ಹೊನ್ನಾವರದ ಬಂಗಾರಮಕ್ಕಿಯಲ್ಲಿ 15 ರಿಂದ ಕುಂಭಮೇಳ
ಹುಬ್ಬಳ್ಳಿ, ಏಪ್ರಿಲ್, 13: ಹೊನ್ನಾವರ ತಾಲೂಕು ಗೇರುಸೊಪ್ಪ ಗ್ರಾಮದ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀವೀರಾಂಜನೇಯ ದೇವಸ್ಥಾನದ ಧರ್ಮದರ್ಶಿ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಏಪ್ರಿಲ್ 15ರಿಂದ 22ರ ವರೆಗೆ ಜಾಗತಿಕ ಸಾಂಸ್ಕೃತಿಕ ಉತ್ಸವ ಸಂಸ್ಕೃತಿ ಕುಂಭಮೇಳ ನಡೆಯಲಿದೆ.
ಈ ಕುರಿತು ಶ್ರೀ ಕ್ಷೇತ್ರದ ಆಡಳಿತಾಧಿಕಾರಿ, ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ ಹಾಗೂ ಸಂಸ್ಕೃತಿ ಕುಂಭದ ಪ್ರಧಾನ ಸಂಚಾಲಕ, ಸಂಸ್ಕೃತಿ ಚಿಂತಕ ಸಿದ್ದು ಯಾಪಲಪರವಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.[ಕುಡಿಯಾಕ್ ತೊಟ್ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ..!]
ಏ. 15ರ ಸಂಜೆ 5 ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಈ ಶರಾವತಿ ಕುಂಭದಲ್ಲಿ ದೇಶದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾಧು ಸಂತರು ಪಾಲ್ಗೊಳ್ಳಲಿದ್ದಾರೆ. ಶರಾವತಿ ಕುಂಭವು ಮೂರು ದಿನ ಶರಾವತಿ ನದಿ ತೀರದಲ್ಲಿ ನಡೆಯಲಿದ್ದು, ಧಾರ್ಮಿಕ ವಿಧಿವಿಧಾನಗಳಿಗೆ ಶರಾವತಿ ತೀರದಲ್ಲಿಯೇ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಪ್ರತಿನಿತ್ಯ ಪರಿಸರ ರಕ್ಷಣೆ ಹಾಗೂ ವಿಶ್ವ ಮಾನವತೆಯ ಸಂದೇಶ ಸಾರುವ ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಆರಾಧನಾ ವೈವಿಧ್ಯ, ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ಸಮ್ಮೇಳನಗಳು, ಸ್ವಾನುಭವ ಶಿಬಿರ, ಮಾರಾಟ ಮಳಿಗೆಗಳು, ಆತಿಥ್ಯ, ಸನ್ಮಾನ ಹಾಗೂ ಪುರಸ್ಕಾರಗಳು, ಸೇವಾ ಸಾಧನ, ವ್ಯಕ್ತಿತ್ವ ವಿಕಸನ ತರಬೇತಿಗಳು, ಕೌಶಲ್ಯಾಭಿವೃದ್ಧಿ ಹಾಗೂ ಅಭಿಯಾನಗಳ ಕುರಿತು ವಿವಿಧ ತಜ್ಞರುಗಳಿಂದ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಪ್ರತಿ ದಿನ ಸಾಯಂಕಾಲ ದೇಶದ ವಿವಿಧ ಪ್ರದೇಶಗಳಿಂದ ಸಾಂಸ್ಕೃತಿಕ ಕಲಾ ತಂಡಗಳು ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಿವೆ.
ಆರಾಧನಾ ವೈವಿಧ್ಯದಲ್ಲಿ ಎಲ್ಲ ಧಾರ್ಮಿಕ ಪದ್ಧತಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಿದ್ದಾರೆ. ಅಂತಾರಾಷ್ಟ್ರೀಯ ಯೋಗ ತರಬೇತಿ ಶಿಬಿರ, ವಿವಿಧ ಭಾಷೆಗಳ ಕಲಿಕಾ ತರಬೇತಿ, ಗೊಂಬೆ ತಯಾರಿಕೆ, ಪೇಪರ್ ಕಟಿಂಗ್, ವ್ಯಕ್ತಿತ್ವ ವಿಕಸನ ಕಾರ್ಯಾಗಾರ, ರೇಖಿ, ಧ್ಯಾನ ತರಬೇತಿಗಳನ್ನು ನೀಡಲಾಗುವುದು.[ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]
ಕನ್ನಡ ಭಾಷೆಯ ಉಳಿವಿಗಾಗಿ ಬೈಕ್ ಜಾಥಾ ಮೂಲಕ ಕನ್ನಡ ಸಮ್ಮೇಳನ ಆರಂಭಿಸಲಾಗುವುದು. ಏ. 16ರಂದು ವಿಶ್ವ ಮಾನವತಾ ಸಂದೇಶ ಸಾರುವ ಯತಿಗಳ ಸಮಾವೇಶವಿದ್ದು, ನಾಡಿನ ಎಲ್ಲ ಜನಾಂಗಗಳ ಧಾರ್ಮಿಕ ಮುಖಂಡರುಗಳು, ವಿಶ್ವಮಾನವತೆಗೆ ಮಠಾಧೀಶರ ಕೊಡುಗೆ ಎಂಬ ವಿಷಯದ ಮೇಲೆ ಚಿಂತನೆ ನಡೆಸಲಿದ್ದಾರೆ.
