ಕೇಂದ್ರದಿಂದ ಕೊಡುವ ಅಕ್ಕಿ ಮೋದಿಯವರದ್ದಲ್ಲ: ಸಂತೋಷ್ ಲಾಡ್
ಧಾರವಾಡ, ಜೂನ್, 26: ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುತ್ತಿರುವ 5 ಕೆ.ಜಿ. ಅಕ್ಕಿ ನರೇಂದ್ರ ಮೋದಿಯವರದ್ದಲ್ಲ. ಅದು ಸರ್ಕಾರದ ಅಕ್ಕಿ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಯುಪಿಎ-2 ಸರ್ಕಾರ ಇದ್ದ ವೇಳೆ ಆಹಾರ ಭದ್ರತೆ ಕಾಯ್ದೆ ತಂದಿತ್ತು. ಆ ಕಾಯ್ದೆ ಮೂಲಕ 5 ಕೆಜಿ ಅಕ್ಕಿ ಕೊಟ್ಟಿದ್ದೇವೆ. ಈಗ ರಾಜ್ಯದಲ್ಲೂ ನಾವು 10 ಕೆ.ಜಿ. ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ ಎಂದರು.

ನಾಳೆ ವಂದೇ ಭಾರತ ರೈಲು ಉದ್ಘಾಟನೆಗೆ ಆಹ್ವಾನ ಇಲ್ಲದಿರುವ ಬಗ್ಗೆ ಮಾತನಾಡಿದ ಅವರು, ನನ್ನನ್ನು ಯಾಕೆ ಕರೆದಿಲ್ಲ ಎಂದು ಬಿಜೆಪಿಯವರನ್ನೇ ಕೇಳಬೇಕು. ನರೇಂದ್ರ ಮೋದಿ ಅವರೇ ರಾಷ್ಟ್ರಪತಿಗಳಿಗೆ ಆಹ್ವಾನ ನೀಡುವುದಿಲ್ಲ. ಇದೊಂದು ಸರ್ವಾಧಿಕಾರಿ ಆಡಳಿತ ಆಗಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದರು.
ಕಾಂಗ್ರೆಸ್ ವಿರುದ್ಧ ಕೆ.ಎಸ್.ಈಶ್ವರಪ್ಪ ಆಕ್ರೋಶ
ಹಾಗೆಯೇ ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ವಿರುದ್ಧ ವಿಪಕ್ಷ ನಾಯಕರು ಒಂದಲ್ಲ ಒಂದು ರೀತಿಯ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಅದೇ ರೀತಿ ಇಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ.
ಈ ಐದು ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್ನಲ್ಲಿ ಜಾರಿಗೆ ತರುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದರು. ಕಾಂಗ್ರೆಸ್ನವರು ಸುಳ್ಳು ಹೇಳಿ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅಲ್ಲದೆ ನಿರುದ್ಯೋಗಿ ಯುವಕರಿಗೆ ಮೋಸ ಮಾಡಿದ್ದಾರೆ. ಒಬ್ಬರಿಗೂ ಒಂದು ರೂಪಾಯಿಯೂ ಕೊಟ್ಟಿಲ್ಲ ಎಂದು ಆರೋಪ ಮಾಡಿದರು.
ಮತ್ತೊಂದೆಡೆ ಕೇಂದ್ರ ಸರ್ಕಾರ ಕೊಡುವ 5 ಕೆಜಿ ಉಚಿತ ಅಕ್ಕಿಯ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ಕಾಂಗ್ರೆಸ್ ನಾಯಕರು ಬಡ ಜನರಿಗೆ ಟೋಪಿ ಹಾಕಿ ಸರ್ಕಾರ ನಡೆಸುತ್ತಿದ್ದಾರೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪ ಮಾಡಿದರು.
ಇನ್ನು ವಿದ್ಯುತ್ ದರ ಏರಿಕೆಗೆ ಬಿಜೆಪಿ ಸರ್ಕಾರ ಅಪ್ರೂವಲ್ ಕೊಟ್ಟಿಲ್ಲ. ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು. ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಿದ್ದಿದೆ. ಕಾಂಗ್ರೆಸ್ನವರನ್ನು ಕರೆದುಕೊಂಡು ಬಂದಿದ್ದಕ್ಕೆ ನಮಗೆ ಈ ಗತಿ ಬಂದಿದೆ. ಆಪರೇಶನ್ ಕಮಲ ನಮಗೆ ಮುಳುವಾಯಿತು ಎಂದು ಈಶ್ವರಪ್ಪ ಗರಂ ಆದರು.












Click it and Unblock the Notifications