ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ, ಸಾವಿತ್ರಿ ಪೂಜಾರ್ಗೆ ಸನ್ಮಾನ
ಧಾರವಾಡ, ಅಕ್ಟೋಬರ್, 31: ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಸಾವಿತ್ರಿ ಪೂಜಾರ್ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಧಾರವಾಡ ಜಿಲ್ಲಾಡಳಿತ ಹಾಗೂ ನವಲಗುಂದ ತಾಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಅನಿಲ ಬಡಿಗೇರ ಸಾವಿತ್ರಿ ಪೂಜಾರ್ ಮನೆಗೆ ಭೇಟಿ ನೀಡಿ, ಸನ್ಮಾನಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಶುಭಹಾರೈಸಿದರು.
ಸಾವಿತ್ರಿ ಪೂಜಾರ್ ಜೀವನದ ಹಾದಿ; ಕಡು ಬಡತನದಲ್ಲಿ ಹುಟ್ಟಿದ್ದ ಸಾವಿತ್ರಿ ಗೀಗೀ ಪದಗಳ ಮೂಲಕ ಜನಪದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಜನಪದ ಕಲಾವಿದೆ ಸಾವಿತ್ರಿ ಶಿವಪ್ಪ ಪೂಜಾರ್ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದೇವದಾಸಿಯರ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿರುವ ಇವರು ಅವರಿಗಾಗಿ ಏನಾದರೂ ಮಾಡಬೇಕು ಎಂದು ಪಣತೊಟ್ಟಿದ್ದರು. ಅದರಂತೆಯೇ ದೇವದಾಸಿ ವಿಮೋಚನಾ ಸಂಘಟನೆಯಲ್ಲಿ ಸಾವಿತ್ರಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ದೇವದಾಸಿ ಪದ್ಧತಿ ವಿರುದ್ಧ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಅವರಿಗೆ ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಜನಪದ ಹಾಡುಗಳ ಮೂಲಕ, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅನೇಕ ಸಂಘ, ಸಂಸ್ಥೆಗಳಲ್ಲೂ ಇವರು ಗುರುತಿಸಿಕೊಂಡಿದ್ದಾರೆ.
ಸಾವಿತ್ರಿಯವರ ಸಾಧನೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಜಾನಪದ ಕೋಗಿಲೆ ಫಕ್ಕಿರಪ್ಪ ಗುಡಿಸಾಗರ ಪ್ರಶಸ್ತಿ, ಜಿಲ್ಲಾಡಳಿತದಿಂದ ಬಾಬು ಜಗಜೀವನರಾಮ್ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.

ಸಾಲುಮರದ ನಿಂಗಣ್ಣನಿಗೆ ರಾಜ್ಯೋತ್ಸವ ಪ್ರಶಸ್ತಿ; ಕೂಲಿ ಮಾಡುತ್ತಲೇ ಕಳೆದ 20 ವರ್ಷಗಳಲ್ಲಿ 1,000ಕ್ಕೂ ಹೆಚ್ಚು ಮರ ಬೆಳೆಸಿದ ಸಾಲು ಮರದ ನಿಂಗಣ್ಣನಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ರಾಮನಗರ ತಾಲೂಕಿನ ಅರೆಹಳ್ಳಿ ಗ್ರಾಮದ ನಿಂಗಣ್ಣ ತುಂಡು ಭೂಮಿ ಇಲ್ಲದೇ ಮರ ಬೆಳಸುತ್ತಾ ನಿಸ್ವಾರ್ಥ ಪರಿಸರ ಸೇವೆ ಸಲ್ಲಿಸಿದ್ದಾರೆ. ಹೀಗೆ ನಿಂಗಣ್ಣನ ನಿಸ್ವಾರ್ಥ ಪರಿಸರ ಸೇವೆ ಗುರುತಿಸಿ ಸರ್ಕಾರ ರಾಜ್ಯೋತ್ಸ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಇದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಮೊದಲ ಬಾರಿ 5 ಲಕ್ಷ ರೂಪಾಯಿ ನಗದು 25 ಗ್ರಾಂ ಬಂಗಾರ ಹಾಗೂ ಪ್ರಶಸ್ತಿ ಫಲಕ ನೀಡಿ ಸಾಲು ಮರದ ನಿಂಗಣ್ಣ ಅವರನ್ನು ಗೌರವಿಸಲಿದ್ದಾರೆ.
ಸಾಲು ಮರದ ನಿಂಗಣ್ಣ ಕಿಡ್ನಿ ಮತ್ತು ಮೂತ್ರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮೂರು ತಿಂಗಳಿಗೆ ಒಮ್ಮೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ತನ್ನ ಆನಾರೋಗ್ಯದ ನಡುವೆಯು ಅವರಲ್ಲಿನ ಪರಿಸರ ಕಾಳಜಿ ಮಾತ್ರ ಇನ್ನು ಬತ್ತಿಲ್ಲ. ಇಂದಿಗೂ ಮರಗಿಡಗಳ ಪೋಷಣೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.












Click it and Unblock the Notifications