ರಾಹುಲ್ ಗಾಂಧಿ "ನಾಯಿ"ಗೆ ಬಿಸ್ಕೆಟ್ ಹಾಕುತ್ತಾ ರಾಜ್ಯ ಕಾಂಗ್ರೆಸ್ ನಾಯಕರನ್ನು ಮಾತನಾಡಿಸುತ್ತಾರೆ: ಜೋಶಿ ವ್ಯಂಗ್ಯ
ಧಾರವಾಡ, ಜನವರಿ, 06: ಸಿದ್ದರಾಮಯ್ಯ ಒಬ್ಬ ನಾಯಕರಾಗಿದ್ದಾರೆ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ ರಾಹುಲ್ ಗಾಂಧಿ ಮುಂದೆ ಕೈಕಟ್ಟಿ ನಿಂತುಕೊಳ್ಳುವ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಪ್ರಧಾನಿ ಓರ್ವ ಚುನಾಯಿತ ನಾಯಕರಾಗಿದ್ದಾರೆ. ಪ್ರಧಾನಿಗಳು ಒಬ್ಬ ಎಲೆಕ್ಟೆಡ್ ನಾಯಕ. ಅವರು ಸೆಲೆಕ್ಟೆಡ್ ಅಲ್ಲ. ಸಿದ್ದರಾಮಯ್ಯವರು ಸಿಎಂ ಆಗಿದ್ದಾಗಲೂ ರಾಹುಲ್ ಗಾಂಧಿ ಮುಂದೆ ಕೈಕಟ್ಟಿ ನಿಂತುಕೊಳ್ಳುತ್ತಿದ್ದರು. ನಿಮಗೆ ಅಪಾಯಿಟ್ಮೆಂಟ್ ಸಿಗುತ್ತಿರಲಿಲ್ಲ. ಈಗ ಮೋದಿ ಅವರು ಯಾರೇ ಬಂದರೂ ಸಹ ನಿಮ್ಮ ರಾಜ್ಯದ ಸಮಸ್ಯೆ ಏನು ಎಂದು ಕೇಳುತ್ತಾರೆ. "ರಾಹುಲ್ ಗಾಂಧಿ ಭೇಟಿಗೆ ದೊಡ್ಡ ದೊಡ್ಡ ನಾಯಕರು ಹೋದಾಗ, ಅವರ ಜೊತೆ ರಾಹುಲ್ ಗಾಂಧಿ ನಾಯಿಗೆ ಬಿಸ್ಕೆಟ್ ಹಾಕುತ್ತಾ ಮಾತನಾಡುತ್ತಾರೆ". ಆದರೆ, ಸಿದ್ದರಾಮಯ್ಯ ಇಲ್ಲಿ ನಾಯಿ ಬಗ್ಗೆ ಮಾತನಾಡುತ್ತಾರೆ ಎಂದರು.
