ಧಾರವಾಡ ಐಐಟಿಯ ಸ್ಥಳ ಬದಲಾವಣೆ

ಧಾರವಾಡ, ಮೇ 20 : ಧಾರವಾಡ ನಗರದ ಹೊರವಲಯದ ಮಮ್ಮಿಗಟ್ಟಿ ವ್ಯಾಪ್ತಿಯ ಸುಮಾರು 668 ಎಕರೆ ಪ್ರದೇಶದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪಿಸಲು ಸ್ಥಳ ಉತ್ತಮವಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಅಪರ ಕಾರ್ಯದರ್ಶಿ ಸುಬ್ರಮಣ್ಯ ನೇತೃತ್ವದ ತಜ್ಞರ ತಂಡ ಅಭಿಪ್ರಾಯಪಟ್ಟಿದೆ.

ಗುರುವಾರ ಸುಬ್ರಹ್ಮಣ್ಯ, ಮುಂಬೈ ಐಐಟಿ ನಿರ್ದೇಶಕ ಪ್ರೊ.ಕಖರ್, ಗಾಂಧೀನಗರ ಐಐಟಿ ನಿರ್ದೇಶಕ ಪ್ರೊ.ಸುಧೀರ್ ಜೈನ್, ಪ್ರೊ.ಶಿವಪ್ರಸಾದ, ಪ್ರೊ.ನಾರಾಯಣ ಪುಣೇಕರ್ ಅವರನ್ನು ಒಳಗೊಂಡ ತಂಡ ಧಾರವಾಡಕ್ಕೆ ಭೇಟಿ ನೀಡಿತ್ತು. [ಜೂನ್ ನಲ್ಲಿ ಧಾರವಾಡ ಐಐಟಿ ಆರಂಭ]

dharwad iit

ಐಐಟಿ ಸ್ಥಾಪನೆಗೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿದ್ದ ನಿವೇಶನದ ಬದಲಾಗಿ, ಅದೇ ಸರ್ವೆ ನಂಬರಿನ ಜಾಗಯಲ್ಲಿ ಸ್ಥಳ ಬದಲಾವಣೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿತು. ಸರ್ಕಾರ ಗುರುತಿಸಿರುವ ಜಾಗ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. [ಈಗ ಅಧಿಕೃತ, ಧಾರವಾಡದಲ್ಲಿಯೇ ಐಐಟಿ ಸ್ಥಾಪನೆ]

ಈ ಶೈಕ್ಷಣಿಕ ವರ್ಷದಿಂದಲೇ ಐಐಟಿ ಆರಂಭಿಸಲು ಉದ್ದೇಶಿಸಲಾಗಿರುವ ವಾಲ್ಮಿ ಕಟ್ಟಡದ ತಾತ್ಕಾಲಿಕ ಆವರಣಕ್ಕೆ ಭೇಟಿ ನೀಡಿ, ಅಲ್ಲಿನ ತರಗತಿ ಕೋಣೆಗಳು, ಪ್ರಯೋಗಾಲಯಗಳು, ನಿರ್ದೇಶಕರ ಕಚೇರಿ, ಪ್ರಾಧ್ಯಾಪಕರ ಕೊಠಡಿಗಳ ದುರಸ್ತಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿತು.

iit

'ಐಐಟಿಗೆ ಒದಗಿಸಿರುವ 3.05 ಕೋಟಿ ರೂ.ಗಳಲ್ಲಿ ತರಗತಿ, ಪ್ರಯೋಗಾಲಯಗಳು, ನಿರ್ದೇಶಕರ ಕಚೇರಿ, ಆಡಳಿತ ವಿಭಾಗಗಳನ್ನು ಅತ್ಯುತ್ತಮವಾಗಿ ನಿರ್ಮಿಸಲಾಗುತ್ತಿದೆ. ಹೆಚ್ಚುವರಿ ಅನುದಾನ ಒದಗಿಸಿದರೆ ವಾಲ್ಮಿ ಆವರಣದಲ್ಲಿ ಸುಮಾರು 30 ರಿಂದ 40 ಸಿಬ್ಬಂದಿ ವಸತಿ ಗೃಹಗಳನ್ನು ದುರಸ್ತಿಪಡಿಸಿ ಕೊಡಲಾಗುವುದು' ಎಂದು ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ಅವರು ಸಮಿತಿಗೆ ವಿವರಣೆ ನೀಡಿದರು.

