ಜಕಾತಿ ಜಟಾಪಟಿ ಜೋರು: ವಿಪಕ್ಷ- ಆಡಳಿತ ಪಕ್ಷಗಳ ನಡುವೆ ವಾಕ್ಸಮರ
ದಾವಣಗೆರೆ, ನವೆಂಬರ್ 10: ಜಕಾತಿ ಸಂಗ್ರಹಕ್ಕೆ ಟೆಂಡರ್ಗೆ ಅನುಮತಿ ನೀಡಲು ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ 3 ಲಕ್ಷ ರೂ ಲಂಚ ರೂಪಾಯಿ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆ ಬಿದ್ದ ಪ್ರಕರಣ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷವು ಈ ಹಣದಲ್ಲಿ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ್ ಹಾಗೂ ಪಾಲಿಕೆ ಆಯುಕ್ತರಿಗೂ ಪಾಲು ಹೋಗಿದೆ. ಸಚಿವ ಬೈರತಿ ಬಸವರಾಜ್ಗೂ 15 ಲಕ್ಷ ರೂಪಾಯಿ ಹಣ ಸಂದಾಯ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಬೇಕು. ಎಷ್ಟೇ ದೊಡ್ಡವರಾದರೂ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸದಸ್ಯರು ಇದು ಸುಳ್ಳು ಆರೋಪ. ಸಚಿವರ ಹೆಸರಿಗೆ ಕಳಂಕ ತರಲು ಮಾಡಿರುವ ಷಡ್ಯಂತ್ರ ಎಂದು ತಿರುಗೇಟು ನೀಡಿದೆ.
ಲಂಚ ಆರೋಪ: ನನ್ನ ಹೆಸರಿಗೆ ಕಳಂಕ ತರಲು ಷಡ್ಯಂತ್ರ ಎಂದ ಬೈರತಿ ಬಸವರಾಜ್
ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. 3 ಲಕ್ಷ ರೂಪಾಯಿ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವೆಂಕಟೇಶ್ ಮಾತ್ರ ಬಂಧಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಆಯುಕ್ತರಿಗೂ ಪಾಲು ಹೋಗಿದ್ದು, ಇವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಬಿಜೆಪಿ ಹಾಗೂ ಪಾಲಿಕೆ ಆಯುಕ್ತರ ಭ್ರಷ್ಟಾಚಾರ ವಿರೋಧಿಸಿ ಪಾಲಿಕೆ ಎದುರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಗ್ರಹಿಸಿದರು.
ಬೇಕಾದವರಿಗೆ ಲಂಚ ಪಡೆದು ಟೆಂಡರ್
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ರಾಜ್ಯದಲ್ಲಿರುವುದು 40% ಸರಕಾರ, ಪಾಲಿಕೆಯಲ್ಲೂ ಇದು ನಡೆಯುತ್ತಿದೆ. ಭ್ರಷ್ಟಾಚಾರದ ಪಿತಾಮಹ ಸಿದ್ದೇಶ್ವರ್. ತಮಗೆ ಬೇಕಾದ ಅಧಿಕಾರಿಗಳನ್ನು ಕರೆಯಿಸಿ ಟೆಂಡರ್ ನೀಡಲು ಹಣ ಪಡೆಯಲಾಗುತ್ತಿದೆ. ಇವರ ವಿರುದ್ಧವೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಭ್ರಷ್ಟಾಚಾರ ಎಂದರೆ ಬಿಜೆಪಿ ಎನ್ನುವಂತಾಗಿದೆ. ಶೇಕಡಾ 40 ಕಮೀಷನ್ ಪಡೆಯುವ ಸರ್ಕಾರ ಇದು. ಈಗ ಜಕಾತಿ ಸಂಗ್ರಹಕ್ಕೆ ಅನುಮತಿ ನೀಡಲು 7 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು