ಆರ್ಟಿಐ ಕಾರ್ಯಕರ್ತರ ವಿರುದ್ಧ ಸಿಡಿದೆದ್ದ ಭೂಮಿ ಕಳೆದುಕೊಂಡ ರೈತರು
ಧಾರವಾಡ, ಡಿಸೆಂಬರ್ 15: ಭೂಸ್ವಾಧೀನಕ್ಕೊಳಪಟ್ಟ ರೈತರು, ಮಾಹಿತಿ ಹಕ್ಕಿನಡಿ ಮಾಹಿತಿ ಕೇಳುವ ಕಾರ್ಯಕರ್ತರ ವಿರುದ್ಧ ಸಿಡಿದೆದ್ದಿದ್ದಾರೆ. ಬ್ಲ್ಯಾಕ್ಮೇಲ್ ಮಾಡುವ ಆರ್ಟಿಐ ಕಾರ್ಯಕರ್ತರ ಮೇಲೆ ದೂರು ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಭೂಸ್ವಾಧೀನಕ್ಕೊಳಪಟ್ಟ ರೈತರು, ತಾವು ಕಳೆದುಕೊಂಡ ಜಮೀನಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಕೆಐಎಡಿಬಿಯಿಂದ ನಮ್ಮ ಜಮೀನು ಈಗಾಗಲೇ ಸ್ವಾಧೀನಕ್ಕೊಳಪಟ್ಟಿದೆ. ಜೆಎಂಸಿ ಮಾಡಿದ ನಂತರ ರೈತರಿಗೆ ಒಮ್ಮೆಲೆ ಪರಿಹಾರ ಬಂದಿಲ್ಲ. ಇದನ್ನೇ ಮುಂದಿಟ್ಟುಕೊಂಡು ಕೆಲವೊಂದಿಷ್ಟು ಮಾಹಿತಿ ಹಕ್ಕು ಕಾರ್ಯಕರ್ತರು ಮಾಹಿತಿ ಹಕ್ಕಿನಡಿ ಮಾಹಿತಿ ಕೇಳುವುದಲ್ಲದೇ ಅಧಿಕಾರಿಗಳಿಗೆ ಹಾಗೂ ರೈತರಿಗೆ ವಾಟ್ಸಪ್ ಕಾಲ್ ಮಾಡುವ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

12 ವರ್ಷದ ಹಿಂದೆ ಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿ ಈಗ ಸಹಜವಾಗಿಯೇ ಕಂಪನಿಗಳು ಆಗಿವೆ. ಆದರೆ, ಕೆಐಎಡಿಬಿ ಒಂದೇ ಸಲ ರೈತರಿಗೆ ಪರಿಹಾರ ಹಣ ನೀಡಿಲ್ಲ. ಅದನ್ನು ಹಂತ ಹಂತವಾಗಿ ನೀಡುತ್ತಿದೆ. ಜೆಎಂಸಿ ಕೂಡ ಮಾಡಲಾಗಿದ್ದು, ರೈತರಿಗೆ ಇನ್ನೂ ಪರಿಹಾರ ಬರಬೇಕಿದೆ. ಆದರೆ, ಇದನ್ನೇ ಮಾಹಿತಿ ಕೇಳುವ ಆರ್ಟಿಐ ಕಾರ್ಯಕರ್ತರು, ನೀವು ರೈತರಿಗೆ ಎಷ್ಟು ಬಾರಿ ಪರಿಹಾರ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿ ಅವರಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.
ರೈತರಿಗೆ ವಾಟ್ಸಪ್ ಕಾಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ರೀತಿ ಮಾಡಿದ ಕೆಲವರ ಫೋನ್ ನಂಬರ್ ಇದ್ದು, ಅವರ ಮೇಲೆ ನಾವು ದೂರು ದಾಖಲಿಸುತ್ತೇವೆ. ಈ ಬಗ್ಗೆ ಕೂಲಂಕುಶ ತನಿಖೆ ನಡೆಸಿ, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ದೊರಕುವಂತೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.












Click it and Unblock the Notifications