ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು: ರೈತ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳೇನು?
ದಾವಣಗೆರೆ, ಏಪ್ರಿಲ್ 17: ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಣಕು ಉಂಟುಮಾಡುವ೦ತೆ ಕ್ರಿಮಿನಲ್ಗಳು, ಭೂಮಾಫಿಯಾ, ಅಬಕಾರಿ, ಸಕ್ಕರೆ, ಶಿಕ್ಷಣ ಮಾಫಿಯಾದವರ ಅಧಿಕಾರ ಹಿಡಿಯಲು ಬಂಡವಾಳ ಹೂಡುತ್ತಿದ್ದಾರೆ. ಅಧಿಕಾರಕ್ಕೆ ಬಂದು ಕೊಳ್ಳೆ ಹೊಡೆಯಲು ಮುಂದಾಗುತ್ತಿದ್ದಾರೆ. ರೈತರ ಮತ ಭಿಕ್ಷೆ ಬೇಡುವ ರಾಜಕೀಯ ಪಕ್ಷಗಳಿಗೆ, ರೈತರ ಪ್ರಣಾಳಿಕೆ ಬಗ್ಗೆ ಬದ್ಧತೆ ಯಾಕೆ ಕಾಣುತ್ತಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಮುಖಂಡರು, ಕರ್ನಾಟಕದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತೇವೆ ಎಂಬ ಸುಳ್ಳು ಪೂಳ್ಳು ಭರವಸೆಗಳನ್ನು ಕೊಡುವುದಿಲ್ಲ ಎನ್ನುವ ರಾಜಕೀಯ ಪಕ್ಷಗಳು ಬಹಿರಂಗವಾಗಿ ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.

ರೈತ ಪ್ರಣಾಳಿಕೆ ಬಗ್ಗೆ ರಾಜ್ಯದ ರೈತರು ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಪಕ್ಷಗಳಿಗೆ ಪ್ರಶ್ನೆ ಮಾಡಬೇಕು. ಬಹಿರಂಗವಾಗಿ ಅವರಿಂದ ಹೇಳಿಕೆ ಪಡೆಯಬೇಕು, ಆಗ ರೈತರ ಶಕ್ತಿ, ರಾಜಕೀಯ ಪಕ್ಷಗಳಿಗೆ ತಿಳಿಯುತ್ತದೆ. ರೈತರು ಮನಸ್ಸು ಮಾಡಿದರೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬಹುದು ಅಥವಾ ಅಧಿಕಾರಕ್ಕೆ ಏರಿಸಬಹುದು. ಒಂದು ಮತದಿಂದ ಎಂಎಲ್ಎ ಸೋತಿರುವುದು, ಒಂದು ಮತದಿಂದ ಕೇಂದ್ರ ಸರ್ಕಾರ ಬಿದ್ದು ಹೋದ ಸ್ಥಿತಿ ಕಂಡಿದ್ದೇವೆ. ಅದಕ್ಕಾಗಿ ಪ್ರತಿಯೊಬ್ಬ ಮತದಾರರು ಎಚ್ಚರಿಕೆಯಿಂದ ಪಾಠ ಹೇಳಬೇಕು. ಇದನ್ನು ರಾಜಕೀಯ ಪಕ್ಷಗಳು ಮರೆಯಬಾರದು ಎಂದರು.
ರಾಜ್ಯದ ರೈತರು ಮನಸ್ಸು ಮಾಡಿದರೆ ಸರ್ಕಾರಗಳನ್ನು ಬುಡಮೇಲು ಮಾಡುತ್ತಾರೆ. ರೈತರು ಯಾರ ಗುಲಾಮರೂ ಅಲ್ಲ, ದೇಶದ ಅನ್ನದಾತರು. ಇನ್ನೂ ಕೆಲವು ದಿನಗಳು ಕಾದು ನೋಡುತ್ತೇವೆ. ರೈತ ಪ್ರಣಾಳಿಕೆ ಬಗ್ಗೆ ಯಾವುದೇ ಪಕ್ಷದಿಂದ ಬದ್ಧತೆ ಸ್ಪಷ್ಟ ನಿರ್ಧಾರ ಹೊರಬೀಳದಿದ್ದರೆ, ಏಪ್ರಿಲ್ 20 ರಂದು ಧಾರವಾಡದಲ್ಲಿ ಸಭೆ ನಡೆಸಿ ತೀರ್ಮಾನ ಪ್ರಕಟಿಸಿ ರಾಜ್ಯದ ರೈತರು ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡುತ್ತಾರೆ ಎಂದು ಎಚ್ಚರಿಸಿದರು.
ರೈತರ ಚುನಾವಣಾ ಪ್ರಣಾಳಿಕೆಗಳು
ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಶಾಸನ ಜಾರಿಯಾಗಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಸರ್ಕಾರಿ ನೌಕರರಿಗೆ, ಶಾಸಕರು, ಮಂತ್ರಿಗಳಿಗೆ ಎಲ್ಲ ವರ್ಗದವರಿಗೂ ಪ್ರತಿ ತಿಂಗಳು ಸಂಬಳ ರೂಪದಲ್ಲಿ ಕನಿಷ್ಠ ಆದಾಯ ಬರುತ್ತದೆ, ಅದೇ ರೀತಿ ದಿನದಲ್ಲಿ ಹಗಲು ರಾತ್ರಿ ದುಡಿಯುವ ರೈತರಿಗೆ ಕನಿಷ್ಠ ಆದಾಯ ಖಾತರಿ ಭದ್ರತೆ ಯೋಜನೆ ಜಾರಿಗೆ ಬರಬೇಕು.

