ಎತ್ತಿನಹೊಳೆ ಯೋಜನೆ: ವೀರಪ್ಪ ಮೊಯ್ಲಿಗೆ ಬಹಿರಂಗ ಪತ್ರ
ಹುಬ್ಬಳ್ಳಿ, ಫೆಬ್ರವರಿ, 11: ಕರ್ನಾಟಕ ನೀರಾವರಿ ವೇದಿಕೆಯು ಬೆಂಗಳೂರಿನ ಇನ್ಸ್ ಟಿಟ್ಯೂಟ್ ಆಫ್ ಸಿವಿಲ್ ಇಂಜನೀಯರ್ಸ್ ಸಭಾಂಗಣದಲ್ಲಿ ಫೆ.20 ರಂದು ಎತ್ತಿನಹೊಳೆ ಯೋಜನೆ ಕುರಿತು ವೈಜ್ಞಾನಿಕ ವಿಚಾರ ಸಂಕಿರಣ ಹಮ್ಮಿಕೊಂಡಿದೆ.
ವೈಜ್ಞಾನಿಕ ವಿಚಾರ ಸಂಕಿರಣ ಕರಾವಳಿ ಭಾಗದ ಹಾಗೂ ಬಯಲುಸೀಮೆಯ ಜನರು ಹಾಗು ರಾಷ್ಟ್ರ ಮಟ್ಟದ ಹಿರಿಯ ತಂತ್ರಜ್ಞರು ಆಗಮಿಸುವ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ಕರ್ನಾಟಕ ನೀರಾವರಿ ವೇದಿಕೆ ಕಾರ್ಯನಿರ್ವಹಿಸುತ್ತಿದ್ದು, ಈ ವೇದಿಕೆ ಎತ್ತಿನಹೊಳೆ ಯೋಜನೆ ಕುರಿತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಗೆ ಬಹಿರಂಗ ಪತ್ರ ಬರೆದು ಉತ್ತರಿಸಲು ಕೋರಿದೆ.[ಕಾಂಗ್ರೆಸ್ ವೇದವ್ಯಾಸ ಕೌಲಗಿಯಿಂದ ಪ್ರಹ್ಲಾದ್ ಜೋಶಿಗೆ ಬಹಿರಂಗ ಪತ್ರ]

ಕರ್ನಾಟಕ ನೀರಾವರಿ ವೇದಿಕೆ ಪತ್ರದಲ್ಲಿ ಏನಿದೆ?
ವೀರಪ್ಪ ಮೊಯ್ಲಿಯವರೇ, ನಿಮ್ಮ ಕನಸಿನ ಕೂಸಾದ ಎತ್ತಿನಹೊಳೆ ಯೋಜನೆಗೆ ಬಯಲುಸೀಮೆ ಹೋರಾಟಗಾರರು ಕಲ್ಲು ಹಾಕುತ್ತಿಲ್ಲ. ಆದರೆ ಗರ್ಭಾವಸ್ಥೆಯಲ್ಲಿರುವ ಇದು ಅನೇಕ ದೋಷಗಳನ್ನು ಹೊಂದಿದೆ ಎಂದು ಅನೇಕ ನೀರಾವರಿ ತಜ್ಙರು ಅಭಿಪ್ರಾಯಪಟ್ಟಿದ್ದಾರೆ. ಎತ್ತಿನಹೊಳೆ ಯೋಜನೆಯು ಆರೋಗ್ಯಕರ ಕೂಸಾಗಿ ಸಾವಿರಾರು ವರ್ಷ ಬಯಲುಸೀಮೆಯ ಬಾಯಾರಿಕೆ ಇಂಗಿಸಲಿ ಎಂಬುದೇ ಎಲ್ಲಾ ಹೋರಾಟಗಾರರ ಆಶಯ.
ಕಳೆದ ನಾಲ್ಕು ವರ್ಷಗಳಿಂದ ತಜ್ಞರ ಸಲಹೆಯಿಂದ ಲೋಪದೋಷ ಸರಿಪಡಿಸಿ ಎಂದು ಮನವಿ ಮಾಡಿದರೂ ಸರ್ಕಾರ ಹಿಂಜರಿಯುತ್ತಿದೆ. ಕರಾವಳಿ ಭಾಗದವರು ಬಯಲುಸೀಮೆಗೆ ಕುಡಿಯುವ ನೀರು ಕೊಡುವುದಿಲ್ಲ ಎಂದು ಹೇಳಿಲ್ಲ. ಈ ಅವೈಜ್ಞಾನಿಕ ಯೋಜನೆಯಿಂದ ನಿಮ್ಮ ಬಯಲುಸೀಮೆಗೆ ನೀರು ಬರದೇ, ಪಶ್ಚಿಮಘಟ್ಟಗಳಿಗೂ ಹಾನಿ ಮಾಡಿ ಹಾಗು 13,000 ಕೋಟಿ ತೆರಿಗೆ ಹಣ ಅನಾವಶ್ಯಕವಾಗಿ ಪೋಲು ಮಾಡುವುದರಲ್ಲಿ ಅರ್ಥವಿಲ್ಲ ಎಂಬುದು ಅವರ ನೋವಾಗಿದೆ.[ಎತ್ತಿನಹೊಳೆ ಯೋಜನೆಗೆ ಕರಾವಳಿ ಜನರ ವಿರೋಧವೇಕೆ?]
