ಹುಬ್ಬಳ್ಳಿಯ ಕಿರ್ಲೋಸ್ಕರ್ ಕಂಪನಿಗೆ ಬೀಗ
ಹುಬ್ಬಳ್ಳಿ, ಜು. 9 : ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕಿರ್ಲೋಸ್ಕರ್ ಎಲೆಕ್ಟ್ರಿಕಲ್ ಕಂಪನಿ ಉತ್ಪಾದನೆ ಸ್ಥಗಿತಗೊಳಿಸಿ, ಕಂಪನಿಗೆ ಬೀಗ ಜಡಿದಿದೆ. ಇದರಿಂದಾಗಿ 250 ಆಡಳಿತ ಸಿಬ್ಬಂದಿ ಮತ್ತು 150 ಕಾರ್ಮಿಕ ಸ್ಥಿತಿ ಅತಂತ್ರವಾಗಿದೆ. ಕಂಪನಿಗೆ ಬೀಗ ಹಾಕಿರುವುದನ್ನು ಖಂಡಿಸಿ ಮಂಗಳವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಗ್ಗೆ ಎಂದಿನಂತೆ ಕಾರ್ಮಿಕರು ಕಂಪನಿ ಬಳಿಗೆ ಬಂದಾಗ ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿತ್ತು. ಕೆಲ ದಿನಗಳವರೆಗೆ ಕಂಪನಿಯನ್ನು ಬಂದ್ ಮಾಡಲಾಗಿದೆ ಎಂಬ ನೋಟಿಸ್ ಅಂಟಿಸಲಾಗಿತ್ತು. ಯಾವುದೇ ನೋಟಿಸ್ ನೀಡದೆ ಏಕಾಏಕಿ ಕಂಪನಿಗೆ ಬೀಗ ಹಾಕಿರುವ ಕ್ರಮದ ವಿರುದ್ಧ ಸಿಬ್ಬಂದಿ ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಆಡಳಿತ ಮಂಡಳಿ ಹೇಳುವುದೇನು : ಆದರೆ, ಕಿರ್ಲೋಸ್ಕರ್ ಆಡಳಿತ ಮಂಡಳಿ ಕಾರ್ಮಿಕರು ಕಂಪನಿಯ ಪರಿಸ್ಥಿತಿಗೆ ಕಾರಣ ಎಂದು ಹೇಳಿದೆ. ವೇತನ ಪರಿಷ್ಕರಣೆ ನೆಪವೊಡ್ಡಿ ವಾರದಿಂದ ಸಿಬ್ಬಂದಿ ಉತ್ಪಾದನಾ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಆದ್ದರಿಂದ ಕಂಪನಿಗೆ ಬೀಗ ಹಾಕುವುದು ಅನಿವಾರ್ಯವಾಗಿದೆ ಎಂದು ಹೇಳಿದೆ. [ಟಾಟಾ ಬಸ್ ವಿನ್ಯಾಸ ಘಟಕ, ಸ್ಥಳೀಯರಿಗೆ ಉದ್ಯೋಗ]
ವೇತನ ಪರಿಷ್ಕರಣೆ ವಿಷಯವಾಗಿ ನೌಕರರು ಹಾಗೂ ಆಡಳಿತ ಮಂಡಳಿ ನಡುವೆ ಹಲವು ದಿನಗಳಿಂದ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಹಿಂದೆಯೂ ವೇತನ ವಿವಾದ ಎದ್ದಾಗ ಹೊಂದಾಣಿಕೆ ನಡೆದಿತ್ತು. ಆದರೆ, ಈಗ ಪುನಃ ವಿವಾದ ಉಂಟಾಗಿರುವ ಹಿನ್ನಲೆಯಲ್ಲಿ ಕಾರ್ಮಿಕರು ಕಳೆದ ಒಂದು ವಾರದಿಂದ ಕಂಪನಿಗೆ ಬಂದಿದ್ದರೂ, ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸಿದ್ದರು.
ಸೋಮವಾರ ರಾತ್ರಿ ಪಾಳಿಯ ಕೆಲಸಕ್ಕೆ ಬಂದ ಕಾರ್ಮಿಕರನ್ನು ಭದ್ರತಾ ಸಿಬ್ಬಂದಿ ಹೊರ ಹಾಕಿದ್ದರು ಮತ್ತು ಕಂಪನಿಯ ಮುಖ್ಯ ದ್ವಾರಕ್ಕೆ ಬೀಗ ಹಾಕಿದ್ದರು. ಮಂಗಳವಾರ ಕೆಲಸಕ್ಕೆ ಬಂದಾಗ ಕಾರ್ಮಿಕರಿಗೆ ಈ ವಿಷಯ ತಿಳಿದಿದೆ. ಕಂಪನಿ ಧೋರಣೆ ಖಂಡಿಸಿ ಕಾರ್ಮಿಕರು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದಾರೆ.












Click it and Unblock the Notifications