ಜಿನೇವಾಕ್ಕೆ ಹೊರಟಳು ಧಾರವಾಡದ ಬಾಲಕಿ

ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ಮಂಜುಳಾ ಮನವಳ್ಳಿ (17) ಸ್ವಿಜರ್ಲೆಂಡ್ನ ಜಿನೇವಾದಲ್ಲಿ ಅ.10ರಂದು ನಡೆಯಲಿರುವ 66ನೇ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವರದಿ ಮಂಡಿಸಲಿದ್ದಾಳೆ.
ರಾಮಾಪುರ ಧಾರವಾಡದಿಂದ 15 ಕಿ.ಮೀ. ದೂರದಲ್ಲಿದೆ. ಕೇವಲ 2000 ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮದ ರೈತರಾದ ಮಹಾಂತೇಶ ಹಾಗೂ ಮಹಾದೇವಿ ದಂಪತಿಯ ಹಿರಿಯ ಮಗಳು ಮಂಜುಳಾ ಮುನವಳ್ಳಿ.
ಧಾರವಾಡದ ಆರ್ಎಲ್ಎಸ್ ಕಾಲೇಜಿನಲ್ಲಿ ಮಂಜುಳಾ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಜೊತೆಗೆ ಕಿಡ್ಸ್ ಸಂಸ್ಥೆಯ ಗುಬ್ಬಚ್ಚಿ ಮಕ್ಕಳ ಮಹಾ ಸಂಘದ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.
ಸಮಾವೇಶಕ್ಕಾಗಿ ಮಕ್ಕಳ ಹಕ್ಕುಗಳ ವರದಿಯನ್ನು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಕೇರಳ ರಾಜ್ಯಗಳ 26 ಮಕ್ಕಳು ತಯಾರಿಸಿದ್ದರು.
ಇವರಲ್ಲಿ ಭಾರತದಿಂದ ಕರ್ನಾಟಕದ ಮಂಜುಳಾ, ಗುಜರಾತ್ನ ಅಫಾನಾ ನೋಯಿಡಾ ಆಯ್ಕೆಯಾಗಿದ್ದಾರೆ. ಇಬ್ಬರೂ ಅ.6ರಂದು ಜಿನೇವಾಕ್ಕೆ ತೆರಳಿ, ಅ.10ರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. [ಧಾರವಾಡದ ಮತ್ತೊಂದು ಪ್ರತಿಭೆ]
ಮಕ್ಕಳ ಹಕ್ಕುಗಳ ಕುರಿತಾದ ಈ ವರದಿಯಲ್ಲಿ ಮಕ್ಕಳ ಬಗೆಗಿನ ತಾರತಮ್ಯಮ ನಾಗರಿಕ ಸ್ವಾತಂತ್ರ್ಯ, ಅನಾಥ ಮಕ್ಕಳಿಗೆ ಕುಟುಂಬದ ವಾತಾವರಣ ನಿರ್ಮಾಣ, ಶಿಕ್ಷಣ ಮತ್ತು ಆರೋಗ್ಯದ ಹಕ್ಕು ಮುಂತಾದ ಮಾಹಿತಿ ಒಳಗೊಂಡಿರುತ್ತದೆ.
ಅಲ್ಲದೇ ಭಾರತದ ಕಾನೂನಿನಲ್ಲಿ ಮಕ್ಕಳ ಹಕ್ಕುಗಳ ವಿಚಾರದಲ್ಲಿರುವ ಗೊಂದಲ ಹಾಗೂ ಕೆಲ ಕಾನೂನುಗಳ ಕಟ್ಟುನಿಟ್ಟಿನ ಜಾರಿ ವಿಚಾರವಾಗಿಯೂ ವರದಿಯಲ್ಲಿ ಮಕ್ಕಳು ಶಿಫಾರಸು ಮಾಡಿದ್ದಾರೆ. ಈ ವರದಿಯನ್ನು ಅ.10ರಂದು ಮಂಡಿಸಲಿದ್ದಾರೆ. (ನಾಳೆಯನ್ನು ಇಂದೇ ನೋಡಬಲ್ಲ ಕನ್ನಡತಿ ಅಶ್ವಿನಿ)












Click it and Unblock the Notifications