ಪೂರ್ವ ಮುಂಗಾರು ಮಳೆ ಕ್ಷೀಣ : ರೈತರಿಗೆ ಕೆಲವು ಸಲಹೆಗಳು
ಧಾರವಾಡ, ಮೇ 10 : ಈ ವರ್ಷ ಪೂರ್ವ ಮುಂಗಾರು ಕ್ಷೀಣವಾಗಿದ್ದು ಮೇ ತಿಂಗಳ ತನಕ ನಿರೀಕ್ಷಿತ ಮಳೆಯಾಗಿಲ್ಲ. ವಾಡಿಕೆ ಮಳೆಯ ಪ್ರಮಾಣದಲ್ಲಿ ಶೇಕಡ 35 ರಿಂದ 40 ರಷ್ಟು ಮಳೆ ಕಡಿಮೆಯಾಗಿದೆ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಮಳೆ ಕಡಿಮೆಯಾಗಿರುವುದರಿಂದ ಮಳೆಯಾಶ್ರಿತ ವಾರ್ಷಿಕ ಬೆಳೆಗಳ ಬಿತ್ತನೆ ಗಣನೀಯವಾಗಿ ಕುಂಠಿತವಾಗಿದೆ. ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ರೈತರಿಗೆ ಹಲವು ಸಲಹೆಗಳನ್ನು ನೀಡಲಾಗಿದೆ. ಬಹುವಾರ್ಷಿಕ ಹಣ್ಣಿನ ಬೆಳೆಗಳು ಮತ್ತು ಪ್ಲಾಂಟೇಶನ್ ಬೆಳೆಗಳನ್ನು ಅನಿಶ್ಚಿತ ಮಳೆಯಿಂದ ಸಂರಕ್ಷಿಸಲು ಕ್ರಮಗಳನ್ನು ತಿಳಿಸಲಾಗಿದೆ.
ದೇಶದಲ್ಲಿ ಇನ್ನೆಷ್ಟು ದಿನ ಬಿಸಿಗಾಳಿ ಮುಂದುವರೆಯುತ್ತೆ? ಇಲ್ಲಿದೆ ಮಾಹಿತಿ
ಗಿಡದ ಬುಡದ ಮಣ್ಣಿನ ಮೇಲೆ ತ್ಯಾಜ್ಯ ವಸ್ತು ಅಥವಾ ಪ್ಲಾಸ್ಟಿಕ್ ಹಾಳೆಯಿಂದ ಹೊದಿಕೆ ಮಾಡಬೇಕು. ಭೂಮಿಯ ನೀರು ಅವಿಯಾಗುವುದನ್ನು ಕಡಿಮೆ ಮಾಡಿ ತೇವಾಂಶ ಸಂರಕ್ಷಣೆ, ಕಳೆಗಳ ನಿಯಂತ್ರಣ ಹಾಗೂ ಮಣ್ಣಿನ ಉಷ್ಣಾಂಶವನ್ನು ಕಡಿಮೆ ಮಾಡಲು ಒಣಹುಲ್ಲು, ತರಗೆಲೆ ಅಥವಾ ಸ್ಥಳೀಯವಾಗಿ ಸಿಗುವಂತಹ ತ್ಯಾಜ್ಯ ವಸ್ತುಗಳನ್ನು ಬಳಸಬೇಕು ಎಂದು ಸಲಹೆ ನೀಡಲಾಗಿದೆ.
ಮೇ 23ರ ನಂತರ 1.5 ಲಕ್ಷ ರೈತರ 900 ಕೋಟಿ ಸಾಲಮನ್ನಾ ಬಿಡುಗಡೆ
ಸುಮಾರು 5 ಸೆಂ.ಮೀ. ದಪ್ಪವಾಗಿ ಗಿಡದ ಬುಡ ಭಾಗದಲ್ಲಿ 1 ರಿಂದ 2 ಮೀ. ಸುತ್ತಲೂ ಮಣ್ಣಿನ ಮೇಲೆ ಹೊದಿಕೆ ಹೊದಿಸಬೇಕು. ಇತ್ತೀಚಿನ ದಿನಗಳಲ್ಲಿ ಕಪ್ಪು ಬಣ್ಣದ ಪಾಲಿಥಿನ್ ಹಾಳೆಗಳನ್ನು ಸಹ ಹೊದಿಕೆಗೆ ಬಳಸಲಾಗುತ್ತದೆ.
ಇಂಗು ಗುಂಡಿಗಳ ನಿರ್ಮಾಣ
ಮಣ್ಣಿನ ಸಾವಯವ ಅಂಶಗಳನ್ನು ಹೆಚ್ಚಿಸಲು ಬೆಳೆ ತ್ಯಾಜ್ಯಗಳು, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಎರೆಗೊಬ್ಬರಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಸಾವಯವ ಅಂಶ ಹೆಚ್ಚುವುದಲ್ಲದೆ ಮಣ್ಣಿನ ರಚನೆ ಸುಧಾರಿಸಿ, ನೀರು ಹಿಡಿಯುವ ಸಾಮರ್ಥ್ಯ ವೃದ್ಧಿಯಾಗುವುದು ಹಾಗೂ ಫಲವತ್ತತೆ ಹೆಚ್ಚಾಗುವುದು. ಇಂಗು ಗುಂಡಿಗಳನ್ನು ಬೆಳೆಯ ಅಂತರಕ್ಕೆ ಅನುಗುಣವಾಗಿ ಸಾಲಿನ ಮಧ್ಯಂತರದಲ್ಲಿ 1 ಅಡಿ ಅಗಲ ಮತ್ತು 2 ಅಡಿ ಉದ್ದ ಅಳತೆಯಲ್ಲಿ ನಿರ್ಮಿಸುವುದರಿಂದ ಮಳೆಯ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಬಹುದು.