ಹೊಸ ಜಾಗ ಉತ್ತಮವಾಗಿದೆ : ಮಾಧ್ಯಮಗಳ ಜೊತೆ ಮಾತನಾಡಿದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಅಪರ ಕಾರ್ಯದರ್ಶಿ ಸುಬ್ರಮಣ್ಯ ಅವರು, 'ರಾಜ್ಯ ಸರ್ಕಾರ ಐಐಟಿಗೆ ನೀಡಲು ಉದ್ದೇಶಿಸಿರುವ ಹೊಸ ನಿವೇಶನ ವಿದ್ಯಾಸಂಸ್ಥೆ ಸ್ಥಾಪನೆಗೆ ಉತ್ತಮವಾಗಿದೆ. ಈ ಮೊದಲು ಮೀಸಲಿರಿಸಿದ್ದ ಜಾಗಕ್ಕಿಂತಲೂ ಹೊಸ ಸ್ಥಳ ಉತ್ತಮವಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ 1.5 ಕಿ.ಮೀ ನಷ್ಟು ದೂರವಾದರೂ ಸಹ ಸಮರ್ಪಕ ರಸ್ತೆ ನಿರ್ಮಿಸಿಕೊಡುವ ಭರವಸೆ ಜಿಲ್ಲಾಡಳಿತ ನೀಡಿದೆ' ಎಂದರು.

dharwad

ಒಂದು ತಿಂಗಳಲ್ಲಿ ಹಸ್ತಾಂತರ : ಮಾಧ್ಯಮಗಳ ಜೊತೆ ಮಾತನಾಡಿದ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು, 'ಐಐಟಿ ಸ್ಥಾಪನೆಗೆ ಪ್ರಸ್ತಾಪಿಸಿರುವ ಹೊಸ ಸ್ಥಳದ ಬಗೆಗೆ ತಜ್ಞರ ಸಮಿತಿಯು ತೃಪ್ತಿ ವ್ಯಕ್ತಪಡಿಸಿದೆ. ಮಮ್ಮಿಗಟ್ಟಿ ಸೀಮೆಯ ಹೊಸ ಸ್ಥಳವು 470 ಎಕರೆ ಸರ್ಕಾರಿ ಭೂಮಿ ಹಾಗೂ 198 ಎಕರೆ ಸಾಮಾಜಿಕ ಅರಣ್ಯಭೂಮಿ ಹೊಂದಿದ್ದು, ಒಟ್ಟು 668 ಎಕರೆ ವಿಶಾಲವಾದ ಬೃಹತ್ ನಿವೇಶನವನ್ನು ರಾಜ್ಯ ಸರ್ಕಾರ ಹಸ್ತಾಂತರ ಮಾಡುತ್ತಿದೆ. ಒಂದು ತಿಂಗಳ ಒಳಗಾಗಿ ಖಾತೆ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು' ಎಂದರು.

ಅಂದಹಾಗೆ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಕಟ್ಟಡದಲ್ಲಿ ಐಐಟಿ ಕ್ಯಾಂಪಸ್ ತಾತ್ಕಾಲಿಕವಾಗಿ ಸ್ಥಾಪನೆಯಾಗಲಿದೆ. ಜೂನ್ 5ರಂದು ಐಐಟಿ ಉದ್ಘಾಟನೆಯಾಗಲಿದ್ದು, ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್‌ಗಳ ತರಗತಿಗಳು ಜುಲೈನಲ್ಲಿ ಆರಂಭವಾಗಲಿದೆ. ಪ್ರತಿ ಕೋರ್ಸ್‌ನಲ್ಲಿ 40 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. [ಮಾಹಿತಿ : ಕರ್ನಾಟಕ ವಾರ್ತೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+