ಜಗಜ್ಜಾಹೀರಾಗಿದೆ. ಗುತ್ತಿಗೆದಾರ ಕೃಷ್ಣಪ್ಪರೇ ಈ ಆರೋಪ ಮಾಡಿರುವುದಷ್ಟೇ ಅಲ್ಲ, ಆಡಿಯೋವನ್ನು ನೀಡಿದ್ದಾರೆ. ಇದಕ್ಕಿಂತ ಬಿಜೆಪಿ ಆಡಳಿತ ನಡೆಸುತ್ತಿರುವ ಪಾಲಿಕೆಯಲ್ಲಿನ ಭ್ರಷ್ಟಾಚಾರಕ್ಕೆ ಉದಾಹರಣೆ ಬೇಕೇ. ಪಾಲಿಕೆಯಲ್ಲಿ ನಡೆದಿರುವ ಹಗರಣಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಆಯುಕ್ತರು ಹಾಗೂ ಸಚಿವರ ಬಂಧನಕ್ಕೆ ಆಗ್ರಹ
ಮೊದಲಿನಿಂದಲೂ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ನಾವು ಆರೋಪ ಮಾಡುತ್ತಲೇ ಬಂದಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅವರಿಗೆ ಹದಿನೈದು ಲಕ್ಷ ರೂಪಾಯಿ ನೀಡಿದ್ದು ಯಾವ ಹಣ? ಜನರ ಹಣ. ಬಡವರ ಹೊಟ್ಟೆ ಮೇಲೆ ಹೊಡೆಯುವ, ಅಭಿವೃದ್ದಿ ಬಗ್ಗೆ ಚಿಂತಿಸದೇ ಹಣ ಲೂಟಿ ಹೊಡೆಯುವುದರಲ್ಲಿ ನಿರತವಾಗಿರುವ ಬಿಜೆಪಿ ಯಾವ ಮುಖವಿಟ್ಟುಕೊಂಡು ಆಡಳಿತ ಮಾಡುತ್ತಿದೆ. ಕೂಡಲೇ ಪಾಲಿಕೆ ಮೇಯರ್ ರಾಜೀನಾಮೆ ನೀಡಬೇಕು. ಆಯುಕ್ತರು ಹಾಗೂ ಸಚಿವರನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಬಂಧಿಸಿ ವಿಚಾರಣೆಗೊಳಪಡಿಸಬೇಕು. ಸರ್ಕಾರಿ ನೌಕರನೇ ಆರೋಪ ಮಾಡಿರುವುದರಿಂದ ಸಚಿವ ಸ್ಥಾನದಿಂದ ಬೈರತಿ ಬಸವರಾಜ್ ಅವರನ್ನು ಕಿತ್ತೊಗೆಯಬೇಕು. ಆಯುಕ್ತರನ್ನು ಸಸ್ಪೆಂಡ್ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅನಾವಶ್ಯಕವಾಗಿ ಬೈರತಿ ಹೆಸರು
ಜಕಾತಿ ಸಂಗ್ರಹ ಮಾಡಲು ಟೆಂಡರ್ ನೀಡಿಕೆಗೆ ಮೂರು ಲಕ್ಷ ರೂಪಾಯಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅವರ ಹೆಸರನ್ನು ವಿನಾಕಾರಣ ತಳುಕು ಹಾಕಲಾಗುತ್ತಿದೆ. ಇದು ಕಾಂಗ್ರೆಸ್ ಮಾಡಿರುವ ಪಿತೂರಿ ಎಂದು ಮೇಯರ್ ಜಯಮ್ಮ ಗೋಪಿನಾಯ್ಕ್ ಕಾಂಗ್ರೆಸ್ ಆರೋಪವನ್ನು ಅಲ್ಲಗಳೆದಿದ್ದಾರೆ.
ಬೈರತಿ ಬಸವರಾಜ್ರಿಗೆ ಟೆಂಡರ್ ಗುತ್ತಿಗೆ ಪಡೆಯುವ ಸಂಬಂಧ 15 ಲಕ್ಷ ಸಂದಾಯವಾಗಿದೆ ಎಂದು ಗುತ್ತಿಗೆದಾರ ಕೃಷ್ಣ ಬಳಿ ವೆಂಕಟೇಶ್ ಹೇಳಿರುವುದು ಸತ್ಯಕ್ಕೆ ದೂರವಾದದ್ದು. ಜಕಾತಿ ವಸೂಲಿ ಮಾಡುವ ಟೆಂಡರ್ ಪಡೆಯಲು ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ಗೆ ಹಣದ ಆಮೀಷ ನೀಡಿ ಕೆಡವಲಾಗಿದೆ. ಈ ವಿಚಾರದಲ್ಲಿ ಅನಾವಶ್ಯಕವಾಗಿ ಬೈರತಿ ಬಸವರಾಜ್ರ ಹೆಸರು ತರಲಾಗುತ್ತಿದೆ. ಈ ಗುತ್ತಿಗೆ ವ್ಯವಹಾರಕ್ಕೂ ಸಚಿವರಿಗೂ ಯಾವುದೇ ರೀತಿಯಿಂದಲೂ ಸಂಬಂಧ ಇಲ್ಲ ಎಂದು ಹೇಳಿದರು.
