ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿಗಳು
ಧಾರವಾಡ, ನವೆಂಬರ್ 20 : ಧಾರವಾಡದಲ್ಲಿ ನಡೆಯುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ಪರಿಶೀಲನೆ ನಡೆಸಲಾಯಿತು. 2019ರ ಜನವರಿಯಲ್ಲಿ ಮೂರು ದಿನಗಳ ಕಾಲ ಸಾಹಿತ್ಯ ಜಾತ್ರೆ ನಡೆಯಲಿದೆ.
ಕನ್ನಡ ಸಾಹಿತ್ಯ ಸಮ್ಮೇಳನ ಕೃಷಿ ವಿಶ್ವವಿದ್ಯಾಲಯದ ಆವರಣದ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದು ಜಿಲ್ಲಾಧಿಕಾರಿ ದೀಪಾ ಜೋಳನ್ ಅವರು ಕ್ರೀಡಾಂಗಣ, ಕಟ್ಟಡಗಳು, ಇತರ ಸ್ಥಳಗಳನ್ನು ಅಧಿಕಾರಿಗಳ ಜೊತೆ ವೀಕ್ಷಿಸಿದರು.
ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕ್ರೀಡಾಂಗಣ, ಸಮ್ಮೇಳನದ ಮುಖ್ಯ ವೇದಿಕೆ, ಮಾಧ್ಯಮ ಕೇಂದ್ರ, ಸದಸ್ಯರ ನೋಂದಣಿ ಕೇಂದ್ರ, ಮಾಹಿತಿ ಕೇಂದ್ರ, ಊಟದ ಸ್ಥಳ, ಪುಸ್ತಕ ಮಾರಾಟ ಮಳಿಗೆ, ಪುಸ್ತಕ ಪ್ರದರ್ಶನ ಮಳಿಗೆ, ವಾಹನ ಪಾರ್ಕಿಂಗ್ ಸ್ಥಳ ಸೇರಿದಂತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿಸಲು ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಾರ್ಯಕ್ರಮದ ಮುಖ್ಯ ವೇದಿಕೆಯನ್ನು ಕ್ರೀಡಾಂಗಣದಲ್ಲಿ ನಿರ್ಮಿಸಲಾಗುವುದು. ವೇದಿಕೆಯ ಸಮೀಪದಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗುವುದು. ಸಭಿಕರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಮೈದಾನದ ಸುತ್ತ ಕಲ್ಪಿಸಲಾಗುವುದು' ಎಂದರು.

ಮುಖ್ಯ ವೇದಿಕೆಯ ಮುಂಭಾಗದಲ್ಲಿ ಅಂದರೆ ರೈತ ಸೇವಾ ಕೇಂದ್ರದ ಪಕ್ಕದ ಜಾಗದಲ್ಲಿ ಸಮ್ಮೇಳನಕ್ಕೆ ಬರುವ ಸದಸ್ಯರಿಗೆ ನೊಂದಣಿ ಕೇಂದ್ರಗಳನ್ನು ಮತ್ತು ಮಾಹಿತಿ ಕೇಂದ್ರವನ್ನು ತೆರೆಯಲಾಗುವುದು. ವಿವಿಯ ಮುಖ್ಯ ಕಟ್ಟಡಕ್ಕೆ ಹೋಗುವ ದಾರಿಯ ಮಧ್ಯದಲ್ಲಿರುವ ಕಟ್ಟಡದಲ್ಲಿ ಪುಸ್ತಕ ಮಳಿಗೆ ಮತ್ತು ಅದರ ಪಕ್ಕದ ಜಾಗದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಹಾಗೂ ಅದರ ಮುಂದಿರುವ ಖಾಲಿ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗಿದೆ.












Click it and Unblock the Notifications