ಧಾರವಾಡ; ಲೋಕಾಯುಕ್ತರ ಮಿಂಚಿನ ಸಂಚಾರ, ವಿವಿಧ ಸರ್ಕಾರಿ ಕಚೇರಿಗೆ ಭೇಟಿ!
ಲೋಕಾಯುಕ್ತ ಧಾರವಾಡ ಎಸ್ಪಿ ಸತೀಶ ಚಿಟಗುಪ್ಪಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿತು.
ಧಾರವಾಡ, ಫೆಬ್ರವರಿ 20; ಧಾರವಾಡದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಿಂಚಿನ ಸಂಚಾರ ನಡೆಸಿದರು. ವಿವಿಧ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಲೋಕಾಯುಕ್ತ ಧಾರವಾಡ ಎಸ್ಪಿ ಸತೀಶ ಚಿಟಗುಪ್ಪಿ ನೇತೃತ್ವದಲ್ಲಿ ಡಿವೈಎಸ್ಪಿ ವಿಜಯ ವಿರಾದಾರ ಮತ್ತು ಇನ್ಸ್ಪೆಕ್ಟರ್ ಎಲ್. ಆರ್. ಮುಸಗುಪ್ಪಿ ಸೇರಿದಂತೆ ಅಧಿಕಾರಿಗಳ ತಂಡ ವಿವಿಧ ಕಚೇರಿಗೆ ಭೇಟಿ ನೀಡಿತು.
ಧಾರವಾಡ ನಗರದ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ಇಲಾಖೆ ಕಾರ್ಯವೈಖರಿ, ಸಾರ್ವಜನಿಕ ಸ್ಪಂದನೆ ಕುರಿತು ಪರಿಶೀಲಿಸಿದರು. ಧಾರವಾಡ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಸಾರ್ವಜನಿಕ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯನ್ನು ನಡೆಸಿತು.

ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆಯಾ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕೆಲಸಗಳು, ಸಾರ್ವಜನಿಕ ಅರ್ಜಿಗಳ ಕುರಿತು ವಿಮರ್ಶೆ ಕೈಗೊಂಡಿದ್ದು, ಅಲ್ಲದೇ, ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ದೂರುಗಳ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆಸಿ, ದೂರಿನ ವಿಲೇವಾರಿಗೆ ಸೂಚನೆ ನೀಡಲಾಯಿತು.
ಕಛೇರಿಗಳಿಗೆ ಬರುವ ಸಾರ್ವಜನಿಕರನ್ನು ಅಲೆದಾಡಿಸದಂತೆ ಕೂಡಲೇ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ನಿರ್ದೇಶನ ನೀಡಿತು.
ಜನರಿಂದ ದೂರು; ಲೋಕಾಯುಕ್ತ ಅಧಿಕಾರಿಗಳಿಗೆ ಬಸವರಾಜ ಅರಳಿಕಟ್ಟಿ ಎಂಬುವವರು ತಮ್ಮ ಗ್ರಾಮದಲ್ಲಿರುವ ಪಡಿತರ ನ್ಯಾಯಬೆಲೆ ಅಂಗಡಿಯ ಕುರಿತು ಹಾಗೂ ಸಿದ್ದಪ್ಪ ತಿದಿ ಸಾಃ ಅಮ್ಮಿನಭಾವಿ ಇವರು ಹಾರೋಬೆಳವಡಿ ಹಾಗೂ ಅಮ್ಮಿನಭಾವಿ ಗ್ರಾಮ ಪಂಚಾಯತಿಗಳಲ್ಲಿನ ಸಮಸ್ಯೆಗಳ ಬಗ್ಗೆ ದೂರು ನೀಡಿದರು. ದೂರು ಸ್ವೀಕಾರ ಮಾಡಿದ ಅಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣವೇ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.

ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಧಾರವಾಡದ ಉಳವಿ ಚನ್ನಬಸವೇಶ್ವರ ದೇವಾಲಯದ ಹಿಂಭಾಗದ ಕಾರ್ಮಿಕ ಇಲಾಖೆಗೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿಯೂ ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡಿದರು.
ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರಿಗೆ ವಿನಾಕಾರಣ ಅಲೆದಾಡಿಸದಂತೆ ಸಂಬಂಧಿಸಿದ ಕೆಲಸಗಳನ್ನು ಅವಧಿಯೊಳಗಾಗಿ ಮಾಡಿಕೊಡುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚನೆ ಕೊಟ್ಟರು.
ಅಧಿಕಾರಿಗಳ ತಂಡ ಬಳಿಕ ಧಾರವಾಡ ರಂಗಾಯಣದ ಆವರಣದಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಭೇಟಿ ನೀಡಿತು. ಸರ್ಕಾರಿ ಯೋಜನೆಗಳ ಬಗ್ಗೆ ವಿಚಾರಿಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಭೇಟಿ ನೀಡಿ ಸರ್ಕಾರದಿಂದ ಬಿಡುಗಡೆಯಾದ ವಿವಿಧ ಯೋಜನೆಗಳ ಬಗ್ಗೆ ಅರ್ಹ ಫಲಾನುಭವಿಗಳಿಗೆ ವಿತರಿಸಿದ ಸರ್ಕಾರಿ ಯೋಜನೆಗಳು ಹಾಗೂ ಸರ್ಕಾರಿ ಸೌಲಭ್ಯಗಳ ಬಗ್ಗೆ ಕೈಗೊಂಡ ಕ್ರಮಗಳನ್ನು ಕೇಳಿ ವಿಚಾರಿಸಿ ಮಾಹಿತಿ ಪಡೆದರು.
ಸರ್ಕಾರಿ ಯೋಜನೆಗಳ ಕಡತಗಳನ್ನು ಪರಿಶೀಲಿಸಿ, ನ್ಯೂನ್ಯತೆಗಳನ್ನು ಕೂಡಲೇ ಬಗೆ ಹರಿಸುವಂತೆ ಸೂಕ್ತ ನಿರ್ದೇಶನಗಳನ್ನು ನೀಡಿದರು. ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯಗಳನ್ನು ನೀಡಲು ಸೂಚನೆ ಕೊಟ್ಟರು.
ನಿಮ್ಮ ಸಮಸ್ಯೆಗಳಿಗೆ ಯಾವುದಾದರೂ ಕಛೇರಿಗಳಲ್ಲಿ ವಿನಾಕಾರಣ ಅಲೆದಾಡಿಸುತ್ತಿದ್ದಲ್ಲಿ ಅಥವಾ ಯಾವುದಾದರೂ ಅಧಿಕಾರಿ, ಸಿಬ್ಬಂದಿಯವರು ನಿಮ್ಮ ಕೆಲಸ ಮಾಡಿಕೊಡಲು ಏನಾದರೂ ಬೇಡಿಕೆ ಇಟ್ಟಿದ್ದಲ್ಲಿ ತಕ್ಷಣವೇ ಲೋಕಾಯುಕ್ತರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು.












Click it and Unblock the Notifications