ಪ್ರಾಣಿಗಳ ಹಾವಳಿ, ಹಾಗೂ ದಾಳಿಯಿಂದ ರೈತನ ಬದುಕು ಹಾಳಾಗುತ್ತಿದೆ. ಆದ ಕಾರಣ ಹಗಲು ವೇಳೆಯಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡುವ ಭರವಸೆ ಬೇಕು. ದೇಶದ ಉದ್ಯಮಿಗಳಿಗೆ 10 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ಅತಿವೃಷ್ಟಿ ಹಾನಿ ಕೊರೊನಾ ಸಂಕಷ್ಟದಿಂದ ತತ್ತರಿಸಿರುವ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು , ಕೃಷಿ ಸಾಲ ನೀತಿ ಬದಲಾಗಬೇಕು ಎಂದು ಆಗ್ರಹಿಸಿದರು.
ರೈತರಿಗೆ ಬಡ್ಡಿ ರಹಿತವಾಗಿ ಕೃಷಿ ಸಾಲ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀಡುವಂತಾ ಯೋಜನೆ ಜಾರಿಗೆ ಬರಬೇಕು. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಕೈ ಬಿಡುವುದಾಗಿ ಭರವಸೆ ನೀಡಬೇಕು. ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿ ಮಾಡಬೇಕು, ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಅನ್ವಯ ಮಾಡಬೇಕು. ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಭೂಸ್ವಾದಿನ ಪ್ರಕ್ರಿಯೆ ನಿಲ್ಲಿಸಬೇಕು. ಅಗತ್ಯ ಸಂದರ್ಭಗಳಲ್ಲಿ ರೈತರ ಅನುಮತಿ ಪಡೆಯಬೇಕು ಅಂತಹ ರೈತರಿಗೆ ಜೀವನ ಭದ್ರತೆ ರೂಪಿಸಬೇಕು. ಕಬ್ಬು ಕಟಾವು ಸಾಗಾಣಿಕೆ ದುಬಾರಿ ವೆಚ್ಚ, ಹಾಗೂ ರೈತರ ಸುಲಿಗೆ ತಪ್ಪಿಸಲು ಕಬ್ಬಿನ ಎಮ್ಆರ್ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು ಎಂದರು.
ರೈತರು ಆಲೆಮನೆಗಳಲ್ಲಿ ಕಬ್ಬಿನಿಂದ ಎಥನಾಲ್ ಉತ್ಪಾದನೆಗೆ , ಟ್ಯಾಕ್ಟರ್ ಮತ್ತಿತರ ಯಂತ್ರಗಳಿಗೆ ಬಳಸಿಕೊಳ್ಳಲು ರೈತರಿಗೆ ಅವಕಾಶ ನೀಡಬೇಕು. ಬಾಳೆ ಬೆಳೆಯನ್ನು ಸೇರಿಸಿರುವ ರೀತಿಯಲ್ಲಿ ಕಬ್ಬು ಬೆಳೆಯ ಉತ್ಪಾದನೆಗೆ ಎನ್ಆರ್ಇಜಿ ಯೋಜನೆಯನ್ನು ಲಿ೦ಕ್ ಮಾಡಬೇಕು.
ಗ್ರಾಮೀಣ ಯುವಕರನ್ನು ವಲಸೆ ತಪ್ಪಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು, ಗ್ರಾಮೀಣ ಭಾಗದಲ್ಲಿ ಕೃಷಿ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಭರವಸೆ ಬೇಕು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ರೈತರ ಗಂಡು ಮಕ್ಕಳ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಬೇಕು. ಕೃಷಿ ಉತ್ಪನ್ನ, ಹಾಗೂ ಕೃಷಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್ಟಿ ರದ್ದುಗೊಳಿಸಬೇಕು ಎಂಬುದೂ ಸೇರಿದಂತೆ ಇತರೆ ವಿಷಯಗಳು ರೈತ ಪ್ರಣಾಳಿಕೆಯಲ್ಲಿವೆ ಎಂದು ಮಾಹಿತಿ ನೀಡಿದರು.
ರೈತ ಪ್ರಣಾಳಿಕೆ ಬೆಂಬಲಿಸಿರುವ ಸಂಘಟನೆಗಳು
ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ನವ ನಿರ್ಮಾಣ ಸೇನೆ, ಕಬಿನಿ ರೈತ ಹಿತರಕ್ಷಣಾ ಸಮಿತಿ, ರಾಜ್ಯ ಕೃಷಿ ಪಂಪ್ ಸೆಟ್ ವಿದ್ಯುತ್ ಬಳಕೆದಾರರ ಸಂಘ, ನೀರು ಬಳಕೆದಾರರ ಸಂಘಗಳ ಮಹಾಮಂಡಲ, ಕೃಷಿ ಕೂಲಿ ಕಾರ್ಮಿಕರ ಸಂಘ ಸೇರಿದಂತೆ ಇತರೆ ಸಂಘಗಳು ಪ್ರಣಾಳಿಕೆಗೆ ಸಮ್ಮತಿ ನೀಡಿವೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಎನ್. ಹೆಚ್. ದೇವಕುಮಾರ್, ರೈತ ಸಂಘದ ಅಧ್ಯಕ್ಷ ಅಂಜನಪ್ಪ, ಮುರುಗೇಂದ್ರಯ್ಯ ಹಾಜರಿದ್ದರು.












Click it and Unblock the Notifications