ಪಾತಿ ನಿರ್ಮಿಸುವುದು
ಪ್ರತಿಯೊಂದು ಮರಕ್ಕೂ ಒಂದು ಸಣ್ಣ ಜಲಾನಯನದ ಅವಕಾಶ (ಪಾತಿ) ನಿರ್ಮಿಸಿ ಅದರಲ್ಲಿ ನೀರನ್ನು ಹಿಡಿದಿಡಬೇಕು, ಈ ಕಿರು ಜಲಾನಯನ ಪ್ರದೇಶವನ್ನು ಭೂಮಿಯ ಇಳಿಜಾರು, ಬೆಳೆಗಳಿಗೆ ನೀರಿನ ಅವಶ್ಯಕತೆ, ಹರಿಯುವ ವೇಗ ಮತ್ತು ಮರ ಹರಡುವ ವಿಸ್ತಾರ, ಇವುಗಳ ಆಧಾರದ ಮೇಲೆ ಲೆಕ್ಕಾಚಾರವಾಗಿ ಅರ್ಧ ಚಂದ್ರಾಕಾರದ ಬದುಗಳನ್ನು ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸಿ, ಮೇಲ್ಭಾಗದಲ್ಲಿ ನೀರು ನಿಲ್ಲುವಂತೆ ಮಾಡಬೇಕು.
ನೆರಳನ್ನು ಒದಗಿಸುವಿಕೆ
ಹೊಸದಾಗಿ ನಾಟಿಮಾಡಿದ ಗಿಡಗಳಿಗೆ ಎಲೆ ಒತ್ತಾಗಿರುವ ಮರದ ರೆಂಬೆಗಳನ್ನು ಅಥವಾ ತೆಂಗಿನ ಗರಿಯ ಬುಡದ ಭಾಗವನ್ನು ನೆಟ್ಟು ನೆರಳನ್ನು ಒದಗಿಸುವುದರಿಂದ ಬಿಸಿಲಿನ ತಾಪ ಕಡಿಮೆಯಾಗಿ, ಗಿಡಕ್ಕೆ ರಕ್ಷಣೆ ಕೊಟ್ಟಂತಾಗುತ್ತದೆ.
ನೀರು ಲಭ್ಯವಿದ್ದಲ್ಲಿ ಹನಿ ನೀರಾವರಿ ಅನುಸರಿಸುವುದರಿಂದ ನೀರಿನ ಬಳಕೆಯಲ್ಲಿ ಶೇ. 40 ರಿಂದ 60 ರಷ್ಟು ಉಳಿತಾಯವಾಗುತ್ತದೆ. ಇದಲ್ಲದೆ ಕಳೆಗಳ ನಿರ್ವಹಣೆ, ಆಳುಗಳ ಉಳಿತಾಯ ಮತ್ತು ಬೆಳೆ ಬೆಳವಣಿಗೆಯಾಗುತ್ತದೆ.
ಸಿಂಚನ ನೀರಾವರಿ ಪದ್ದತಿ
ಲಭ್ಯವಿರುವ ನೀರನ್ನು ಸಮರ್ಥವಾಗಿ, ಹೆಚ್ಚಿನ ಬೆಳೆ ಕ್ಷೇತ್ರಕ್ಕೆ ನೀರಾವರಿ ಮಾಡಲು ಸಿಂಚನ ನೀರಾವರಿ ಪದ್ಧತಿ ಸೂಕ್ತವಾಗಿದೆ, ಇದರಿಂದ ಕಡಿಮೆ ಎತ್ತರದಲ್ಲಿರುವ ಬಹುವಾರ್ಷಿಕ ಬೆಳೆಗಳಲ್ಲಿ ಹಾಗೂ ವಾರ್ಷಿಕ ತರಕಾರಿ ಮತ್ತು ಹೂವಿನ ಬೆಳೆಗಳಲ್ಲಿ ಅಗತ್ಯತೆ ತಕ್ಕಂತೆ ಬಳಸಬಹುದು. ನೀರು ಗಿಡಗಳ ಮೇಲೆ ಸಿಂಪರಣೆಯಾಗುವುದರಿಂದ ಗಿಡದ ಹಾಗೂ ಬೆಳೆ ಕ್ಷೇತ್ರದ ಉಷ್ಣತೆ ಕಡಿಮೆಯಾಗಿ ತಂಪು ವಾತಾವರಣ ನಿರ್ಮಾಣವಾಗುವುದರಿಂದ ಬೆಳೆಗಳು ಬರ ಪರಿಸ್ಥಿತಿಯಿಂದ ಸುಧಾರಣೆಗೊಂಡು ಇಳುವರಿ ಕಡಿಮೆಯಾಗುವುದನ್ನು ನಿಯಂತ್ರಿಸಬಹುದು.