ಹುಬ್ಬಳ್ಳಿ: ರಸ್ತೆ ಗುಂಡಿಗಳಲ್ಲಿ ಪಟಾಕಿ ಸಿಡಿಸಿ ಸರ್ಕಾರ ವಿರುದ್ಧ ಪ್ರತಿಭಟನೆ
ಹುಬ್ಬಳ್ಳಿ ಅಕ್ಟೋಬರ್ 26: ಉತ್ತರ ಕರ್ನಾಟಕದಲ್ಲಿ ಅವಳಿ ನಗರಗಳೆಂದರೆ ಹುಬ್ಬಳ್ಳಿ ಧಾರವಾಡ ಬಹಳ ಹೆಸರು ವಾಸಿ. ಶಿಕ್ಷಣಕ್ಕೆ ವಿದ್ಯಾ ಕಾಶಿ ಧಾರವಾಡ ಹಾಗೂ ವಾಣಿಜ್ಯಕ್ಕೆ ಹುಬ್ಬಳ್ಳಿ ನಗರ ಬಹಳ ಪ್ರಸಿದ್ಧಿಯನ್ನು ಪಡೆದಿವೆ.
ಉತ್ತರ ಕರ್ನಾಟಕದ ಪ್ರಮುಖ ನಗರವಾಗಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಸುತ್ತಮುತ್ತಲಿನ 13 ಜಿಲ್ಲೆಯ ಜನ ಭೇಟಿ ಕೊಡುತ್ತಾರೆ. ಆದರೆ ಇಲ್ಲಿನ ರಸ್ತೆ ಗುಂಡಿಗಳು ಅವರನ್ನು ಸ್ವಾಗತ ಮಾಡುತ್ತಿವೆ. ಅವಳಿ ನಗರದ ಕೆಟ್ಟ ರಸ್ತೆಗಳಿಂದ ನಗರ ವಾಸಿಗಳು ಬೇಸತ್ತು ಹೋಗಿದ್ದಾರೆ.
ಧಾರವಾಡ: ಗ್ರಹಣದ ವೇಳೆ ಊಟ ಸವಿದು ಜಾಗೃತಿ ಮೂಡಿಸಿದ ಪ್ರಜ್ಞಾವಂತರ ವೇದಿಕೆ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆ
ಹುಬ್ಬಳ್ಳಿ ನಗರದಲ್ಲಿ ರಸ್ತೆಗಳು ಗುಂಡಿಗಳು ಬಾಯ್ತೆರೆದು ಕುಳಿತಿವೆ.
ಸರ್ಕಾರ, ಪಾಲಿಕೆಯ ವಿರುದ್ಧ ದೀಪ ಹಚ್ಚಿ ಆಕ್ರೋಶ
ರಸ್ತೆಗಳು ಗುಂಡಿಗಳ ಬಗ್ಗೆ ಎಷ್ಟೇ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿದರು ಏನೂ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ರಸ್ತೆ ಗುಂಡಿಗಳಲ್ಲೇ ದೀಪಗಳನ್ನು ಹಚ್ಚಿ, ಹಸಿರು ಪಟಾಕಿ ಸಿಡಿಸಿ ವಿನೂತನವಾಗಿ ಹುಬ್ಬಳ್ಳಿ ನಗರದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ರಸ್ತೆ ಗುಂಡಿಗಳ ಮೇಲೆ ದೀಪಗಳನ್ನು ಹಚ್ಚಿ ಇಡುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿ ಸ್ಥಳೀಯ ಪ್ರತಿನಿಧಿಗಳ ವಿರುದ್ಧ ನಗರ ವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಪಡಿಸದ ಸರ್ಕಾರ ಹಾಗೂ ಪಾಲಿಕೆಯ ವಿರುದ್ಧ ದೀಪ ಹಚ್ಚಿ ಹಸಿರು ಪಟಾಕಿ ಸಿಡಿಸುವ ಮುಖಾಂತರ ಅಣಕು ಪ್ರದರ್ಶನ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಗುಂಡಿ ಬಿದ್ದ ರಸ್ತೆಗಳಲ್ಲಿ ದೀಪ ಹಚ್ಚಿ ದೀಪಾವಳಿ ಆಚರಣೆ
