ವರುಣನ ಆರ್ಭಟ ನೂರಕ್ಕೂ ಹೆಚ್ಚು ಕುರಿಗಳ ಸಾವು, ಬಸ್ನಲ್ಲಿ ರಾತ್ರಿ ಕಳೆದ ಮಕ್ಕಳು
ಧಾರವಾಡ, ಅಕ್ಟೋಬರ್ 1 : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಧಾರವಾಡ ಅಕ್ಷರಶಃ ನಲುಗಿ ಹೋಗಿದೆ. ಕೆಲವು ದಿನಗಳು ಬಿಡುವು ಕೊಟ್ಟು ಮತ್ತೆ ಆರಂಭವಾಗಿರುವ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ.
ಮಳೆಕಾರಣ ಗೋಡೌನ್ ಒಳಗಡೆ ಕೂಡಿ ಹಾಕಲಾಗಿದ್ದ ನೂರಕ್ಕೂ ಹೆಚ್ಚು ಕುರಿಗಳು ಸತ್ತಿರುವ ಘಟನೆ ಹಳೇ ಹುಬ್ಬಳ್ಳಿಯ ಮೇಧಾರ ಓಣಿಯ ಕುಂಬಾರ ಸಾಲ ಹತ್ತಿರದ ಮಟನ್ ಮಾರುಕಟ್ಟೆಯಲ್ಲಿ ನಡೆದಿದೆ.
ಶುಕ್ರವಾರ ವರುಣನ ಅಬ್ಬರಕ್ಕೆ ಕುರಿಗಳನ್ನು ಮಾರುಕಟ್ಟೆಯ ಗೋಡೌನ್ ಒಳಗೆ ಕೂಡಿ ಹಾಕಲಾಗಿತ್ತು. ಸಂಜೆ ಮಳೆಯಾಗಿದ್ದರಿಂದ ಗೋಡೌನ್ ಒಳಗೆ ನೀರು ನುಗ್ಗಿದ್ದರಿಂದ ನೂರಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಹಾಗೂ ಕುರಿಗಳ ಮಾಲೀಕರು ದೌಡಾಯಿಸಿದ್ದು, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
Karnataka Rains : ಕರ್ನಾಟಕದಲ್ಲಿ ಮತ್ತೆ ಮಳೆ ದುರ್ಬಲ: ನಿರಾತಂಕ
ಬಸ್ ನಲ್ಲಿಯೇ ರಾತ್ರಿ ಕಳೆದ ವಿದ್ಯಾರ್ಥಿಗಳು
ಧಾರವಾಡ ಜಿಲ್ಲಾಧ್ಯಂತ ಶುಕ್ರವಾರ ಸುರಿದ ಮಳೆ ಹಿನ್ನಲೆಯಲ್ಲಿ ಶಾಲೆ ಮುಗಿಸಿ ಮನೆಗೆ ತೆರಳಬೇಕಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಸ್ನಲ್ಲಿ ಸಿಲುಕಿ ಪರದಾಡಿದರು. ಕುಂದಗೋಳ ತಾಲೂಕಿನ ಸಂಶಿ-ಚಾಕಲಬ್ಬಿ ನಡುವಿನ ಹಳ್ಳ ತುಂಬಿದ ಪರಿಣಾಮ ಬಸ್ ನಲ್ಲಿಯೇ ಇಡೀ ದಿನ ಕಾಲ ಕಳೆಯುವಂತಾಗಿದ್ದು, ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗುವಂತೆ ಮಾಡಿತ್ತು.
ಮಕ್ಕಳು ಬಸ್ನಲ್ಲಿ ಕಾಲ ಕಳೆದ ವಿಡಿಯೋ ವೈರಲ್ ಆಗಿದೆ. ಹಳ್ಳ ತುಂಬಿದ ಹಿನ್ನಲೆ ಬಸ್ಸಿನಲ್ಲೇ ನೂರಾರೂ ವಿದ್ಯಾರ್ಥಿಗಳು ಪ್ರಾಣ ಸಂಕಟದಿಂದ ಕಾಲ ಕಳೆದಿದ್ದು ಸ್ಥಳೀಯ ಜನ ಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿ ಬಾರಿಯು ಮಳೆ ಬಂದಾಗ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರಿಯಾದ ರಸ್ತೆ ಹಾಗೂ ಹಳ್ಳಕ್ಕೆ ಉತ್ತಮವಾದ ಸೇತುವೆ ನಿರ್ಮಿಸುವಂತೆ ಈ ಭಾಗದ ಜನ ಹಲವು ಬಾರಿ ಆಗ್ರಹಿಸಿದರು ಪ್ರಯೋಜನವಾಗಿಲ್ಲ. ಆದ್ದರಿಂದ ನಮ್ಮ ಮಕ್ಕಳಿಗೆ ಏನಾದರೂ ಆಗಿದ್ದರೆ ಯಾರೂ ಹೊಣೆ ಎಂದು ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.