ಧಾರವಾಡ; 24 ಗಂಟೆ ಕುಡಿಯುವ ನೀರು, 1,100 ಕೋಟಿ ವೆಚ್ಚ
ಧಾರವಾಡ, ನವೆಂಬರ್ 23 : " ಧಾರವಾಡ ಜಿಲ್ಲೆಗೆ ಮಲಪ್ರಭಾ ನದಿಯಿಂದ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮಾಡಲಾಗುವುದು" ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ, ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕುಸುಗಲ್ ಗ್ರಾಮದಲ್ಲಿ ಮಾತನಾಡಿದ ಸಚಿವರು, "ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಹಾಗೂ ರಾಜ್ಯ ಸರ್ಕಾರದ ಜಲಧಾರೆ ಯೋಜನೆಯಡಿ 1,100 ಕೋಟಿ ವೆಚ್ಚದಲ್ಲಿ ಕುಡಿಯವ ನೀರು ಪೂರೈಸಲಾಗುತ್ತದೆ" ಎಂದರು.
"ಧಾರವಾಡ ಜಿಲ್ಲೆಯಾದ್ಯಂತ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ಮಲಪ್ರಭಾ ನದಿಯಿಂದ ಸರಬರಾಜು ಮಾಡಲಾಗುವುದು. 24*7 ನೀರು ಲಭ್ಯವಾಗುವಂತೆ ಮಾಡಲಾಗುವುದು" ಎಂದು ಸಚಿವರು ತಿಳಿಸಿದರು.

"ಸ್ವಚ್ಛ ಭಾರತ್, ಸ್ವಚ್ಛ ಗ್ರಾಮ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗೆ ಸಾಕಷ್ಟು ಅನುದಾನ ಒದಗಿಸಲಾಗುತ್ತಿದೆ. ಪ್ರತಿ ಮನೆಯಲ್ಲೂ ಕಸ ವಿಂಗಡಣೆ ಮಾಡಬೇಕು. ಹಸಿ ಹಾಗೂ ಕಸ ಸಂಗ್ರಹಿಸಲು ಗ್ರಾಮ ಪಂಚಾಯತಿಯಿಂದಲೇ ಹಸಿರು ಮತ್ತು ನೀಲಿ ಬುಟ್ಟಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ" ಎಂದು ಸಚಿವರು ಹೇಳಿದರು.
"ಕುಸುಗಲ್ ಗ್ರಾಮದಲ್ಲಿ 20 ಲಕ್ಷ ಅನುದಾನದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಘಟಕ ನಿರ್ಮಾಣಕ್ಕೆ 5 ಲಕ್ಷ ಹಣವನ್ನು ನರೇಗಾದಡಿ ನೀಡಲಾಗಿದೆ. ಧಾರವಾಡ ಜಿಲ್ಲೆಗೆ 60 ತ್ಯಾಜ್ಯ ವಿಲೇವಾರಿ ಘಟಕ ಮಂಜೂರು ಆಗಿವೆ. 20 ಘಟಕ ಕಾರ್ಯ ನಿರ್ವಹಿಸುತ್ತಿವೆ" ಎಂದರು.
ಇದೇ ಸಂದರ್ಭದಲ್ಲಿ ಕುಸುಗಲ್ ಗ್ರಾಮಸ್ಥರು ನೀಡದ ಮನವಿ ಸ್ಪಂದಿಸಿದ ಸಚಿವರು ಹುಬ್ಬಳ್ಳಿ ಬೈಪಾಸ್ ರಸ್ತೆಯಿಂದ ಕುಸುಗಲ್ ಗ್ರಾಮಕ್ಕೆ ಸರ್ವೀಸ್ ರಸ್ತೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ಕೊಡುವುದಾಗಿ ಭರವಸೆ ಕೊಟ್ಟರು.












Click it and Unblock the Notifications