ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆ
ಹುಬ್ಬಳ್ಳಿ, ಅ. 15 : ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಪೀಠ ತ್ಯಾಗ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಎದ್ದಿದ್ದ ವಿವಾದ ಬಗೆಹರಿದಂತಾಗಿದೆ. ಭಕ್ತರ ಜೊತೆ ಚರ್ಚಿಸಿ ಉತ್ತರಾಧಿಕಾರಿ ನೇಮಕದ ಬಗ್ಗೆ ಚರ್ಚಿಸಲಾಗುವುದು ಎಂದು ಶ್ರೀಗಳು ಭರವಸೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮೂರು ಸಾವಿರ ಮಠದ ಪೀಠಾಧ್ಯಕ್ಷರಾಗಿರುವ ಹಾನಗಲ್ ವಿರಕ್ತ ಮಠದ ಶ್ರೀ ರಾಜ ಯೋಗೀಂದ್ರ ಸ್ವಾಮೀಜಿಯವರು ಸದ್ಯಕ್ಕೆ ಪೀಠ ತ್ಯಾಗ ಮಾಡುವುದಿಲ್ಲ. ಉತ್ತರಾಧಿಕಾರಿ ನೇಮಕದ ಬಗ್ಗೆ ಮಠದ ಎಲ್ಲಾ ಭಕ್ತರ ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು. [ಏನಿದು ಉತ್ತರಾಧಿಕಾರಿ ವಿವಾದ]

ಯೋಗ, ಧ್ಯಾನದ ಬಗ್ಗೆ ಹೆಚ್ಚಿನ ಒಲವು ಇರುವುದರಿಂದ ಪೀಠ ತ್ಯಾಗ ಮಾಡಲು ಮುಂದಾಗಿದ್ದೆ. ಪೀಠ ತ್ಯಾಗ ಮಾಡುವಂತೆ ನನಗೆ ಯಾರೂ ಒತ್ತಡ ಹೇರಿರಲಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು. ಮಠದ ಉತ್ತರಾಧಿಕಾರಿ ನೇಮಕ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ತೆರವುಗೊಂಡ ಬಳಿಕ ಭಕ್ತರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದಿಂಗಾಲೇಶ್ವರ ಸ್ವಾಮೀಜಿಯವರು ಉತ್ತರಾಧಿಕಾರಿಯಾಗಬೇಕೆನ್ನುವುದು ನನ್ನ ಅಪೇಕ್ಷೆ, ಮಠದ ಲಕ್ಷಾಂತರ ಭಕ್ತರ ಅಭಿಪ್ರಾಯವೇನೆಂದು ತಿಳಿದಿಲ್ಲ. ಉತ್ತರಾಧಿಕಾರಿ ನೇಮಕ ಮಾಡುವ ಸಂದರ್ಭದಲ್ಲಿ ಮಠದ ಎಲ್ಲಾ ಭಕ್ತರ ಸಭೆ ಕರೆದು, ಅವರ ಅಭಿಪ್ರಾಯ ಸಂಗ್ರಹಿಸಿ ನೇಮಕದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಶ್ರೀಗಳು ಹೇಳಿದರು. [ಪೀಠ ತ್ಯಜಿಸದಿರಲು ಸ್ವಾಮೀಜಿ ನಿರ್ಧಾರ]
ಕಳೆದ ವಾರ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಪೀಠತ್ಯಾಗ ಮಾಡುತ್ತೇನೆ. ಮಠಕ್ಕೆ ಮುಂದಿನ ಉತ್ತರಾಧಿಕಾರಿಯಾಗಿ ಬಾಳೆ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಗಳನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಬೆಳಗಾವಿಯ ಘಟಪ್ರಭಾದಲ್ಲಿರುವ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಬೇಕೆಂದು 1998ರಲ್ಲಿ ಉಯಿಲು ಬರೆಯಲಾಗಿದೆ. ಆದರೆ, ಶ್ರೀಗಳು ದಿಂಗಾಲೇಶ್ವರ ಸ್ವಾಮಿಗಳನ್ನು ನೇಮಿಸುತ್ತಿದ್ದಾರೆ ಎಂದು ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ವಿವಾದಕ್ಕೆ ಶ್ರೀಗಳ ಸ್ಪಷ್ಟನೆಯಿಂದಾಗಿ ತೆರೆ ಬಿದ್ದಿದೆ.












Click it and Unblock the Notifications