ಹುಬ್ಬಳ್ಳಿಯ ಪ್ರಮುಖ ರಸ್ತೆಗಳಲ್ಲಿ ಒಂದಾದ ಬಸವ ವನದ ಹತ್ತಿರ ಹರಿಯುತಿರುವ ಒಳಚರಂಡಿ ನೀರು ಗುಂಡಿ ಬಿದ್ದ ರಸ್ತೆಗಳಲ್ಲಿ ನಿಂತಿರುವ ಸ್ಥಳದಲ್ಲಿ ದೀಪ ಹಚ್ಚುವ ಮೂಲಕ ದೀಪಾವಳಿ ಆಚರಿಸಿ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ ನೇತೃತ್ವದಲ್ಲಿ ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. "ದಿನನಿತ್ಯ ಕೇಂದ್ರದ ಪ್ರಭಾವಿ ಸಚಿವರು, ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಸತತ 30 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಾಜಿ ಮುಖ್ಯಮಂತ್ರಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ, ಇಡೀ ದೇಶದಲ್ಲೇ ಅತಿ ಹೆಚ್ಚು ರೋಡ್ ಟ್ಯಾಕ್ಸ್ ಪಾವತಿಸುವ ಕರ್ನಾಟಕ ರಾಜ್ಯದಲ್ಲಿ ರಸ್ತೆ ಪರಿಸ್ಥಿತಿ ಹೀಗಿದೆ. ಇದು 40% ಸರ್ಕಾರದ ದುಸ್ಥಿತಿಯನ್ನು ತೋರಿಸುತ್ತದೆ," ಎಂದು ರಜತ್ ಉಳ್ಳಾಗಡ್ಡಿಮಠ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿ ಮುಚ್ಚುವಂತೆ ಆಗ್ರಹ
ದೀಪಾವಳಿ ಆಚರಣೆಯ ಹೆಸರಿನಲ್ಲಿ ಹುಬ್ಬಳ್ಳಿ ನಗರ ನಿವಾಸಿಗಳು ರಸ್ತೆ ಗುಂಡಿ ದುರಸ್ತಿ ಕಾರ್ಯ ಮಾಡದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ಗುಂಡಿಗಳಿಂದ ವಾಹನ ಸವಾರರ ಜೀವ ಅಪಾಯದಲ್ಲಿದೆ. ಗುಂಡಿ ಬಿದ್ದ ರಸ್ತೆಗಳಿಂದ ಹಾಗೂ ಹಾಳಾದ ರಸ್ತೆಗಳಿಂದ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳಲ್ಲಿ ಪ್ರಯಾಣಿಸುವವರ ಆರೋಗ್ಯ ಸ್ಥಿತಿ ಕೆಡುತ್ತಿದೆ. ಸಂಬಂಧಪಟ್ಟ ಚುನಾಯಿತ ಜನಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿ ಮುಚ್ಚುವುದರೊಂದಿಗೆ ರಸ್ತೆಗಳ ಗುಣಮಟ್ಟ ಹಾಳಾಗದಿರುವ ಬಗ್ಗೆ ಮುಂಜಾಗ್ರತೆ ಕ್ರಮ ವಹಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರ ವಿರುದ್ಧ ಹುಬ್ಬಳ್ಳಿ ಜನತೆ ಆಕ್ರೋಶ
ಮಾಜಿ ಮಹಾಪೌರರಾದ ಪ್ರಕಾಶ್ ಕ್ಯಾರಕಟ್ಟಿ ಪಾಲಿಕೆ ಸದಸ್ಯರಾದ ಸುವರ್ಣ ಕಲ್ಲಕುಂಟ್ಲ, ಆರೀಫ್ ಭದ್ರಾಪೂರ್, ಸಂದಿಲ್ ಕುಮಾರ್, ಪ್ರಕಾಶ್ ಕುರಟ್ಟಿ, ಇಕ್ಬಾಲ್ ನವಲುರ, ಮಾಜಿ ಪಾಲಿಕೆ ಸದಸ್ಯರಾದ ಹೂವಪ್ಪ ದಾಯಗೋಡಿ, ಪಿರಾಜಿ ಖಂಡೆಕರ್, ಸುನಿಲ್ ಮಠಪತಿ, ಅಶೋಕ್ ಕಲಾದಗಿ, ಕಲಾವತಿ ದತ್ವಾಡ, ಸಾವಿತ್ರಿ ಮಾಳಗಿ, ಸಾಧಿಕ್ ಎಕ್ಕುಂಡಿ, ರಘುವೀರ್ ಪಾಟೀಲ್, ರಾಹುಲ್ ಉಪಲದಡ್ಡಿ, ಜಶ್ವಂತ್ ಗಾಣದಾಳ್, ವೀರೇಶ್ ಜುಂಜುನ್ನವರ್, ಸಚಿನ್ ಡೋಣೂರ್, ಮಹೇಶ್ ಭಜಂತ್ರಿ ಸೇರಿದಂತೆ ಇನ್ನೂ ಅನೇಕರು ಭಾಗಿಯಾಗಿದ್ದರು.