ಧಾರವಾಡ ಜಿಲ್ಲೆಯಲ್ಲಿ 81 ಕೆರೆಗಳ ಭರ್ತಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಹುಬ್ಬಳ್ಳಿ, ಅಕ್ಟೋಬರ್, 21: ಧಾರವಾಡ ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲವಾಗಿದ್ದು, ಗ್ರಾಮೀಣ ಪ್ರದೇಶಕ್ಕೆ ಅನುಕೂಲ ಆಗುವಂತೆ ಸುಮಾರು 81 ಕೆರೆಗಳನ್ನು ತುಂಬಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಎಲ್ಲೆಲ್ಲಿ ಅನುಕೂಲತೆ ಇದೆಯೋ ಅಲ್ಲಿಯ ಎಲ್ಲ ಕೆರೆಗಳನ್ನು ತುಂಬಿಸಲಾಗಿದ್ದು, ಎಲ್ಲಿಯೂ ಸಹ ಟ್ಯಾಂಕರ್ ಮೂಲಕ ನೀರನ್ನು ಸದ್ಯಕ್ಕೆ ಪೂರೈಕೆ ಮಾಡುತ್ತಿಲ್ಲ ಎಂದರು.

ಮಳೆಯ ಕೊರತೆಯ ನಡುವೆಯೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯಲ್ಲಿ ಇನ್ನು ಮೂರ್ನಾಲ್ಕು ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದು. ಆದರೂ ಮುಂಜಾಗ್ರತಾ ಕ್ರಮವಾಗಿ ಪ್ರತಿವಾರ ಸಂಬಂಧಿಸಿದ ಇಲಾಖೆ ಹಾಗೂ ನೀರು ಪೂರೈಕೆ ಕಂಪನಿಯೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 15 ರಿಂದ 16 ಕಡೆ ಆರ್ಓ ಪ್ಲಾಂಟ್ಗಳು ದುರಸ್ತಿಯಲ್ಲಿವೆ ಎಂಬ ಮಾಹಿತಿ ಇದ್ದು, ಅವುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.
ಮಳೆಯ ಕೊರತೆಯಿಂದಾಗಿ ಮುಂಗಾರು ಬೆಳೆ ಹಾನಿಗೀಡಾಗಿದ್ದು, ಹಿಂಗಾರು ಹಂಗಾಮಿಗೆ ಜಿಲ್ಲೆಯ ಹಲವು ಕಡೆಗಳಲ್ಲಿ ರೈತರು ಬಿತ್ತನೆ ಮಾಡಿದ್ದು ಒಂದು ವೇಳೆ ಮುಂದಿನ ತಿಂಗಳು ಮಳೆ ಬಾಗದಿದ್ದರೆ ಬಿತ್ತಿದ ಬೆಳೆ ಸಹ ಹಾನಿ ಆಗಲಿದೆ ಎಂದರು. ಇನ್ನು ಬೆಳೆ ವಿಮೆ ಪರಿಹಾರ ನಿಟ್ಟಿನಲ್ಲಿ ಬರ ಅಥವಾ ಅತಿವೃಷ್ಟಿ ಸಂದರ್ಭದಲ್ಲಿ ತಕ್ಷಣಕ್ಕೆ ಶೇಕಡ 25 ರಷ್ಟು ಮಧ್ಯಂತರ ಪರಿಹಾರವನ್ನು ನೀಡಬೇಕು ಎಂಬ ನಿಯಮ ಇರುವುದು ನಿಜ. ವಿಮಾ ಕಂಪನಿ ಈ ಬಗ್ಗೆ ಈ ಬಗ್ಗೆ ಒಪ್ಪಿರಲಿಲ್ಲ.
ಆದರೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ವಿಮಾ ಕಂಪನಿಯವರೊಂದಿಗೆ ಸಭೆ ನಡೆಸಿ ಒತ್ತಾಯ ಮಾಡಿದ್ದರಿಂದ ವಿಮಾ ಕಂಪನಿಯವರು ಶೇಕಡಾ 25ರಷ್ಟು ಮಧ್ಯಂತರ ಪರಿಹಾರ ನೀಡಲು ಒಪ್ಪಿದ್ದು, ಇನ್ನೊಂದು ವಾರದಲ್ಲಿ ಮಧ್ಯಂತರ ಪರಿಹಾರ ಬಿಡುಗಡೆಯಾಗುವ ವಿಶ್ವಾಸವಿದೆ. ಹಾಗೆಯೇ ಬರಗಾಲ ಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡ ವೀಕ್ಷಿಸಿದ್ದು, ನರೇಗಾ ಅಡಿಯಲ್ಲಿ 150 ದಿನಗಳ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.












Click it and Unblock the Notifications