ಬದುಕಿದ್ದರೂ ನಿಧನರಾಗಿದ್ದಾರೆ ಎಂದು ಮತದಾರರ ಪಟ್ಟಿಯಿಂದ ಪಾಲಿಕೆ ನಿವೃತ್ತ ಆಯುಕ್ತರ ಹೆಸರು ಡಿಲೀಟ್
ಧಾರವಾಡ, ಡಿಸೆಂಬರ್ 6: ಮತದಾರ ಪಟ್ಟಿಯಲ್ಲಿ ಇತ್ತೀಚೆಗೆ ಸಾಕಷ್ಟು ಅಕ್ರಮ ನಡೆಯುತ್ತಿದೆ ಎನ್ನುವ ಆರೋಪವನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರಾದ ಅರವಿಂದ ಬೆಲ್ಲದ್ ಕೂಡ ಮತದಾರ ಪಟ್ಟಿಯಲ್ಲಿ ಹೆಸರುಗಳು ಡಿಲೀಟ್ ಆಗಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಮತದಾರ ಪಟ್ಟಿಯಲ್ಲಿ ಹೆಸರುಗಳು ಡಿಲೀಟ್ ಆಗಿರುವುದು ಒಂದೆಡೆಯಾದರೆ, ಜೀವಂತವಾಗಿರುವವರನ್ನೇ ನಿಧನರಾಗಿದ್ದಾರೆ ಎಂದು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಪ್ರಕರಣ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ ನಿವೃತ್ತ ಆಯುಕ್ತ ಡಾ.ಚೆನ್ನಬಸವರಾಜ ಶಿರಗುಪ್ಪಿ ಎನ್ನುವವರ ಹೆಸರು ಮತದಾರ ಪಟ್ಟಿಯಲ್ಲಿ ಡಿಲೀಟ್ ಆಗಿದೆ. ಶಿರಗುಪ್ಪಿ ಅವರು ಬಳ್ಳಾರಿಯ ಮಹಾನಗರ ಪಾಲಿಕೆ ಆಯುಕ್ತರಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದವರು.

ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಹೋದ ಶಿರಗುಪ್ಪಿ ಅವರಿಗೆ, ಮಹಾನಗರ ಪಾಲಿಕೆ ಸಿಬ್ಬಂದಿ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರೇ ಇಲ್ಲ ಎಂದು ಹೇಳಿದ್ದಾರಂತೆ. ಸರ್ವೇ ಮಾಡಲು ಬಂದಾಗ 'ಶಿರಗುಪ್ಪಿ ಅವರು ಇಲ್ಲ ಎಂದು ಹೇಳಿದ' ಒಂದೇ ಒಂದು ಕಾರಣಕ್ಕೆ ಅವರ ಹೆಸರನ್ನೇ ಮತದಾರ ಪಟ್ಟಿಯಿಂದ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಡಾ.ಚೆನ್ನಬಸವರಾಜ ಶಿರಗುಪ್ಪಿ " ನಾನು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನಕ್ಕೆ ಹೋದಾಗ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರೇ ಇಲ್ಲ ಎಂದು ಹೇಳಿದ್ದಾರೆ. ನಾನು ಬಳಿಕ ಆಫೀಸ್ಗೆ ಹೋಗಿ ಕೇಳಿದ್ದೇನೆ. ಸರ್ವೇ ಹೋದಾಗ, ನಮ್ಮ ಮನೆಯಲ್ಲಿ ನಾನು ಇಲ್ಲ, ಅಂದರೆ ನಾನು ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಊರಿನಲ್ಲಿ ಇಲ್ಲ ಎಂದು ಹೇಳಿದ್ದಾರೆ. ಅದಕ್ಕಾಗಿ ನಾನು ಇಲ್ಲ ಎಂದು ತೆಗೆದಿದ್ದಾರೆ. ಇದೀಗ ನಾನು ಮತ್ತೆ ಅರ್ಜಿ ಕೊಡಬೇಕು" ಎಂದಿದ್ದಾರೆ.
"ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಸದ್ಯ 15 ಸಾವಿರ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಇದರಲ್ಲಿ ಶಾಸಕ ಅರವಿಂದ ಬೆಲ್ಲದ್ ಕೂಡ ಶಾಮೀಲಾಗಿದ್ದಾರೆ. ಶಾಸಕ ಅರವಿಂದ ಬೆಲ್ಲದ್ ಅವರಿಗೆ ಸರ್ವೇ ಮಾಡಿಸಲು ಅಧಿಕಾರ ಕೊಟ್ಟವರಾದರೂ ಯಾರು..? ಕಾಂಗ್ರೆಸ್ ಕಾರ್ಪೋರೇಟರ್ ಇರುವ ಏರಿಯಾದಲ್ಲೇ ಮತದಾರರ ಹೆಸರು ಡಿಲೀಟ್ ಆಗುತ್ತಿವೆ" ಎಂಬ ಆರೋಪವನ್ನು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಮಾಡಿದ್ದಾರೆ.

ಹುಬ್ಬಳ್ಳಿ, ಧಾರವಾಡದಲ್ಲೂ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿಯೇ ಕೇಳಿ ಬಂದಿದ್ದು, ಇದರ ಜೊತೆಗೆ ಜೀವಂತವಾಗಿರುವವರ ಹೆಸರನ್ನು ಕೂಡ ಕಿತ್ತು ಹಾಕಲಾಗಿದೆ. ಇದೆಲ್ಲದರ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications