ನೆಲ, ಜಲ, ಸಂಸ್ಕೃತಿ ಉಳಿವಿಗೆ ಹೊನ್ನಾವರದಲ್ಲಿ ಕುಂಭಮೇಳ
ಹುಬ್ಬಳ್ಳಿ, ಏಪ್ರಿಲ್, 16: ಹೊನ್ನಾವರದ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ನಾಡಿನಲ್ಲೇ ಅತಿ ವೈಶಿಷ್ಠ್ಯಪೂರ್ಣವಾಗಿ ಆಯೋಜನೆಯಾಗಿರುವ ಸಂಸ್ಕೃತಿ ಕುಂಭ ಮೇಳಕ್ಕೆ ಚಾಲನೆ ಸಿಕ್ಕಿದೆ.
ಶ್ರೀರಂಗಪಟ್ಟಣದ ಗಂಜಾಂನ ಆದಿಶಂಕರಮಠದ ಶ್ರೀ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ ದೀಪ ಬೆಳಗುವ ಮೂಲಕ , ಶ್ರೀ ಮಾರುತಿ ಗುರೂಜಿಯವರು ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಈ ಸಂಸ್ಕೃತಿ ಕುಂಭಕ್ಕೆ ಶುಭಾರಂಭಗೈದರು. [ಹೊನ್ನಾವರದ ಬಂಗಾರಮಕ್ಕಿಯಲ್ಲಿ 15 ರಿಂದ ಕುಂಭಮೇಳ]

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಮಾರುತಿ ಗುರೂಜಿಯವರು, ಶರಾವತಿ ಕುಂಭ ಆಯೋಜನೆಯ ಹಿಂದೆ ಮಹತ್ವದ ಆಲೋಚನೆಗಳಿವೆ. ನಾವು ಎಲ್ಲಿಯವರೆಗೆ ನೀರಿನ ಮಹತ್ವ ಅರಿಯುವುದಿಲ್ಲವೋ ಅಲ್ಲಿಯವರೆಗೆ ಪ್ರಜ್ಞಾವಂತರಾಗಲು ಸಾಧ್ಯವಿಲ್ಲ. ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳು ಭೀಕರ ಬರಗಾಲ ಎದುರಿಸುತ್ತಿವೆ. ಜನ ಗುಳೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ನಿರ್ಲಕ್ಷ್ಯ. ಜಲತತ್ವ , ಭೂತತ್ವ, ವಾಯುತತ್ವ ಸೇರಿ ಪಂಚ ತತ್ವಗಳನ್ನು ನಿರ್ಲಕ್ಷ್ಯ ಮಾಡಿದ್ದೇವೆ. ಇದರ ಪರಿಣಾಮ ಎದುರಿಸುತ್ತಿದ್ದೇವೆ. ನೀರನ್ನು ಎಷ್ಟು ಶುದ್ಧವಾಗಿ ಇಡುತ್ತೇವೋ ನಮ್ಮ ಮನಸ್ಸು, ಆರೋಗ್ಯ ಪವಿತ್ರವಾಗಿರಲಿದೆ ಎಂದರು.
ಶರಾವತಿ ನದಿ ರಾಮನ ಅಂಬುವಿನಿಂದ ಹುಟ್ಟಿದ ನದಿ. ರಾಮನ ಬಾಣದಿಂದ ಚಿಮ್ಮಿದ ನದಿಗೆ ಕುಂಭಮೇಳ ನಡೆಯುತ್ತಿರುವುದು ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದರು.[ಎರಡೇ ಎರಡು ಬಕೇಟ್ ನೀರು ಉಳಿಸಲು ಪ್ರಯತ್ನ ಮಾಡಿ]

ಶ್ರೀ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ ಆಶೀರ್ವಚನ ನೀಡಿ, ನಾವೆಲ್ಲ ಪ್ರಕೃತಿ ಆರಾಧಿಸುವ ಜನ. ರಾಮಾಯಣದಲ್ಲೂ ಪ್ರಕೃತಿ ಆರಾಧನೆಯಿದೆ. ರಾಮ ನದಿ, ಗುಡ್ಡ ,ಬೆಟ್ಟಗಳಲ್ಲಿ ದೇವವನ್ನು ಕಾಣುವಂತೆ ಹೇಳಿದ್ದ. ಆದರೆ ನಮ್ಮ ನದಿಗಳು ಅಶುದ್ಧವಾಗಿವೆ. ನಮ್ಮ ಡ್ಯಾಂಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹೂಳು ತುಂಬಿದೆ. ನದಿ ಪವಿತ್ರತೆ ಕಾಯ್ದರೆ ಮಾತ್ರ ಸುಭೀಕ್ಷೆ ಕಾಣಲು ಸಾಧ್ಯ ಎಂದರು.

