ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್ನಿಂದ ಅಭಿವೃದ್ಧಿ ಮಂತ್ರ
ಹುಬ್ಬಳ್ಳಿ, ಜನವರಿ 28 : ಅಭಿವೃದ್ಧಿ ಪಥದಲ್ಲಿ ಸಾಗಲು ಉದ್ಯಮಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಹುಬ್ಬಳ್ಳಿಯ 'ದೇಶಪಾಂಡೆ ಫೌಂಡೇಶನ್' ಸಂಸ್ಥೆ "ಅಭಿವೃದ್ಧಿ ಸಂವಾದ" ಕಾರ್ಯಾಗಾರವನ್ನು ಫೆ.6 ಮತ್ತು 7ರಂದು ಹಮ್ಮಿಕೊಂಡಿದೆ.
ಖ್ಯಾತ ಉದ್ಯಮಿ, ದಾನಿ ಗುರುರಾಜ ದೇಶಪಾಂಡೆ ಸಂಸ್ಥಾಪಿಸಿದ ಈ ಫೌಂಡೇಶನ್ ಸತತ 7ನೇ ಬಾರಿ "ಅಭಿವೃದ್ಧಿ ಸಂವಾದ" ಏರ್ಪಡಿಸುತ್ತಿದೆ. ದೇಶ-ಮತ್ತು ವಿದೇಶಗಳಿಂದ ಆಗಮಿಸುವ ಅನೇಕ ಯಶಸ್ವಿ ಉದ್ಯಮಿಗಳು, ತಮ್ಮ ತಮ್ಮ ಕ್ಷೇತ್ರದಲ್ಲಿನ ಲೋಪದೋಷ ಮಾಹಿತಿ ಮತ್ತು ಲಾಭಗಳ ಅನುಕೂಲತೆಗಳನ್ನು ಪಡೆದುಕೊಳ್ಳುವ ಬಗೆಯನ್ನು ಸಂವಾದದಲ್ಲಿ ಭಾಗವಹಿಸುವ ಪ್ರತಿನಿಧಿಗಳೊಂದಿಗೆ ಚರ್ಚಿಸಲಿದ್ದಾರೆ.
ಈ ಸಂವಾದದಲ್ಲಿ ನಿಗದಿತ ಶುಲ್ಕ ನೀಡಿ ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ. ಆದರೆ 450 ಜನರಿಗೆ ಮಾತ್ರ ಸೀಮಿತ ಅವಕಾಶವಿದೆ ಎಂದು ದೇಶಪಾಂಡೆ ಫೌಂಡೇಶನ್ ತಾಂತ್ರಿಕ ವಿಭಾಗದ ಮುಖ್ಯಸ್ಥ ಸುನೀಲಕುಮಾರ ಎಸ್.ಕೆ. ಒನ್ಇಂಡಿಯಾ ಕನ್ನಡಕ್ಕೆ ಗುರುವಾರ ತಿಳಿಸಿದರು.
ಉದ್ಯಮ ಕ್ಷೇತ್ರದಲ್ಲಿ ಹೊಸ ಹೊಸ ವಿಚಾರಗಳು ಮತ್ತು ತಾಂತ್ರಿಕತೆಯನ್ನು ಬಳಸಿಕೊಂಡು ಯಶಸ್ವಿಯಾಗುವುದು ಹೇಗೆ ಎಂಬುದನ್ನು ಕೂಡ ಸಂವಾದದಲ್ಲಿ ಚರ್ಚಿಸಲಾಗುತ್ತದೆ. ಎಲ್ಲರೂ ತಮ್ಮ ಕ್ಷೇತ್ರಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತ ಚರ್ಚಿಸುವುದರಿಂದ ಇದೊಂದು ಉದ್ಯಮಿಗಳಾಗಬೇಕೆನ್ನುವವರಿಗೆ ಬಹುಪಯೋಗಿ ಕಾರ್ಯಕ್ರಮ ಎನ್ನುತ್ತಾರೆ ಸುನೀಲಕುಮಾರ.
