ಚಿತ್ರಗಳು : ಧಾರವಾಡದಲ್ಲಿ ಮತದಾನ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು
ಧಾರವಾಡ, ಏಪ್ರಿಲ್ 19 : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಕುರಿತು ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಏಪ್ರಿಲ್ 23ರಂದು ಧಾರವಾಡ ಲೋಕಸಭಾ ಕ್ಷೇತ್ರದ ಮತದಾನ ನಡೆಯಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶುಕ್ರವಾರ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ (ಸ್ವೀಪ್) ಸಮಿತಿಯ ಆಶ್ರಯದಲ್ಲಿ ಧಾರವಾಡ ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯ ಆವರಣದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಂದ ಬೃಹತ್ ಮಾನವ ಸರಪಳಿ, ಚುನಾವಣಾ ಜಾಗೃತಿ ಗೀತೆ ,ನೃತ್ಯ ಕಾರ್ಯಕ್ರಮಗಳು ನಡೆಯಿತು.
ಆಂಗ್ಲ ವರ್ಣಮಾಲೆಯ DWD,SVEEP ಹಾಗೂ ಕರ್ನಾಟಕ ನಕಾಶೆಯ ಮಾದರಿಯಲ್ಲಿ ನಿಂತ ಸಹಸ್ರಾರು ವಿದ್ಯಾರ್ಥಿಗಳು, ಚುನಾವಣಾ ಜಾಗೃತಿ ಗೀತೆಗಳಿಗೆ ಆಕರ್ಷಕ ಹೆಜ್ಜೆಗಳನ್ನು ಹಾಕಿದರು. ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿದಂತೆ ವಿವಿಧ ಅಧಿಕಾರಿಗಳು ಇವುಗಳಲ್ಲಿ ಭಾಗಿಯಾಗಿದ್ದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಪ್ರಹ್ಲಾದ್ ಜೋಶಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಕಣದಲ್ಲಿದ್ದಾರೆ.

ಪ್ರತಿಜ್ಞಾ ವಿಧಿ ಬೋಧನೆ
ಗ್ರಾಮೀಣ ಶಾಲಾ ಶಿಕ್ಷಕಿಯರು ಲೋಕಸಭಾ ಚುನಾವಣೆ 2019 ಎಂದು ಬರೆದ ಬಿಂದಿಗೆಗಳೊಂದಿಗೆ ಹ್ಯಾಪಿ ವೋಟರ್ಸ್ ಡೇ ಹಾಡಿಗೆ ನೃತ್ಯ ಪ್ರದರ್ಶನ ಮಾಡಿದರು. ಸಾವಿರಾರು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಸೆಲ್ಫಿ ತೆಗೆದುಕೊಂಡು ಕಳಿಸಿ
ಇದೇ ಮೊದಲ ಬಾರಿಗೆ ಮತದಾನಕ್ಕೆ ಅರ್ಹತೆ ಪಡೆದಿರುವ ಯುವಜನರು, ಮತಚಲಾಯಿಸಿ ಬೆರಳಿಗೆ ಹಾಕಿಸಿಕೊಂಡ ಶಾಹಿ ಹಾಗೂ ಮತಗಟ್ಟೆ ಕಾಣುವ ಹಾಗೆ ಸೆಲ್ಫಿ ತೆಗೆದುಕೊಂಡು ಜಿಲ್ಲಾ ಸ್ವೀಪ್ ಸಮಿತಿಗೆ ಕಳಿಸಿದರೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ವಿವಿಧ ಚಟುವಟಿಕೆಗಳು
ಮತದಾನಕ್ಕೆ ಅರ್ಹತೆ ಹೊಂದದೇ ಇರುವ ಮಕ್ಕಳು ತಮ್ಮ ಪಾಲಕರು, ಪೋಷಕರಿಗೆ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಬೇಕು ಎಂದು ಮನವಿ ಮಾಡಲಾಯಿತು. ಎಫ್.ಬಿ.ಕಣವಿ,ರಾಮು ಮೂಲಗಿ, ಪ್ರಕಾಶ ಕಂಬಳಿ ,ಬಾಬಾಜಾನ್ ಮುಲ್ಲಾ ಮತ್ತು ತಂಡದವರು ಸುಶ್ರಾವ್ಯವಾದ ಚುನಾವಣಾ ಜಾಗೃತಿ ಗೀತೆಗಳನ್ನು ಹಾಡಿದರು.

ಗಮನ ಸೆಳೆದ ವಾದ್ಯಮೇಳ
ಕರ್ನಾಟಕ ಕಾಲೇಜು ಆವರಣದಲ್ಲಿ ನಡೆದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪ್ರೆಸೆಂಟೆಷನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರ ವಾದ್ಯವೃಂದ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದು ಕೊಟ್ಟಿತು. ವಾದ್ಯಮೇಳದ ಮೂಲಕ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಪಥಸಂಚಲನದಲ್ಲಿ ಬರಮಾಡಿಕೊಳ್ಳಲಾಯಿತು.












Click it and Unblock the Notifications