ವಿದ್ಯಾಕಾಶಿ ಧಾರವಾಡದಲ್ಲಿ ಜಲಕ್ಷಾಮ: ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಕೂಗು ಕೇಳುವವರೇ ಇಲ್ಲ
ಧಾರವಾಡ, ಏಪ್ರಿಲ್ 05: ರಾಜಧಾನಿ ಬೆಂಗಳೂರು ಮಾತ್ರವಲ್ಲದೇ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ನೀರಿಗೆ ತತ್ವಾರ ಉಂಟಾಗಿದೆ. ವಿದ್ಯಾಕಾಶಿ ಧಾರವಾಡಕ್ಕೂ ನೀರಿನ ಸಮಸ್ಯೆ ಉಂಟಾಗಿದ್ದು, ಇಲ್ಲಿನ ಜಿಲ್ಲಾಸ್ಪತ್ರೆಗೂ ನೀರಿನ ಕೊರತೆಯ ಬಿಸಿ ತಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ರೋಗಿಗಳು ತೀವ್ರ ಪರದಾಟ ಅನುಭವಿಸುತ್ತಿದ್ದಾರೆ.
ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಜಲಕ್ಷಾಮ ಉಂಟಾಗಿದೆ. ಬಿಸಿಲಿಗೆ ತತ್ತರಿಸುವು ಜನರಿಗೆ, ಆಸ್ಪತ್ರೆಗಳಿಗೆ ಸಮರ್ಪಕ ಕುಡಿಯುವ ನೀರಿನ ಅಗತ್ಯತೆ ಇದೆ. ಪ್ರತಿ ನಿತ್ಯ ಎಲ್ ಮತ್ತು ಟಿ ಕಂಪನಿಯ ಸರಬರಾಜು ವ್ಯವಸ್ಥೆಯಿಂದ ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಆಸ್ಪತ್ರೆ ಖಾಸಗಿ ಟ್ಯಾಂಕರ್ಗಳಿಗೆ ನೀರನ್ನೇ ಆಸರೆ ಪಡುವಂತಾಗಿದೆ.

ಅವಳಿ ನಗರಕ್ಕೆ ನೀರು ಪೂರೈಕೆಯಲ್ಲಿ ಕುಸಿತ
ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಪೂರೈಸುವ ಮಲಪ್ರಭಾ ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟವೂ ಕುಸಿಯುತ್ತಿದೆ. ಬೊರವೆಲ್ಗಳು ಬತ್ತಿ ಹೋಗುತ್ತಿವೆ. ಇದರ ಪರಿಣಾಮವಾಗಿ ಅವಳಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬೇಡಿಕೆಗೆ ತಕ್ಕಂತೆ ನೀರು ಪೂರೈಸಲು ಆಗುತ್ತಿಲ್ಲ. ಕೆಲವೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. ಈ ನೀರು ಕೊರತೆಯ ಪರಿಣಾಮ ಜಿಲ್ಲಾಆಸ್ಪತ್ರೆಯ ಮೇಲು ಆಗಿದೆ.
ಬೇಸಿಗೆ ದಿನ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚು ನೀರು ಬೇಕಿರುತ್ತದೆ. ಆದರೆ ಸಾಮಾನ್ಯ ದಿನಗಳಷ್ಟು ನೀರು ಸಿಗುತ್ತಿಲ್ಲ ಎಂದು ಅವಳಿನಗರದ ಜನ ಒದ್ದಾಡುತ್ತಿದ್ದಾರೆ. ನೀರು ಸರಬರಾಜು ವ್ಯವಸ್ಥೆಯಿಂದ ಬರುತ್ತಿರುವ ನೀರು ಆಸ್ಪತ್ರೆಯ ಬೇಡಿಕೆಗೆ ತಕ್ಕಷ್ಟು ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.