ಅಮೆರಿಕದ ಬಾಸ್ಟನ್ ನಲ್ಲಿ ನೆಲೆಸಿರುವ ಕನ್ನಡಿಗ ಗುರುರಾಜ ದೇಶಪಾಂಡೆ ಅವರು, ಈ ಸಂಗತಿಯನ್ನು ತಿಳಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಬುಧವಾರ ಏರ್ಪಡಿಸಿದ್ದರು. ಹುಬ್ಬಳ್ಳಿ ಮತ್ತು ಸುತ್ತಲಿನ ಹಳ್ಳಿಗಳ ಜನರನ್ನು ಬಡತನ ರೇಖೆಯಿಂದ ಮೇಲೆತ್ತಲು 11 ಎಕರೆ ಜಮೀನನ್ನು ಕೂಡ ಮೀಸಲಿಡಲಾಗಿದ್ದು, ಅಲ್ಲಿ ರೈತರಿಗೆ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
ಕೇವಲ ಉದ್ಯಮಿಗಳಿಗಷ್ಟೇ ಸೀಮಿತವಲ್ಲದ ಈ ಸಂವಾದಲ್ಲಿ ಶೈಕ್ಷಣಿಕ, ವೈದ್ಯಕೀಯ, ಕೃಷಿ ಕ್ಷೇತ್ರದ ವಿಷಯಗಳನ್ನು ಚರ್ಚಿಲಾಗುತ್ತದೆ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ, ಪತ್ರಕರ್ತ ಶೇಖರ್ ಗುಪ್ತಾ, ಶೈಕ್ಷಣಿಕ ದಿಗ್ಗಜ ಮಾಧವ ಚವ್ಹಾಣ, ವೈದ್ಯಕೀಯ ಕ್ಷೇತ್ರದ ಆರ್.ವಿ. ರಮಣಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸ್ಥಳೀಯ ಬಿವಿಬಿ ಎಂಜಿನೀಯರಿಂಗ್ ಕಾಲೇಜ್ ಆವರಣದಲ್ಲಿರುವ ಫೌಂಡೇಶನ್ ಸಭಾಂಗಣದಲ್ಲಿ ಫೆ. 6ರ ಬೆಳಗ್ಗೆ 9-30ಕ್ಕೆ ಆರಂಭವಾಗುವ ಈ ಕಾರ್ಯಾಗಾರದಲ್ಲಿ ಗ್ರಾಮೀಣ ಬ್ಯಾಂಕ್ ನ ರೂವಾರಿ ಹಾಗೂ ಮೈಕ್ರೋ ಫೈನಾನ್ಸ್ ನ ಹರಿಕಾರರೆಂದೇ ಖ್ಯಾತಿ ಹೊಂದಿದ ಮುಹಮ್ಮದ್ ಯೂನುಸ್ ಮುಖ್ಯ ಆಕರ್ಷಣೆಯಾಗಲಿದ್ದಾರೆ. ಇವರೊಂದಿಗೆ ಖಗೋಳಶಾಸ್ತ್ರಜ್ಞೆ ಅನೌಶೇ ಅನ್ಸಾರಿ ಕೂಡ ಉಪಸ್ಥಿತರಿರಲಿದ್ದು, ಸಂವಾದದಲ್ಲಿ ಪ್ರತಿನಿಧಿಗಳೊಂದಿಗೆ ಅಭಿವೃದ್ಧಿಯ ಕುರಿತು ಚರ್ಚಿಸಲಿದ್ದಾರೆ.
ಎಕ್ಸಿಕ್ಯೂಟ್ ಲೋಕಲಿ, ಇನ್ನೋವೇಟ್ ಗ್ಲೋಬಲಿ ಎಂಬ ಧ್ಯೇಯದೊಂದಿಗೆ "ಡೆವಲಪ್ಮೆಂಟ್ ಡೈಲಾಗ್" ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ವಿದೇಶಿಗರು ಸೇರಿದಂತೆ ಸುಮಾರು 600 ಜನ ಪಾಲ್ಗೊಂಡು ತಮ್ಮ ಅನಿಸಿಕೆ ಮತ್ತು ಅಭಿವೃದ್ಧಿ ಕುರಿತು ಮುಕ್ತ ಚರ್ಚೆ ನಡೆಸಲಿದ್ದಾರೆ. ಎಲ್ಲ ಪ್ರತಿನಿಧಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, 45 ನಿಮಿಷಗಳಂತೆ ಒಟ್ಟು 12ರಿಂದ 14 ಸಂವಾದಗಳು ನಡೆಯಲಿವೆ.
ಕಾರ್ಯಾಗಾರದಲ್ಲಿ ದೇಶದ ಮತ್ತು ವಿದೇಶದ ಪ್ರತಿಷ್ಠಿತ ಉದ್ಯಮಿಗಳು ಸೇರಿದಂತೆ ಉನ್ನತ ಮಟ್ಟದ ಸರಕಾರಿ ಅಧಿಕಾರಿಗಳೂ ಕೂಡ ಪಾಲ್ಗೊಂಡು ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ. ಕಾರ್ಯಾಗಾರದಲ್ಲಿ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ.