ್ ಹಂಚಿಕೆ ಪ್ರಕ್ರಿಯೆ ಎಲ್ಲವೂ ಸರಿ ಇಲ್ಲ. ಈಗ ರೈಲು ಹೋಗಿದೆ. ಬಿ ಫಾರಂ ಕೂಡ ಹಂಚಿಕೆ ಆಗಿದೆ. ಹೈಕಮಾಂಡ್ ಕೂಡ ಗೊತ್ತಿದೆ. ಇನ್ನೂ ಅವಕಾಶವಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುವ ವಿಶ್ವಾಸವಿದೆ ಎಂದರು.












Click it and Unblock the Notifications