ಖಡಕ್ ಅಧಿಕಾರಿ ವಿನೋತ್ ಪ್ರಿಯಾ ವರ್ಗಾವಣೆ ರದ್ದು
ಹುಬ್ಬಳ್ಳಿ, ಸೆಪ್ಟೆಂಬರ್ 01 : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ವಿನೋತ್ ಪ್ರಿಯಾ ಅವರ ವರ್ಗಾವಣೆಯನ್ನು ರಾಜ್ಯ ಸರಕಾರ ಕೊನೆಗೂ ರದ್ದು ಮಾಡಿದೆ. ಅವರ ವರ್ಗಾವಣೆ ರದ್ದುಪಡಿಸಿ ಗುರುವಾರ ಆದೇಶ ಹೊರಡಿಸಿದೆ.
ಖಡಕ್ ಅಧಿಕಾರಿ ಎಂದೇ ಹೆಸರು ಪಡೆದಿದ್ದ ವಿನೋತ್ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಸ್ಥೆಯಲ್ಲಿ ನಡೆಯುತ್ತಿದ್ದ ಅನೇಕ ಭ್ರಷ್ಟಾಚಾರಗಳನ್ನು ಬಯಲಿಗೆಳದಿದ್ದರು. ಭ್ರಷ್ಟ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿರ್ಭಿಡೆಯಿಂದ ಅಮಾನತುಗೊಳಿಸಿ ತನಿಖೆಗೆ ಸೂಚಿಸುತ್ತಿದ್ದರು. ನಿರ್ದೇಶಕಿಯ ವರ್ಗಾವಣೆಗೆ ಮಹಾನಗರದ ಅನೇಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.[ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕನಸು ನನಸಾಗುವುದೇ?]
ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಪಾರದರ್ಶಕತೆಯನ್ನು ಜಾರಿಗೆ ತಂದಿದ್ದ ವಿನೋತ್ ಖಡಕ್ ಅಧಿಕಾರಿಯಾಗಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಕಳೆದ ವಾರ ಸರಕಾರ ಇವರನ್ನು ವರ್ಗಾವಣೆ ಮಾಡಿ ಆದೇಶ ಜಾರಿಗೊಳಿಸಿತ್ತು. ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಹಗರಣಗಳ ಕುರಿತು ಟಿವಿ ವಾಹಿನಿಯೊಂದು ನಿನ್ನೆಯಷ್ಟೇ ವಿಶೇಷ ವರದಿಯೊಂದನ್ನು ಪ್ರಸಾರ ಮಾಡಿತ್ತು.[ಮಹಾದಾಯಿ ವಿವಾದ : ನ್ಯಾಯಮಂಡಳಿ ಕದ ತಟ್ಟಲಿದೆ ಕರ್ನಾಟಕ]
ಕೊಪ್ಪಳ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದ ವಿನೋತ್ ಅವರ ವರ್ಗಾವಣೆ ರದ್ದಾಗಿರುವುದು ನೌಕರರ ವರ್ಗ ಮತ್ತು ನಿವೃತ್ತ ನೌಕರರ ವಲಯಕ್ಕೆ ಸಂತಸ ಮೂಡಿಸಿದೆ. ಹಲವಾರು ಸಂಘ-ಸಂಸ್ಥೆಗಳು ವರ್ಗಾವಣೆ ರದ್ದಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿವೆ.[ರೋಹಿಣಿ ಸಿಂಧೂರಿ ಸೇರಿ 9 ಐಎಎಸ್ ಅಧಿಕಾರಿಗಳು ವರ್ಗ]
ಈಗಾಗಲೇ ಕಳಸಾ-ಬಂಡೂರಿ ಹೋರಾಟದಿಂದ ಸಂಸ್ಥೆಯು ದಿನಕ್ಕೆ ಒಂದು ಕೋಟಿ ರು.ಗಳಷ್ಟು ನಷ್ಟ ಅನುಭವಿಸುತ್ತಿದೆ. ವಿನೋತ್ ಪ್ರಿಯಾ ಅವರು ಅಧಿಕಾರದಲ್ಲಿದ್ದಲ್ಲಿ ಸಂಸ್ಥೆಯ ನಷ್ಟವನ್ನು ಸರಿದೂಗಿಸಲು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಂಘಟನೆಗಳ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.