ಈ ನಿಟ್ಟಿನಲ್ಲಿ ಕರ್ನಾಟಕ ನೀರಾವರಿ ವೇದಿಕೆ ಕಳೆದ 4 ತಿಂಗಳಿಂದ ಕರಾವಳಿ ಭಾಗದ ಹೋರಾಟಗಾರರು, ತಜ್ಙರು, ಪರಿಸರವಾದಿ ಹಾಗೂ ರಾಜಕಾರಣಿಗಳೊಂದಿಗೆ ವಿಚಾರ ವಿನಿಮಯದಲ್ಲಿ ತೊಡಗಿದೆ. ನೇತ್ರಾವತಿ ಪಾತ್ರದ ಕರಾವಳಿ ಭಾಗದಲ್ಲೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ.
ನೇತ್ರಾವತಿ ಭಾಗದಲ್ಲಿರುವ ಜನರ ಸಂಶಯಗಳನ್ನೂ ದೂರ ಮಾಡಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕೊಡದಿದ್ದಲ್ಲಿ ಈ ಯೋಜನೆ ಜಾರಿ ಕಷ್ಟಸಾಧ್ಯ. ಅಲ್ಲಿನ ಭಾಗದ ಬಹುತೇಕರಿಗೆ ಈ ಯೋಜನೆಯನ್ನು ವೈಜ್ಞಾನಿಕ ರೀತಿಯಲ್ಲಿ ಜಾರಿಗೆ ತಂದು ಪರಿಸರಕ್ಕೆ ಹಾನಿಯಾಗದಂತೆ ಅನುಷ್ಟಾನ ಮಾಡುವ ಮುಕ್ತ ಮನಸ್ಸಿದೆ.
ನಳೀನಕುಮಾರ ಕಟೀಲರ ನೇತೃತ್ವದಲ್ಲಿ ಕರಾವಳಿ ತಂಡ ಕೋಲಾರಕ್ಕೆ ಭೇಟಿ ಕೊಟ್ಟು ಸಭೆಯ ನಿರ್ಣಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಿದ್ದಾರೆ. ಬಯಲುಸೀಮೆಗೆ ಕುಡಿಯಲು ಹಾಗೂ ಕೃಷಿಗೆ ನೀರು ಕೊಡಲು ಸರ್ಕಾರ ಯೋಜನೆ ರೂಪಿಸಿದಲ್ಲಿ ನಳೀನಕುಮಾರ್ ಕಟೀಲರವರು ಹೋರಾಡಲು ಸಿದ್ಧರಿದ್ದಾರೆ ಎಂದು ಕರ್ನಾಟಕ ನೀರಾವರಿ ವೇದಿಕೆಯ ಅಧ್ಯಕ್ಷರಾದ ಡಾ.ಮಧು ಸೀತಪ್ಪ ಹೇಳಿದರು. [ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]
ಸರ್ಕಾರಕ್ಕೆ ಎತ್ತಿನಹೊಳೆ ಯೋಜನೆ ವರದಿ ಕಳುಹಿಸಿಕೊಡುವವರು ಯಾರು?
ಕರಾವಳಿ ಭಾಗದ ಪ್ರೊ. ಗಣಪತಿ ಮಯ್ಯ, ಪ್ರೊ. ಯದುಪತಿ ಪುಟ್ಟಿ, ಫ್ರೋ.ದ್ವಾರಕೀಶ್, ಪ್ರೊ. ಟಿ.ವಿ.ರಾಮಚಂದ್ರ, ಲೋಕಸಭಾ ಸದಸ್ಯರಾದ ನಳೀನಕುಮಾರ್ ಕಟೀಲ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ವಿ.ವಿ.ಭಟ್, ಸೋಮಶೇಖರ್, ಬಯಲು ಸೀಮೆಯ ಪ್ರೊ. ಶ್ರೀನಿವಾಸಮೂರ್ತಿ, ರಂಗರಾಜು, ರಾಧಾಕೃಷ್ಣ, ಪ್ರೊ. ಗಣೇಶಯ್ಯ, ಪ್ರೊ. ನಾಯರ್, ಎಲ್ಲಪ್ಪ ರೆಡ್ಡಿ ಇನ್ನೂ ಅನೇಕ ಹಿರಿಯ ತಜ್ಞರು ಭಾಗವಹಿಸಿ, ಚರ್ಚಿಸಿ ಎತ್ತಿನಹೊಳೆ ಯೋಜನೆಯ ಪರಿಷ್ಕರಿಸುವುದರ ಬಗ್ಗೆ ಹಾಗೂ ಬಯಲುಸೀಮೆಗೆ ಬೇರೆ ಮೂಲಗಳಿಂದ ನೀರು ಕೊಡುವುದರ ಬಗ್ಗೆ ಸರ್ವಾನುಮತದ ಮಹತ್ವದ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಡಲಿದ್ದಾರೆ.












Click it and Unblock the Notifications