ಆವಾಹನಾ ಆಖಾಡದ ಶ್ರೀ ಸ್ವಾಮೀ ಗಂಗಾಗಿರಿ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ನಡೆಯುವ ಐದನೆಯ ಕುಂಭ ಮೇಳ ಇದಾಗಿದ್ದು, ಸಕರ್ಾರದ ನೆರವಿಲ್ಲದೇ ಹಮ್ಮಿಕೊಂಡಿರುವ ಈ ಕಾರ್ಯ ಶ್ಲಾಘನೀಯ ಎಂದರು.

ರಾಮಕೃಷ್ಣಾಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಜಿ.ಪಂ ಸದಸ್ಯೆ ಪುಷ್ಪಾ ನಾಯ್ಕ, ಪಾಸ್ಟ್ ಲೈಫ್ ಥೆರಪಿಯ ತೃಪ್ತಿ ಜೈನ್ ಮತ್ತು ಲೇನಿ ಮ್ಯಾಥ್ಯೂಸ್, ಜಿ.ಪ ಮಾಜಿ ಅಧ್ಯಕ್ಷ ರಮಾನಂದ ನಾಯಕ, ಪ್ರಮುಖ ಶಶಿಭೂಷಣ ಹೆಗಡೆ,ತಾ.ಪಂ ಸದಸ್ಯ ಉಲ್ಲಾಸ ಈಶ್ವರ ನಾಯ್ಕ, ಗ್ರಾ.ಪಂ ಉಪಾಧ್ಯಕ್ಷ ಉದಯ ನಾಯ್ಕ ಮುಂತಾದವರು ಮಾತನಾಡಿ ಕ್ಷೇತ್ರದಲ್ಲಿ ಶ್ರೀ ಮಾರುತಿ ಗುರೂಜಿ ಕೈಗೊಂಡಿರುವ ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಯನ್ನು ಶ್ಲ್ವಾಘಿಸಿದರು.
ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಅನ್ನಪೂರ್ಣಾ ಶಾಸ್ತ್ರಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಾರಾಯಣ ದತ್ತಾತ್ರೆಯ ಹೆಗಡೆ ದಂಪತಿಯನ್ನು ವೀರಾಂಜನೇಯ ಜಾನಪದಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಶ್ರೀ ಗಣೇಶ ಸವೇದ ಸಂಸ್ಕೃತ ಪಾಠಶಾಲಾ ವಿದ್ಯಾರ್ಥಿಗಳು ವೇದ ಘೋಷ, ಸ್ವಾತಿ ಭಟ್ ಸಂಗಡಿಗರು ಪ್ರಾರ್ಥನೆ ಹಾಡಿದರು. ಸಂಸ್ಕೃತಿ ಕುಂಭದ ಪ್ರಧಾನ ಸಂಚಾಲಕ ಪ್ರೊ. ಸಿದ್ದು ಯಾಪಲಪರವಿ ಸ್ವಾಗತಿಸಿದರು. ವಿಶ್ರಾಂತ ಪ್ರಾಚಾರ್ಯ ವಿ.ಜಿ.ಹೆಗಡೆ ಗುಡ್ಗೆ ಪ್ರಾಸ್ತಾವಿಕ ಮಾತನಾಡಿದರು. ರತ್ನಾಕರ ವಂದಿಸಿದರು. ರಾಧಿಕಾ ನಾಯ್ಕ, ಕಲ್ಪನಾ ಹೆಗಡೆ, ನೆಲ್ಸನ್ ನಿರ್ವಹಿಸಿದರು.












Click it and Unblock the Notifications