ಕಾಂಗ್ರೆಸ್ನವರು ಅಧಿವೇಶನದಲ್ಲಿ ಮಹದಾಯಿ ಬಗ್ಗೆ ಯಾಕೆ ಮತನಾಡಲಿಲ್ಲ?: ಜಗದೀಶ್ ಶೆಟ್ಟರ್ ಪ್ರಶ್ನೆ
ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಜೋಶಿ
10-11 ಬಜೆಟ್ ಮಾಡಿದವರು ನೀವು. ಈ ಕೆಳಮಟ್ಟದ ಮಾತು ನಿಮ್ಮ ಯೋಗ್ಯತೆಗೆ ಸರಿಯಾಗುವುದಲ್ಲ. ನೀವು ನಾಯಿ ಮರಿ ಎನ್ನುತ್ತೀರಿ, ರಾಹುಲ್ ಗಾಂಧಿ ಮುಂದೆ ಹೀಗೆಲ್ಲ ನಡೆದುಕೊಳ್ಳುವ ನಿಮಗೆ ಹುಲಿ ಮರಿ ಎನ್ನಬೇಕೆ? ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದ್ದಾಗ ಬರುತ್ತಿದ್ದ ಹಣಕ್ಕಿಂತ ಹೆಚ್ಚಿಗೆ ಈಗ ನಮ್ಮ ರಾಜ್ಯಕ್ಕೆ ಬರುತ್ತಿದೆ. ಇದೆಲ್ಲವರೂ ಸಿದ್ದರಾಮಯ್ಯನವರಿಗೆ ಗೊತ್ತಿದೆ. ಗೊತ್ತಿದ್ದೂ ರಾಜಕೀಯಕ್ಕಾಗಿ ಈ ರೀತಿ ಮಾತನಾಡುತ್ತಾರೆ. ಇದು ಅವರಿಗೆ ಶೋಭೆ ತರುವಂತದ್ದಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ
ನಾವು 2023ರಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ. ಬಿಜೆಪಿ ಎಷ್ಟೇ ಸುಳ್ಳು ಹೇಳಲಿ, ಹಣದ ಹೊಳೆ ಹರಿಸಲಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಹೇಳಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಮಹದಾಯಿ ಜಲ-ಜನ ಆಂದೋಲನದಲ್ಲಿ ಮಾತನಾಡಿದ್ದ ಅವರು, ಈ ಡೋಂಗಿತನ ಬಿಟ್ಟು, ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಸತ್ಯ ಹೇಳುವುದನ್ನು ಕಲಿಯಿರಿ. ಕಾಂಗ್ರೆಸ್ ಅಧಿಕಾರದಲ್ಲಿ ಇರುವಾಗ ನುಡಿದಂತೆ ನಡೆದಿದ್ದೇವೆ. 2013ರಲ್ಲಿ ನಮ್ಮ ಪ್ರಣಾಳಿಕೆ ಮೂಲಕ 165 ಭರವಸೆ ನೀಡಿದ್ದೆವು. ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಅದರ ಜತೆಗೆ ಪ್ರಣಾಳಿಕೆಯಲ್ಲಿ ಹೇಳದ 30 ಕಾರ್ಯಕ್ರಮ ಕೊಟ್ಟಿದ್ದೇವೆ. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ನಾವು ಕೊಟ್ಟ ಮಾತಿಗೆ ತಪ್ಪಲ್ಲ ಎಂದರು.
ಕಾಂಗ್ರೆಸ್ ಪಕ್ಷ ಇಡೀ ರಾಜ್ಯದಲ್ಲಿ ಜನಪರ ಹೋರಾಟ ಮಾಡಿಕೊಂಡು ಹುಬ್ಬಳ್ಳಿಯಲ್ಲಿ ಮಹದಾಯಿ ಯೋಜನೆ ತ್ವರಿತ ಜಾರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಲು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಡಿ.30ರಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದೆವು. ಕಳಸಾ ಬಂಡೂರಿ ನಾಲಾ ಯೋಜನೆಯನ್ನು ತೀವ್ರಗತಿಯಲ್ಲಿ ಪ್ರಾರಂಭಿಸುವಂತೆ ಆಗ್ರಹಿಸಲು ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಮಾಡಲು 15 ದಿನಗಳ ಹಿಂದೆ ಕಾಂಗ್ರೆಸ್ನ ಎಲ್ಲ ನಾಯಕರು ದೆಹಲಿಯಲ್ಲಿ ತೀರ್ಮಾನ ಮಾಡಿದ್ದೆವು. ನಾವು ಇಲ್ಲಿ ಸಮಾವೇಶ ಘೋಷಣೆ ಮಾಡಿದ ನಂತರ ಬಿಜೆಪಿಯವರು ಎಚ್ಛೆತ್ತುಕೊಂಡು ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಈಗ ಈ ಯೋಜನೆ ಡಿಪಿಆರ್ ಅನುಮೋದನೆ ಮಾಡಿದ್ದೇವೆ ಎಂದು ನಿನ್ನೆ ವಿಜಯೋತ್ಸವ ಆಚರಿಸಿದ್ದಾರೆ ಎಂದಿದ್ದರು.