ಅಂದೇ ಸಂಜೆ 4 ಗಂಟೆಗೆ ದಿವ್ಯಾಂಗರ ಸಮ್ಮೇಳನ ಜರುಗಲಿದೆ. ಏ. 17ರಂದು ಬಹುಭಾಷಾ ಕವಿಸಮ್ಮೇಳನ ಆಯೋಜಿಸಲಾಗಿದೆ. ಅಂದೇ ಕುಂಬಾರ ಜನಾಂಗದ ಸಮ್ಮೇಳನ ಆಯೋಜಿಸಲಾಗಿದೆ. 18ರಂದು ನಾಡಿನ ವಿವಿಧ ಪ್ರದೇಶಗಳಲ್ಲಿ ಸೇವಾ ಕ್ಷೇತ್ರದಲ್ಲಿರುವ ಸೇವಾ ಸಂಸ್ಥೆಗಳ ಸಮಾವೇಶ ಜರುಗಲಿದ್ದು, ಪರಿಸರ ರಕ್ಷಣೆಯಲ್ಲಿ ಸೇವಾ ಸಂಸ್ಥೆಯ ಪಾತ್ರಗಳ ಕುರಿತು ಚರ್ಚಿಸಲಾಗುವುದು. ಇದೇ ದಿನ ಪರಿಸರಾಸಕ್ತರ ಪರಿಸರ ಸಮ್ಮೇಳನ ಆಯೋಜಿಸಿದ್ದು, ನಾಡಿನ ಹೆಸರಾಂತ ಪರಿಸರವಾದಿಗಳು ತಮ್ಮ ಚಿಂತನೆ ಮಂಡಿಸಲಿದ್ದಾರೆ.
19ರಂದು ಕೃಷಿ ಸಮ್ಮೇಳನ ಆಯೋಜಿಸಲಾಗಿದ್ದು, ವಿವಿಧ ಬಗೆಯ ಬೀಜೋತ್ಪಾದನೆ ಕುರಿತ ಪ್ರದರ್ಶನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಅಂದೇ ಪಾರಂಪರಿಕ ವೈದ್ಯ ಸಮ್ಮೇಳನ ಆಯೋಜಿಸಿದ್ದು, ಪಾರಂಪರಿಕ ವೈದ್ಯ ಪದ್ಧತಿಯನ್ನು ಉಳಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು. 20ರಂದು ಕುಣಬಿ ಜನಾಂಗದ ಸಮ್ಮೇಳನವನ್ನು ಆಯೋಜಿಸಿದ್ದು, ಈ ಜನಾಂಗಕ್ಕೆ ದೊರಕಬಹುದಾದ ಸೌಲಭ್ಯಗಳ ಕುರಿತು ಚಿಂತನೆಗೈಯಲಾಗುವುದು.
21ರಂದು ಬಾಲಸಮ್ಮೇಳನ ಆಯೋಜಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಕ್ಕಳು ತಮ್ಮ ಯಶಸ್ಸಿನ ಅನುಭವಗಳನ್ನು ಹಂಚಿಕೊಂಡು, ಅವರಿಗೆ ಮಾರ್ಗದರ್ಶನ ನೀಡುವ ಹಿನ್ನೆಲೆಯಲ್ಲಿ ಮಕ್ಕಳ ಸಾಹಿತ್ಯ ಹಾಗೂ ಮಕ್ಕಳ ಮನೋವಿಜ್ಞಾನದಲ್ಲಿ ಕೆಲಸ ಮಾಡಿರುವ ತಜ್ಞರು ಪಾಲ್ಗೊಳ್ಳಲಿದ್ದಾರೆ.
