'ಏನಾದ್ರೂ ಮಾಡ್ರಿ ರೈತರಿಗೆ 8 ತಾಸು ಕರೆಂಟ್ ಕೊಡಿ'
ಧಾರವಾಡ, ಅಕ್ಟೋಬರ್ 05 : 'ಕರ್ನಾಟಕ ರಾಜ್ಯ ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿದೆ. ಆದರೆ, ಸರ್ಕಾರವೂ ಎಲ್ಲಿಂದಲಾದರೂ ತಂದು ನಮ್ಮ ರೈತರಿಗೆ 8 ಗಂಟೆ ಕಾಲ ವಿದ್ಯುತ್ ಪೂರೈಸಬೇಕೆಂದು' ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಒತ್ತಾಯಿಸಿದ್ದಾರೆ.
ಭಾನುವಾರ ಕಲಘಟಗಿಯಲ್ಲಿ ಆಯೋಜಿಸಿದ್ದ ರೈತ ಚೈತನ್ಯ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ರಾಜ್ಯದಲ್ಲಿ ಇಲ್ಲಿಯ ತನಕ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರ ಇಲ್ಲಿಯ ತನಕ ರೈತರ ಆತ್ಮಹತ್ಯೆ ತಡೆಯಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ' ಎಂದು ಆರೋಪಿಸಿದರು. [ಚಿತ್ರಗಳು : ಬಳ್ಳಾರಿಯಲ್ಲಿ ರೈತ ಚೈತನ್ಯ ಯಾತ್ರೆ ಆರಂಭಿಸಿದ ಬಿಜೆಪಿ]
'ಕಳೆದ 4 ತಿಂಗಳುಗಳಿಂದ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದೆ. ಆದರೆ, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ರಾಹುಲ್ ಗಾಂಧಿ ಅವರು ಬಂದು ಹೋದ ನಂತರ ರೈತರಿಗೆ ಪರಿಹಾರ ವಿತರಣೆ ಮಾಡಲಿದೆಯೇ?' ಎಂದು ಜೋಶಿ ಪ್ರಶ್ನಿಸಿದರು. [ರೈತರ ಬಗ್ಗೆ ಚರ್ಚೆಗೆ ಅಧಿವೇಶನ ಕರೆಯಿರಿ: ಬಿಎಸ್ ವೈ]
ಕರ್ನಾಟಕ ಬಿಜೆಪಿ ಬಳ್ಳಾರಿಯಿಂದ-ನರಗುಂದದವರೆಗಿನ 2ನೇ ಹಂತದ ರೈತ ಚೈತನ್ಯ ಯಾತ್ರೆಗೆ ಗುರುವಾರ ಬಳ್ಳಾರಿಯಲ್ಲಿ ಚಾಲನೆ ನೀಡಿದೆ. ಅಕ್ಟೋಬರ್ 1 ರಿಂದ 11 ರ ತನಕ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ನಾಯಕರ ಮೂರು ತಂಡ ಯಾತ್ರೆ ನಡೆಸಲಿದೆ. ಕಲಘಟಗಿ ಯಾತ್ರೆಯ ಚಿತ್ರ, ವಿವರಗಳು.... [ಚಿತ್ರ: ಕಿರಣ ಬಾಕಳೆ, ಹುಬ್ಬಳ್ಳಿ]

ಡಿ.ಕೆ.ಶಿವಕುಮಾರ್ ಏನು ಮಾಡುತ್ತಿದ್ದಾರೆ?
'ಇಂಧನ ಸಚಿವ ಡಿ.ಕೆ.ಶಿವಕುಮಾರ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ ಪ್ರಹ್ಲಾದ್ ಜೋಶಿ ಅವರು, ರಾಜ್ಯದಲ್ಲಿನ ವಿದ್ಯುತ್ ಕೊರತೆ ನೀಗಿಸಲು ಕಿಂಚಿತ್ತೂ ಪ್ರಯತ್ನಿಸದೇ ಇರುವುದು ಸರ್ಕಾರದ ಆಡಳಿತಕ್ಕೆ ಕೈಗನ್ನಡಿಯಾಗಿದೆ' ಎಂದು ದೂರಿದರು.

'ಮೋದಿಯವರನ್ನು ದೂಷಿಸುವುದು ಏಕೆ?'
'ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ 1 ಲಕ್ಷ 20 ಸಾವಿರ ಕೋಟಿ ರೂ.ಗಳನ್ನು ನೀಡಲಿದೆ ಎಂದು ಹೇಳಿದ ಪ್ರಹ್ಲಾದ್ ಜೋಶಿ ಅವರು, ಕಳಸಾ ಬಂಡೂರಿ ವಿಚಾರದಲ್ಲೂ ಸಿದ್ದರಾಮಯ್ಯ ಮೋದಿಯವರನ್ನೇ ದೂಷಿಸುತ್ತಿದ್ದಾರೆ. ಆದರೆ, ತಾವೇ ಏಕೆ ಎರಡೂ ರಾಜ್ಯಗಳ ಪ್ರತಿಪಕ್ಷಗಳ ಮುಖಂಡರ ಜೊತೆ ಚರ್ಚೆ ನಡೆಸಬಾರದು? ಎಂದು ಪ್ರಶ್ನಿಸಿದರು.

'ಯಡಿಯೂರಪ್ಪ ರಾಜ್ಯ ರಾಜಕಾರಣಕ್ಕೆ'
ರೈತ ಚೈತನ್ಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು, 'ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಯಡಿಯೂರಪ್ಪ ರಾಜ್ಯ ರಾಜಕಾರಣಕ್ಕೆ ಬರಲಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿಯೇ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಗಿಳಿಯಲಿದ್ದಾರೆ' ಎಂದರು.

'ರೈತರ ಸಮಸ್ಯೆಯನ್ನು ಬಿಜೆಪಿ ಬಗೆಹರಿಸಲಿದೆ'
'ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು ರೈತರ ಎಲ್ಲಾ ಸಮಸ್ಯೆಗಳನ್ನು ನಮ್ಮ ಪಕ್ಷ ಪರಿಹರಿಸಲಿದೆ' ಎಂದು ಶ್ರೀರಾಮುಲು ಭರವಸೆ ನೀಡಿದರು.

'ಪವರ್ ಮಿನಿಸ್ಟರ್ಗೆ ಪವರ್ ಇಲ್ಲ'
'ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದ್ದರೂ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಪವರ್ಲೆಸ್ ಆಗಿದ್ದಾರೆ' ಎಂದು ಶ್ರೀರಾಮುಲು ವ್ಯಂಗ್ಯವಾಡಿದರು.












Click it and Unblock the Notifications