ಖಾಸಗಿ ಟ್ಯಾಂಕರ್ಗಳೇ ಗತಿ
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೀರು ಸರಬರಾಜು ವ್ಯವಸ್ಥೆ ನೋಡಿಕೊಳ್ಳುವ ಎಲ್ ಆಂಡ್ ಟಿ ಕಂಪನಿ ನಿತ್ಯ ಎರಡು ಟ್ಯಾಂಕರ್ ನೀರನ್ನು ಉಚಿತವಾಗಿ ಆಸ್ಪತ್ರೆಗೆ ಕೊಡುತ್ತಿದೆ. ಆದರೂ ಬೇಡಿಗೆಯ ದಿನಗಳಾಗಿದ್ದರಿಂದ ಇಷ್ಟು ನೀರು ನಿತ್ಯ ಬಳಕೆಗೆ ಸಾಲುತ್ತಿಲ್ಲ. ಹೀಗಾಗಿ ಈಗ ಜಿಲ್ಲಾ ಆಸ್ಪತ್ರೆ ಖಾಸಗಿ ಟ್ಯಾಂಕರ್ಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಧಾರವಾಡದ ಈ ಜಿಲ್ಲಾಸ್ಪತ್ರೆ ಕೇವಲ ಜಿಲ್ಲೆಗೆ ಮಾತ್ರವಲ್ಲದೇ ಉತ್ತರ ಕನ್ನಡ ಜಿಲ್ಲೆ ಎರಡು ಹಾಗೂ ಬೆಳಗಾವಿ ಜಿಲ್ಲೆಯ ಮೂರು ತಾಲೂಕಿನ ಜನರಿಗೆ ಆರೋಗ್ಯ ಆಸರೆಯಾಗಿದೆ. ಇಲ್ಲಿ ಹೊಸದಾಗಿ ನಿರ್ಮಿಸಿರುವ ತಾಯಿ ಮಗು ಆರೈಕೆಯ ಹೆರಿಗೆ ಆಸ್ಪತ್ರೆ ಬಡವರಿಗೆ ಉತ್ತಮ ಸೌಕರ್ಯ ನೀಡುತ್ತಿದೆ.
ನಿತ್ಯ 10 ರಿಂದ 15 ಟ್ಯಾಂಕರ್ ನೀರು
ಹೀಗಾಗಿ ಬಹುತೇಕರು ಇಲ್ಲಿಯೆ ಹೆರಿಗೆಗೆ ಬರುತ್ತಾರೆ. ಹೆರಿಗೆ ವಿಭಾಗಕ್ಕೆ ಹೆಚ್ಚಿನ ನೀರು ಸಹ ಬೇಕಾಗುತ್ತದೆ. ಆದರೆ ಬೇಡಿಕೆಗೆ ತಕ್ಕಂತೆ ನೀರೇ ಇಲ್ಲ. ಹೀಗಾಗಿ ನಿತ್ಯ 10 ರಿಂದ 15 ಟ್ಯಾಂಕರ್ ನೀರು ತರಿಸುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಜಿಲ್ಲೆಯ ನೀರಿನ ಸಂಕಷ್ಟ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಈಗಾಗಲೇ ಬೊರವೆಲ್ಗಳ ನೀರಿನ ಮಟ್ಟ ಕುಸಿಯುತ್ತಿದೆ. ಹೀಗಾಗಿ ಅನೇಕ ಕಡೆ ನೀರಿನ ಸಮಸ್ಯೆ ಆಗಿದೆ. ಜಿಲ್ಲಾ ಆಸ್ಪತ್ರೆ ಆವರಣದ ಬೊರವೆಲ್ನಲ್ಲೂ ಕೂಡ ನೀರು ಕಡಿಮೆಯಾಗಿದೆ.
ಈ ಕಾರಣದಿಂದ ಆಸ್ಪತ್ರೆ ರೋಗಿಗಳಿಗೆ ನೀರು ಪೂರೈಕೆಯ ಸಮಸ್ಯೆ ಆಗಿದೆ. ಶೀಘ್ರವೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಒಟ್ಟಾರೆಯಾಗಿ ಸರ್ಕಾರದ ಅಧೀನದಲ್ಲಿರುವ ಜಿಲ್ಲಾ ಆಸ್ಪತ್ರೆಯೇ ಈಗ ಖಾಸಗಿ ಟ್ಯಾಂಕರ್ಗಳಿಗೆ ಮೊರೆ ಹೋಗಬೇಕಿದೆ. ಸರ್ಕಾರ ಪರಿಹಾರ ನೀಡುವವರಿಗೆ ಖಾಸಗಿ ಟ್ಯಾಂಕರ್ ನೀರೆ ಗತಿ ಎಂಬಂತಾಗಿದೆ.












Click it and Unblock the Notifications