ಶ್ರೀರಾಮುಲು ವಿರುದ್ಧ ಅಖಾಡಕ್ಕಿಳಿದ ಡಿಕೆಶಿ: ಬಿಸಿತುಪ್ಪವಾದ ಶಿವಳ್ಳಿ ಸಾವಿನ ಹೇಳಿಕೆ
Recommended Video
ಬೆಂಗಳೂರು, ಮೇ 09: ಮಾಜಿ ಸಚಿವ, ದಿವಂಗತ ಸಿಎಸ್ ಶಿವಳ್ಳಿ ಅವರ ಕುರಿತು ಬಿಜೆಪಿ ಮುಖಂಡ, ಮೊಳಕಾಲ್ಮೂರು ಶಾಸಕ ಬಿ ಶ್ರೀರಾಮುಲು ನೀಡಿದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ್ದು, ಈ ಹೇಳಿಕೆಯಿಂದಾಗಿ ಡಿ ಕೆ ಶಿವಕುಮಾರ್ ಅವರು ಅಖಾಡಕ್ಕಿಳಿಯುವಂತಾಗಿದೆ!
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಳೆದ ವರ್ಷ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಸಮಯದಲ್ಲಿ ಉಭಯ ನಾಯಕರೂ ಹಲವು ಬಾರಿ ಮಾತಿನ ಚಕಮಕಿ ನಡೆಸಿದ್ದರು. ಇದೀಗ ಮತ್ತೊಮ್ಮೆ ಅದೇ ಸನ್ನಿವೇಶ ನಿರ್ಮಾಣವಾಗುವ ಸೂಚನೆ ಸಿಕ್ಕಿದೆ.
ಕರ್ನಾಟಕ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ ಎಂದ ಶ್ರೀರಾಮುಲು ಅವರ ಹೇಳಿಕೆಯ ವಿರುದ್ಧ ಕುಂದಗೋಳ ಚುನಾವಣಾಧಿಕಾರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ಸಂಬಂಧ ಬಳ್ಳಾರಿ ಸಂಸದ ವಿ ಎಸ್ ಉಗ್ರಪ್ಪ ಅವರೊಂದಿಗೆ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಶ್ರೀರಾಮುಲು ಹೇಳಿಕೆ ಏನು?
"ಸಿಎಸ್ ಶಿವಳ್ಳಿ ಒಬ್ಬ ಒಳ್ಳೆಯ ವ್ಯಕ್ತಿ. ಅವರು ಈಗಿಲ್ಲ. ಆದ್ದರಿಂದ ಅವರ ಬಗ್ಗೆ ನಾನು ಮಾತನಾಡುದಕ್ಕೆ ಇಷ್ಟಪಡುವುದಿಲ್ಲ. ಆದರೆ ಅವರ ಸಾವಿಗೆ ಈ ಕಾಂಗ್ರೆಸ್ ಮೈತ್ರಿ ಸರ್ಕಾರವೇ ಕಾರಣ ಎಂಬುದು ಸತ್ಯ. ಅವರಿಗೆ ಮೈತ್ರಿ ಸರಕಾರದಲ್ಲಿ ನೀಡಲಾದ ಕಿರುಕುಳ ಮತ್ತು ಹೇರಿದ ಒತ್ತಡದಿಂದಲೇ ಅವರು ಹೃದಯಾಘಾತದಿಂದ ಮೃತರಾದರು" ಎಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿದ್ದರು.

ದೂರು ನೀಡಲು ಮುಂದಾದ ಡಿಕೆಶಿ
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಮೇಲೆ ಇಂಥ ಆರೋಪ ಹೊರಿಸಿದ ಶ್ರೀರಾಮುಲು ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನಿರ್ಧರಿಸಿದ್ದು, ಕುಂದಗೋಳ ಚುನಾವಣಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.

ರಾತ್ರೋರಾತ್ರಿ ಉಗ್ರಪ್ಪ ಜೊತೆ ಚರ್ಚೆ
ಈ ಬೆಳವಣಿಗೆಯ ನಂತರ ವಿ ಎಸ್ ಉಗ್ರಪ್ಪ ಅವರನ್ನು ತಮ್ಮ ಬಳಿ ರಾತ್ರೋ ರಾತ್ರಿ ಕರೆಸಿಕೊಂಡ ಡಿಕೆ ಶಿವಕುಮಾರ್ ಅವರು ಸುದೀರ್ಘ ಚರ್ಚೆ ನಡೆಸಿದ್ದಲ್ಲದೆ, ಶ್ರೀರಾಮುಲು ಅವರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ಗುರುವಾರ ಕುಂದಗೋಳ ಚುನಾವಣಾಧಿಕಾರಿ ಬಳಿ ಉಗ್ರಪ್ಪ, ಡಿಕೆಶಿ ನೇತೃತ್ವದಲ್ಲಿ ಶ್ರೀರಾಮುಲು ವಿರುದ್ಧ ದೂರು ನೀಡಲಾಗುತ್ತಿದೆ.

ಮೇ 19 ರಂದು ಉಪಚುನಾವಣೆ
ಸಿ ಎಸ್ ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಮೇ 19 ರಂದು ಉಪಚುನಾವಣೆ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ಕಳೆದ ಮಾರ್ಚ್ 22 ರಂದು ಹೃದಯಾಘಾತದಿಂದ ಮೃತರಾದ 56 ವರ್ಷ ವಯಸ್ಸಿನ ಶಿವಳ್ಳಿ ಅವರ ನಂತರ ಈ ಕ್ಷೇತ್ರದ ಅಭ್ಯರ್ಥಿಯಾಗಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರು ಚುನಾವಣೆ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡ ಅವರು ಕಣದಲ್ಲಿದ್ದಾರೆ.












Click it and Unblock the Notifications