ಹನುಮಂತಪ್ಪನ ಸಾವಿಗೆ ಬಿಕ್ಕಿಬಿಕ್ಕಿ ಅಳುತ್ತಿರುವ ಬೆಟದೂರು
ಧಾರವಾಡ, ಫೆಬ್ರವರಿ 11 : ಹುತಾತ್ಮನಾದ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದನ ಊರು ಬೆಟದೂರಿನಲ್ಲಿ ಶೋಕದ ಕಟ್ಟೆಯೊಡೆದಿದೆ, ಬಂಧುಗಳು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಸಾವಿನೊಂದಿಗೆ ಸೆಣಸಾಡಿ ಗೆದ್ದು ತಮ್ಮೂರಿನ ಯುವಕ ಹಳ್ಳಿಗೆ ಮತ್ತೆ ಬಂದೇ ಬರುತ್ತಾನೆ ಊರಿಗೆ ಊರೇ ಹಾರೈಸುತ್ತಿತ್ತು. ಹನುಮಂತಪ್ಪ ಕೊಪ್ಪದ ಇನ್ನೂ ಜೀವಂತವಿದ್ದಾನೆ ಎಂದು ಮೂರು ದಿನಗಳ ಹಿಂದೆ ತಿಳಿದುಬಂದಾಗ ಊರಿಗೆ ಊರೇ ಸಂಭ್ರಮಿಸಿತ್ತು. ಈಗ ಗ್ರಾಮದ ಜನರೆಲ್ಲ ಕಂಬನಿ ಮಿಡಿಯುತ್ತಿದ್ದಾರೆ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]
ಹನುಮಂತಪ್ಪ ಈ ರೀತಿ ಸಾವನ್ನಪ್ಪುತ್ತಾನೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ ಎಂದು ಅವರ ಸೋದರ ಸಂಬಂಧಿ ರಮೇಶ್ ಗದ್ಗಿತರಾದರು. ಹನುಮಂತಪ್ಪನ ಜೀವ ಉಳಿಸಲು ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದರು, ಅವರಿಗೆ ಧನ್ಯವಾದಗಳು. ಎಲ್ಲವೂ ದೈವೇಚ್ಛೆ ಎಂದು ಕಣ್ಣೀರಧಾರೆ ಹರಿಸಿದರು. [ಹುತಾತ್ಮರಾದ ವೀರ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ]
ಹತ್ತು ದಿನಗಳ ಹಿಂದೆ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸಿದಾಗ 10 ಯೋಧರು ಸಿಲುಕಿಕೊಂಡಿದ್ದರೆ. ಉಳಿದವರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಗಟ್ಟಿ ಗುಂಡಿಗೆಯ ಹನುಮಂತಪ್ಪ ಆರು ದಿನಗಳ ನಂತರವೂ ಜೀವ ಹಿಡಿದುಕೊಂಡಿದ್ದರು.
ಆರ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಶುರುಮಾಡಿದಾಗ ಅವರ ತಾಯಿ ಬಸಮ್ಮ ಭಾರೀ ಸಂತಸಗೊಂಡಿದ್ದರು. ಮಗ ವಾಪಸ್ ಬರಲೆಂದು ಹಾರೈಸುತ್ತ, ಸೊಸೆಯೊಡನೆ ದೆಹಲಿಗೆ ತೆರಳಿದ್ದರು. ಆದರೆ ವಿಧಿಯ ಆಟವೇ ಬೇರೆಯದಾಗಿತ್ತು. ಕನಿಷ್ಠಪಕ್ಷ, ಆತನ ಕೊನೆಯ ಸಮಯದಲ್ಲಿ ಅವರಾದರೂ ಇದ್ದರಲ್ಲ ಎಂದು ಹೇಳುತ್ತ ರಮೇಶ್ ಜೋರಾಗಿ ಅಳಲಾರಂಭಿಸಿದರು.
ಊರಿನಲ್ಲಿರುವ ಹನುಮಂತಪ್ಪ ಮನೆ ಶ್ರೀ ಬಸವೇಶ್ವರ ನಿಲಯದ ಮುಂದೆ ಜನರೆ ನೆರೆದಿದ್ದಾರೆ. ನಮ್ಮ ಕಣ್ಣ ಮುಂದೆಯೇ ಬೆಳೆದ ಹುಡುಗ ಭಾರೀ ಧೃಡಚಿತ್ತದವನಾಗಿದ್ದ, ದೇಶಕ್ಕಾಗಿ ಜೀವವನ್ನೇ ಮುಡುಪಿಡುತ್ತೇನೆ ಎಂದು ಹೇಳುತ್ತಿದ್ದ. ದೇವರೇ ಆತನನ್ನು ಕರೆಸಿಕೊಂಡ ಎಂದು ಅವರು ಕಂಬನಿ ಮಿಡಿಯುತ್ತಿದ್ದಾರೆ. [ಹನುಮಂತಪ್ಪ ಹುಟ್ಟೂರಿನಲ್ಲಿ ಗ್ರಾಮಸ್ಥರ ಪ್ರಾರ್ಥನೆ]
ಶೆಟ್ಟರ್ ಭೇಟಿ : ಯೋಧ ಹನುಮಂಪ್ಪ ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಜಗದೀಶ್ ಶೆಟ್ಟರ ಹನುಮಂತಪ್ಪನವರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹು-ಧಾ ಜಿಲ್ಲಾ ವಕ್ತಾರ ವೀರೇಶ ಸಂಗಳದ ಮತ್ತಿತರರು ಇದ್ದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಮತ್ತು ಶಾಸಕ ಸಿ.ಎಸ್.ಶಿವಳ್ಳಿ ಯೋಧನ ಮನೆಗೆ ಬಂದು ಕುಟುಂಬಕ್ಕೆ ಸಾಂತ್ವನ ಹೇಳಿದರು. [ಫೋಟೋ : ರವೀಂದ್ರ ಹಳಿಜೋಳ]