ಸಚಿವರ ವಿರುದ್ಧ ಕಾಂಗ್ರೆಸ್ ಪಿತೂರಿ
ಸಚಿವರು ಆರ್ಥಿಕವಾಗಿ ಸದೃಢವಾಗಿದ್ದಾರೆ. ಅವರೂ ಎಂದಿಗೂ ಇಂತಹ ಎಂಜಲು ಕಾಸಿಗೆ ಕೈ ಚಾಚುವವರಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಹಾಜರಾಗುವ ಶಿಸ್ತಿನ ಸಚಿವರು. ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ಪಿತೂರಿ ನಡೆಸುತ್ತಿದೆ. ಗುತ್ತಿಗೆದಾರ ಸಂತೋಷ್ ಮಾಡಿದ ತಂತ್ರದಿಂದ ಕೆ. ಎಸ್. ಈಶ್ವರಪ್ಪ ಸಚಿವ ಸ್ಥಾನ ಕಳೆದುಕೊಂಡರು. ನಂತರ ನಡೆಸಿದ ತನಿಖೆಯಲ್ಲಿ ಅವರದು ತಪ್ಪಿಲ್ಲ ಎಂದು ಕ್ಲೀನ್ ಚಿಟ್ ನೀಡಲಾಯಿತು. ಅದೇ ರೀತಿ ಈಗಲೂ ತಂತ್ರ ಕುತಂತ್ರಗಳು ನಡೆಯುತ್ತಿವೆ ಎಂಬುದಕ್ಕೆ ಜಕಾತಿ ವಸೂಲಿ ಆರೋಪ ತಾಜಾ ಉದಾಹರಣೆ ಎಂದು ತಿರುಗೇಟು ನೀಡಿದ್ದಾರೆ.
ಈಶ್ವರಪ್ಪ, ಜಾರಕಿಹೊಳಿ ನಂತರ ಬೈರತಿ ಟಾರ್ಗೆಟ್
ಹಿಂದುಳಿದ ವರ್ಗಗಳ ಸಚಿವರನ್ನೇ ಗುರಿಯಾಗಿಸಿಕೊಂಡು ಇಂತಹ ಕುತಂತ್ರ ಹೆಣೆಯಲಾಗುತ್ತಿದೆ. ರಮೇಶ ಜಾರಕಿಹೊಳಿ, ಕೆ. ಎಸ್. ಈಶ್ವರಪ್ಪನವರ ನಂತರ ಈಗ ಬೈರತಿ ಬಸವರಾಜ್ ರ ಸರದಿಯಾಗಿದೆ. ಎಲ್ಲಾ ರೀತಿಯ ತನಿಖೆಗೆ ನಾವು ಸಿದ್ಧರಿದ್ದೇವೆ. ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಮಾಡಿರುವ ಆರೋಪ ನಿರಾಧಾರ. ಕಾಂಗ್ರೆಸ್ ನವರು ಕುಮ್ಮಕ್ಕು ನೀಡಿ ಈ ರೀತಿ ಹೇಳಿಕೆ ನೀಡಿಸಿದ್ದಾರೆ. ಬಿಜೆಪಿ ಯಾವಾಗಲೂ ಭ್ರಷ್ಟಾಚಾರದ ವಿರುದ್ಧ ನಿಲುವು ಹೊಂದಿದೆ. ಲಂಚಗುಳಿತನ ಸಹಿಸುವುದಿಲ್ಲ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿ. ಆಯುಕ್ತರು ತಪ್ಪೆಸಗಿದ್ದರೆ ತನಿಖೆಯಾಗಲಿ. ವಿನಾಕಾರಣ ಆರೋಪ ಮಾಡುವುದನ್ನು ಬಿಡಬೇಕು ಎಂದು ಕಾಂಗ್ರೆಸ್ ನವರಿಗೆ ಸಲಹೆ ನೀಡಿದರು.
ಚಂದ್ರಶೇಖರ್ ಸಾವು; ಸಾವಿನಲ್ಲಿ ರಾಜಕಾರಣ ಮಾಡ್ತೇನೆ ಎನ್ನುವವರು ವಿಕೃತ ಮನಸಿನವರು, ರೇಣುಕಾಚಾರ್ಯ ಆಕ್ರೋಶ