ಪ್ರತಿನಿತ್ಯ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಯುನಾನಿ, ಸಿದ್ಧ, ಯೋಗ ಚಿಕಿತ್ಸೆಗಳ ಕುರಿತು ಜನಜಾಗೃತಿ ಮೂಡಿಸಲಾಗುವುದು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾವಿರಾರು ಭಕ್ತಾಧಿಗಳು ರಕ್ತದಾನ ಮಾಡಲು ನಿರ್ಧರಿಸಿದ್ದಾರೆ. ಆಯುರ್ವೇದ ಕಾರ್ಯಾಗಾರ, ವಸ್ತು ಪ್ರದರ್ಶನ, ಮಾರಾಟ ಮಳಿಗೆಗಳು, ಮಕ್ಕಳ ಆಟಿಕೆ ಮತ್ತು ಅಂಗಡಿ ಮುಂಗಟ್ಟುಗಳಿಗೆ ಅವಕಾಶವನ್ನೂ ಕಲ್ಪಿಸಲಾಗಿದೆ. ತಂಬಾಕು ನಿಷೇಧ ಜಾಗೃತಿ ಶಿಬಿರ, ಕಾನೂನು ಜಾಗೃತಿ ಶಿಬಿರ, ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ ಅಭಿಯಾನ ಜರುಗಲಿವೆ.
ಸನ್ಮಾನ ಹಾಗೂ ಪುರಸ್ಕಾರ: ವೀರಾಂಜನೇಯ ಸುಜ್ಞಾನ ಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅಸ್ಸಾಂ ರಾಜ್ಯದ ಶಾಂತಿಸಾಧನಾ ಆಶ್ರಮದ ಮುಖ್ಯಸ್ಥ ಶ್ರೀ ಹೇಮ್ಭಾಯ್, ದಿವ್ಯಾಂಗರ ಸೇವೆ ಸಲ್ಲಿಸುತ್ತಿರುವ ಮಹಾರಾಷ್ಟ್ರದ ಡಾ. ಮಿಲಿಂದ ಕಸ್ಬೇಕರ್ ಅವರಿಗೆ ನೀಡಲಾಗುವುದು.
ಶ್ರೀ ವೀರಾಂಜನೇಯ ಜಾನಪದ ಶ್ರೀ ಪ್ರಶಸ್ತಿಯನ್ನು, ಕಾಳುಮೆಣಸಿನ ಕೃಷಿಕ ನಾರಾಯಣ ದತ್ತಾತ್ರೇಯ ಹೆಗಡೆ, ಕಲಾಸೇವೆಯ ಎಚ್.ಬಿ. ನಾಯಕ ವಾಸರೆ, ಮಂತ್ರ ಚಿಕಿತ್ಸೆಯ ಜಿ.ಡಿ. ಕೇಶವ ಹೆಗಡೆ, ಕ್ರೀಡಾ ಕ್ಷೇತ್ರದ ಕು. ಸಮರ್ಥ ಜಗದೀಶರಾವ್, ಸಾಮಾಜಿಕ ಕ್ಷೇತ್ರದ ನಾಸು ಹೆಗಡೆ ಕುಂದರಗಿ, ಸಂಗೀತ ಕ್ಷೇತ್ರದ ಶ್ರೀ ದತ್ತಾತ್ರೇಯ ಗಾಂವಕರ್ ಚಿಟ್ಟಿಪಾಲ ಅವರಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆಡಳಿತಾಧಿಕಾರಿಯಾಗಿ ನೇಮಕ : ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಆಡಳಿತಾಧಿಕಾರಿಗಳಾಗಿ ಕ್ರಿಯಾಶೀಲ ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ ನೇಮಕವಾಗಿದ್ದಾರೆಂದು ಶ್ರೀ ಕ್ಷೇತ್ರದ ಮಾರುತಿ ಗುರೂಜಿ ತಿಳಿಸಿದ್ದಾರೆ. ಇಡೀ ರಾಜ್ಯಾದ್ಯಂತ ದಕ್ಷ, ಕ್ರಿಯಾಶೀಲ ಹಾಗೂ ಪರಿಸರ ರಕ್ಷಣೆಗೆ ಸೇವೆ ಸಲ್ಲಿಸಿ ಸಾಮಾನ್ಯರ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಕೆ. ಅಮರನಾರಾಯಣ ಅವರು ನಿವೃತ್ತಿಯ ನಂತರ ಶ್ರೀ ಕ್ಷೇತ್ರದಲ್ಲಿರುವ ಸಿಲೆಕ್ಟ್ ಫೌಂಡೇಶನ್ ಹಾಗೂ ಶ್ರೀ ವೀರಾಂಜನೇಯ ಧಾರ್ಮಿಕ ಶಿಕ್ಷಣ ಸೇವಾ ಸಂಸ್ಥೆಗಳ ಎಲ್ಲ ಆಡಳಿತಾತ್ಮಕ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.