ಕುಂದಗೋಳದ ಅಲ್ಲಾಪುರದಲ್ಲಿ ಕೆಂಡದ ಮೇಲೆ ಪುಟ್ಟ ಮಕ್ಕಳು
ಧಾರವಾಡ, ಅಕ್ಟೋಬರ್ 2: ಮೊಹರಂ ಆಚರಣೆ ನಡೆಯುತ್ತಿರುವುದು ಒಂದು ಕಡೆಯಾದರೆ, ಹರಕೆ ಹೊತ್ತ ಕಾರಣಕ್ಕೆ ಮಕ್ಕಳನ್ನು ಕೆಂಡದ ಮೇಲೆ ಮಲಗಿಸುವ ಆಚರಣೆಯೊಂದು ಈಗಲೂ ನಡೆದುಕೊಂಡು ಬರುತ್ತಿದೆ.
ಇಂಥದೊಂದು ಆಚರಣೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅಲ್ಲಾಪುರದಲ್ಲಿ ನಡೆದಿದೆ. ಮೊಹರಂ ಅಂಗವಾಗಿ ಈ ಗ್ರಾಮದಲ್ಲಿ ಕೆಂಡದ ಮೇಲೆ ನಡೆಯುವ ಹಾಗೂ ದೇಹಕ್ಕೆ ಶಸ್ತ್ರಗಳನ್ನು ಚುಚ್ಚಿಕೊಳ್ಳುವ ಹಾಗೂ ಸಿಕ್ಕಿಸಿಕೊಳ್ಳುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಕೋಡಿ ಶ್ರೀಗಳ ಭವಿಷ್ಯ: ಶಾಸ್ತ್ರಿ ಅವರಂಥ ದೇಶ ನಾಯಕನ ಸಾವು
ಕೆಂಡದ ಮೇಲೆ ಬಾಳೆ ಎಲೆಯನ್ನು ಹಾಕಿ, ಅದರ ಮೇಲೆ ಮಕ್ಕಳನ್ನು ಮಲಗಿಸುವುದರಿಂದ ರೋಗ-ರುಜಿನಗಳು ಬರುವುದಿಲ್ಲ ಎಂಬುದು ಸ್ಥಳೀಯರ ನಂಬಿಕೆ. ಆದ್ದರಿಂದ ಪುಟಾಣಿ ಮಕ್ಕಳನ್ನು ಕೆಂಡದ ಮೇಲೆ ಮಲಗಿಸುತ್ತಾರೆ. ಅಲ್ಲಾಪುರ ಗ್ರಾಮದ ಸುತ್ತಮುತ್ತಲಿನ ಜನರು ಕೆಂಡದ ಮೇಲೆ ನಡೆದು ತಮ್ಮ ಭಕ್ತಿಯನ್ನು ಅರ್ಪಿಸುತ್ತಾರೆ.
ಕೆಂಡದ ಮೇಲೆ ನಡೆದರೆ ಸಂಕಷ್ಟಗಳು ದೂರವಾಗುತ್ತವೆ ಎಂಬುದು ಜನರ ನಂಬಿಕೆ. ಮೊಹರಂ ಅಂದಾಕ್ಷಣ ಮುಸ್ಲಿಂ ಸಮುದಾಯದವರು ಮಾತ್ರ ಆಚರಣೆ ಮಾಡುತ್ತಾರೆ ಅಂತ ಅಂದುಕೊಂಡರೆ ಅದು ತಪ್ಪು. ಈ ಗ್ರಾಮದಲ್ಲಿ ಮುಸ್ಲಿಂ ಕುಟುಂಬದವರ ಜತೆಗೆ ಇತರ ಸಮುದಾಯದವರು ಸೇರಿಕೊಂಡು ಆಚರಣೆ ಮಾಡುತ್ತಾರೆ.
ಮುಖ್ಯವಾಗಿ ಮೊಹರಂ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿ, ಮಧ್ಯರಾತ್ರಿ ದೇವರುಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ. ಆ ನಂತರ ಗ್ರಾಮದ ದರ್ಗಾವೊಂದರ ಬಳಿ ಕೂಡಿಸುತ್ತಾರೆ. ಐದಾರು ಗಿಡಗಳ ಕಟ್ಟಿಗೆಗೆ ಬೆಂಕಿ ಹಚ್ಚಿ, ಕೆಂಡ ಮಾಡ್ತಾರೆ. ಕೆಂಡದ ಮೇಲೆ ನಡೆದುಕೊಂಡು ಹೋಗುತ್ತಾರೆ.
ನೋಡೇ ಅನಭವಿಸಬೇಕು ಧಾರವಾಡ ನವರಾತ್ರಿ ಜಾತ್ರಿ
ಇನ್ನು ಹರಕೆ ಹೊತ್ತವರು ಕೆಂಡದ ಮೇಲೆ ಬಾಳೆ ಎಲೆಯನ್ನು ಹಾಸಿ, ತಮ್ಮ ಮಕ್ಕಳನ್ನು ಅದರ ಮೇಲೆ ಮಲಗಿಸುತ್ತಾರೆ. ಆ ಮೂಲಕ ಹರಕೆಯನ್ನು ತಿರಿಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆಯಿದೆ.
ಈ ಪದ್ಧತಿ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ. ಇದುವರೆಗೂ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಗ್ರಾಮದ ಮೇಲೆ ದೇವರ ಕೃಪೆ ಇದೆ, ಹೀಗಾಗಿ ಯಾವುದೇ ಅನಾಹುತ ಸಂಭವಿಸುವುದಿಲ್ಲ ಅಂತಲೂ ಇಲ್ಲಿನ ಜನರೇ ಹೇಳುತ್ತಾರೆ.