ಬಿಎಂಟಿಸಿ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಸಾರಿಗೆ ನಿಗಮ
ಧಾರವಾಡ, ಅಕ್ಟೋಬರ್ 26 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ನಗರ ಸಾರಿಗೆ ನಿಗಮ ಅಸ್ತಿತ್ವಕ್ಕೆ ಬರಲಿದೆ. ಹೌದು, ಉತ್ತರ ಕರ್ನಾಟಕ ಭಾಗದ ಜನರ ಬಹುದಿನ ಬೇಡಿಕೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಬಸ್ ಸೇವೆಯನ್ನು ಸೇರಿಸಿ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ನಿಗಮ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಮೊದಲು ಮೂಲ ಸೌಕರ್ಯ ಒದಗಿಸಲು 35 ಕೋಟಿ ಅನುದಾನ ನೀಡಲಿದೆ.
ಕರ್ನಾಟಕದಲ್ಲಿಯೇ ಹುಬ್ಬಳ್ಳಿ-ಧಾರವಾಡ ಅವಳಿ ನಗರ 2ನೇ ದೊಡ್ಡ ನಗರ ಎಂದು ಖ್ಯಾತಿಗಳಿಸಿದೆ. ಈ ನಗರವನ್ನು ಪ್ರತ್ಯೇಕ ಸಾರಿಗೆ ನಿಗಮವಾಗಿ ಮಾಡಲು ಮೂಲಕ ನಗರದಲ್ಲಿ ಸಾರಿಗೆ ಸೌಕರ್ಯವನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ.
ಈಗಾಗಲೇ ಅವಳಿ ನಗರದ ನಡುವೆ ಬಿಆರ್ಟಿಎಸ್ ಬಸ್ ಸೇವೆಗೆ ಚಾಲನೆ ನೀಡಲಾಗಿದೆ. ಇದನ್ನು ಮತ್ತಷ್ಟು ಅಭಿವದ್ಧಿಗೊಳಿಸಿ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ನಿಗಮ ಸ್ಥಾಪನೆ ಮಾಡಲು ಸರ್ಕಾರ ಅನುದಾನವನ್ನು ನೀಡಲಿದೆ....

ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ನಗರ ಸಾರಿಗೆ ನಿಗಮ
ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ನಗರ ಸಾರಿಗೆ ನಿಗಮ ಸ್ಥಾಪನೆಯಾಗಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ವಾಣಿಜ್ಯ ನಗರಿ ಎಂದು ಕರೆಯಲ್ಪಡುವ ಹುಬ್ಬಳ್ಳಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಆಗಿದೆ. ಪ್ರತ್ಯೇಕ ಸಾರಿಗೆ ನಿಗಮ ರಚನೆ ಮಾಡುವ ಮೂಲಕ ಅವಳಿ ನಗರದ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲು ಸರ್ಕಾರ ಮುಂದಾಗಿದೆ.

ಬಿ.ಆರ್.ಟಿ.ಎಸ್. ಬಸ್ ಸೇವೆ
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ. ಈಗ Bus Rapid Transit System (BRTS) ಬಸ್ ಸಂಚಾರ ಆರಂಭವಾಗಿದೆ. ಇದನ್ನು ಮತ್ತಷ್ಟು ಅಭಿವೃದ್ದಿಗೊಳಿಸಿ, ಪ್ರತ್ಯೇಕ ಸಾರಿಗೆ ನಿಗಮಕ್ಕೆ ಸೇರಿಸಲಾಗುತ್ತದೆ. ಖಾಸಗಿ ಬೇಂದ್ರೆ ಬಸ್ ಸಾರಿಗೆ ಪರ್ಮಿಟ್ ಮುಗಿಯುತ್ತಾ ಬಂದಿದ್ದು, ಪರ್ಮಿಟ್ ಅಂತ್ಯಗೊಂಡ ಬಳಿಕ ಅದನ್ನು ನವೀಕರಿಸದಿರಲು ಸರ್ಕಾರ ತೀರ್ಮಾನಿಸಿದೆ. ಆದ್ದರಿಂದ, ಸಾರಿಗೆ ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಸರ್ಕಾರದ ಕೈಗೆ ಬರಲಿದೆ.

340 ಬಸ್ಸುಗಳು
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಂಚಾರ ನಡೆಸುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 210 ಬಸ್, ಬಿಆರ್ಟಿಎಸ್ನ 130 ಬಸ್ ಸೇರಿ 340 ಬಸ್ಗಳು ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ನಗರ ಸಾರಿಗೆ ನಿಗಮದ ವ್ಯಾಪ್ತಿಗೆ ಒಳಪಡಲಿವೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನೂ ಪ್ರತ್ಯೇಕ ನಿಗಮದ ವ್ಯಾಪ್ತಿಗೆ ಸೇರಿಸುವ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ.

ವಿಭಾಗೀಯ ಕಚೇರಿಗಳು ರದ್ದು
ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ನಗರ ಸಾರಿಗೆ ನಿಗಮ ಅಸ್ತಿತ್ವಕ್ಕೆ ಬಂದರೆ ವಿಭಾಗೀಯ ಕಚೇರಿಗಳು ರದ್ದಾಗಲಿವೆ. ಅವಳಿ ನಗರದ ಸಾರಿಗೆ ನಿಗಮಕ್ಕಾಗಿ ಪ್ರತ್ಯೇಕ ಕಚೇರಿ ಸ್ಥಾಪನೆಯಾಗಲಿದ್ದು, ನವಲಗುಂದ, ಹುಬ್ಬಳ್ಳಿ ನಗರ, ಹುಬ್ಬಳ್ಳಿ ಗ್ರಾಮೀಣ, ಧಾರವಾಡ ನಗರ ಮತ್ತು ಗ್ರಾಮೀಣ, ಸವದತ್ತಿ ಡಿಪೋಗಳು ರದ್ದಾಗಲಿವೆ.

ಬಿಆರ್ಟಿಎಸ್ ಅಭಿವೃದ್ಧಿ
ಬಸ್ಗಳ ಸಂಖ್ಯೆ ಹೆಚ್ಚಳ ಮಾಡುವ ಮೂಲಕ, ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಮೂಲಕ ಬಿಆರ್ಟಿಎಸ್ ಅನ್ನು ಮತ್ತಷ್ಟು ಅಭಿವೃದ್ದಿ ಮಾಡಲಾಗುತ್ತದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನು ಪ್ರತ್ಯೇಕ ನಿಗಮದ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications