ಹುಬ್ಬಳ್ಳಿ-ಧಾರವಾಡ, ಗದಗದಲ್ಲಿ ವಿಶ್ವ ಯೋಗ ದಿನ
ಹುಬ್ಬಳ್ಳಿ, ಜೂನ್, 21: ಹುಬ್ಬಳ್ಳಿ, ಧಾರವಾಡ ಮತ್ತು ಗದಗದಲ್ಲೂ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ ಮನೆ ಮಾಡಿತ್ತು. ನಾಗರಿಕರು, ವಿವಿಧ ಪಕ್ಷಗಳ ಮುಖಂಡರು ಯೋಗ ದಿನದಲ್ಲಿ ಭಾಗವಹಿಸಿದ್ದರು.
ಯೋಗಾಭ್ಯಾಸದಿಂದ ಮಾನವನಲ್ಲಿ ಆತ್ಮಶಕ್ತಿ ವೃದ್ಧಿಯಾಗುತ್ತದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಬೀರೇಂದ್ರಸಿಂಗ್ ಚೌಧರಿ ಹೇಳಿದರು. ಹುಬ್ಬಳ್ಳಿ ಯ ಜಿಮಖಾನಾ ಮೈದಾನದಲ್ಲಿ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ನಿತ್ಯ ಜೀವನದಲ್ಲಿ ಎಲ್ಲರಿಗೂ ಒತ್ತಡಗಳಿರುತ್ತವೆ ಆದರೂ ಯೋಗಾಭ್ಯಾಸಕ್ಕಾಗಿ ಸಮಯ ಮೀಸಲಿಡಬೇಕೆಂದರು.[ಚಿತ್ರಗಳು : ಕರ್ನಾಟಕದ ನಾಯಕರ ಯೋಗ ಪ್ರದರ್ಶನ]

ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೂಡಲ ಸಂಗಮ ಪಂಚಮಶಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪತಂಜಲಿಯಿಂದ ಯೋಗದಿನಾಚರಣೆ: ನಗರದ ಇಂದಿರಾಗಾಜಿನ ಮನೆಯಲ್ಲಿ ಪತಂಜಲಿ ಯೋಗದ ವತಿಯಿಂದ ವಿಶ್ವ ಯೋಗ ದಿನ ಆಚರಿಸಲಾಯಿತು. ಇದರಂಗವಾಗಿ ನಗರದಲ್ಲಿ ಜಾಥಾ ಕೂಡ ನಡೆಯಿತು. ಯೋಗಾಭ್ಯಾಸದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.[ಇಚ್ಛಾಶಕ್ತಿ ಪ್ರಚೋದಿಸಲು ಶಾಸ್ತ್ರಬದ್ಧ ಯೋಗಾಸನ, ಪ್ರಾಣಾಯಾಮ]
ವಿಶ್ವ ಚೇತನ ಕೇಂದ್ರ : ನಗರದ ಕೇಶ್ವಾಪುರ ಭಾಗದಲ್ಲಿರುವ ವಿಶ್ವಚೇತನ ಯೋಗ ಕೇಂದ್ರವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದವರ ಶಾಲೆಯಲ್ಲಿ ಯೋಗ ದಿನಾಚರಣೆ ನೆರವೇರಿಸಲಾಯಿತು. 20 ವರ್ಷಗಳಿಂದ ಯೋಗ ಕಲಿಸುತ್ತಿರುವ ಗುರೂಜಿ ಬಸವರಾಜ ಕುಂಬಾರ ಯೋಗಾಭ್ಯಾಸ ಹೇಳಿಕೊಟ್ಟರು.
ಗದಗದಲ್ಲೂ ಯೋಗ ದಿನದ ಸಂಭ್ರಮ
ಯೋಗ ಬದುಕಿನ ಒಂದು ಕಲೆ, ಯೋಗ ಸಾಧನೆಯಿಂದ ನಿರೋಗ ಹಾಗೂ ಆತ್ಮ ಪರಮಾತ್ಮಗಳ ಮಧುರ ಭಾಂದವ್ಯ ಉಂಟಾಗುತ್ತದೆ ಎಂದು ಜ್ಯೋತಿ ಬ್ರಹ್ಮಕುಮಾರಿ ಅಕ್ಕ ಹೇಳಿದರು.[ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ]
ಅವರು ಮಂಗಳವಾರ ನಗರದ ಹೊಂಬಳ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಿ.ವಾಯ್. ಡೊಳ್ಳಿನ ಮಾತನಾಡಿ, ಯೋಗ ಬೆಳೆದುಬಂದ ದಾರಿ ಹಾಗೂ ಪ್ರಪಂಚಕ್ಕೆ ಯೋಗ ದಿನಾಚರಣೆ ಮಹತ್ವದ ಕುರಿತು ವಿವರಿಸಿದರು.
ಯೋಗಾಸನ, ಪ್ರಾಣಾಯಾಮ, ಶೀತಲಿಕರಣ ವ್ಯಾಯಾಮವನ್ನು 300 ವಿದ್ಯಾರ್ಥಿ ಮಾಡಿದರು. ಯೋಗಾಭ್ಯಾಸದಲ್ಲಿ ಹಲವಾರು ಸಾರ್ವಜನಿಕರು ಪಾಲ್ಗೊಂಡಿದ್ದರಿಂದ ಶಾಲಾ ಮೈದಾನವು ಜಾತ್ರೆಯಂತೆ ಭಾಸವಾಗುತ್ತಿತ್ತು. ಯೋಗದಿಂದ ಏಕಾಗ್ರತೆ, ಶಾಂತಿ ಉಂಟಾಗುತ್ತದೆ ಹೀಗಾಗಿ ಪಾಲ್ಗೊಂಡಿದ್ದೇವೆ ಎಂದು ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡರು.












Click it and Unblock the Notifications