ದಾವಣಗೆರೆಯಲ್ಲಿ ತ್ರಿಬಲ್ ರೈಡಿಂಗ್ ಸಿನಿಮಾ ತಂಡದಿಂದ ವಿಜಯಯಾತ್ರೆ ಸಂಭ್ರಮ
ದಾವಣಗೆರೆ, ಡಿಸೆಂಬರ್, 01: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾ ವಾರದ ಹಿಂದೆ ರಾಜ್ಯದೆಲ್ಲೆಡೆ ತೆರೆ ಕಂಡಿದ್ದು, ಇದೀಗ ಚಿತ್ರತಂಡಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೀಕ್ಷಕರು ಎರಡನೇ ವಾರವೂ ಇದೇ ರೀತಿಯಲ್ಲಿ ಚಿತ್ರ ಬೆಂಬಲಿಸಲಿ. ಇದು ಒಂದು ಕುಟುಂಬಕ್ಕೆ ಮನೋರಂಜನೆ ನೀಡುವ ಚಿತ್ರವಾಗಿದೆ. ಅಲ್ಲದೇ ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ನೀಡಲಿದೆ ಎಂದು ರಗಡ್ ಚಿತ್ರ ಖ್ಯಾತಿಯ ಹಾಗೂ ತ್ರಿಬಲ್ ರೈಡಿಂಗ್ ಚಿತ್ರದ ನಿರ್ದೇಶಕ ಮಹೇಶ್ ಗೌಡ ದಾವಣಗೆರೆಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 25 ರಂದು ಚಿತ್ರ ತೆರೆ ಕಂಡಿದ್ದು, ಎಲ್ಲಾ ಕಡೆಯಿಂದ ಉತ್ತಮ ಸ್ಪಂದನೆ ಬಂದಿದೆ. ಚಿತ್ರದ 4ರಲ್ಲಿ ಮೂರು ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮೂರೂ ಹಾಡುಗಳು ಸಹ ಹಿಟ್ ಆಗಿವೆ ಎಂದರು. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಚಿತ್ರವನ್ನು ನೋಡಿ ಗೆಲ್ಲಿಸಿರುವ ರಾಜ್ಯದ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಲು ಚಿತ್ರತಂಡವು ವಿಜಯಯಾತ್ರೆ ಆರಂಭಿಸಿದೆ ಎಂದರು. ಮಹೇಶ್ಗೌಡ ಕಥೆಯನ್ನು ಬರೆದಿದ್ದು, ಗೋಲ್ಡನ್ ಸ್ಟಾರ್ ಗಣೇಶ್, ಅದಿತಿ ಪ್ರಭುದೇವ, ಮೇಘಾಶೆಟ್ಟಿ, ರಚನಾ ಇಂದರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಜೊತೆಗೆ ಸಸ್ಪೆನ್ಸ್ನಂತಹ ಎಲ್ಲಾ ಮನರಂಜನಾತ್ಮಕ ಅಂಶಗಳನ್ನು ಚಿತ್ರ ಒಳಗೊಂಡಿದೆ.

ಚಿತ್ರಕ್ಕೆ ಮೆರಗು ನೀಡಿದ ಜೈಆನಂದ್ ಕೈಚಳಕ
ಸಾಯಿಕಾರ್ತಿಕ್ ಅವರಿಂದ ಸಂಗೀತ ಸಂಯೋಜನೆ ಆಗಿದ್ದು, ಜೈಆನಂದ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದೆ. ಕೃಪಾಳು ಎಂಟರ್ಟೈನ್ಮೆಂಟ್ ಬ್ಯಾನರ್ ಮೂಲಕ ರಾಮ್ಗೋಪಾಲ್ ವೈ.ಎಂ.ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ ಎಂದರು. ಚಿತ್ರದ ಆರಂಭದಿಂದ ಕೊನೆಯವರೆಗೂ ಬರುವ ಸಾಕಷ್ಟು ಟ್ವಿಸ್ಟ್ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ. ಅಲ್ಲದೆ ಜೊತೆಗೆ ನೋಡುಗರಿಗೆ ಮನರಂಜನೆ ನೀಡುತ್ತದೆ. ನಾಯಕನ ಜೀವನದಲ್ಲಿ ಈ ಮೂವರು ಯುವತಿಯರು ಹೇಗೆ? ಏಕೆ ಬರುತ್ತಾರೆ? ಎನ್ನುವುದೇ ಚಿತ್ರದ ತಿರುಳು ಎಂದು ತಿಳಿಸಿದರು.

ಡಾಕ್ಟರ್ ಪಾತ್ರ ನಿರ್ವಹಿಸಿದ ಮೇಘಾಶೆಟ್ಟಿ
ಕಿರುತರೆ ನಟಿ ಮೇಘಾಶೆಟ್ಟಿ ಒಬ್ಬ ಡಾಕ್ಟರ್ ಪಾತ್ರ ನಿರ್ವಹಿಸಿದ್ದು, ಇವರು ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಂಡಿರುವ ನಾಯಕಿಯಾಗಿದ್ದಾರೆ. ಮತ್ತೊಬ್ಬ ನಾಯಕಿ ಲವ್ಮಾಕ್ಟೇಲ್ ಖ್ಯಾತಿಯ ರಚನಾ ಇಂದರ್ ಹಠಮಾರಿ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ದಾವಣಗೆರೆ ಬೆಡಗಿ ಅದಿತಿ ಪ್ರಭುದೇವ ಮಲ್ಟಿಮಿಲಿಯನೇರ್ ಮಗಳಾಗಿ ಬಣ್ಣ ಹಚ್ಚಿದ್ದಾರೆ ಎಂದು ಮಾಹಿತಿ ನೀಡಿದರು.

ವೀಕ್ಷಕರಿಗೆ ನಾಯಕಿಯರ ಸಲಹೆ ಏನು?
ನಂತರ ಚಿತ್ರದ ನಾಯಕಿಯರಾದ ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಮಾತನಾಡಿ, ಒತ್ತಡದ ಜೀವನದಲ್ಲಿ ನಮ್ಮ ತ್ರಿಬಲ್ ರೈಡಿಂಗ್ ಸಿನಿಮಾ ಜನರಿಗೆ ಮನರಂಜನೆ ನೀಡಲಿದೆ. ಹಾಗೂ ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಆಗಿದೆ. ಎಲ್ಲರೂ ಚಿತ್ರ ವೀಕ್ಷಿಸಿ ಹರಸಿ ಎಂದು ಹೇಳಿದರು.

ಚಿತ್ರಕ್ಕೆ ಹೊಸ ರೂಪ ನೀಡಿದ ಹಾಡುಗಳು
ಛಾಯಾಗ್ರಾಹಕ ಜೈ ಆನಂದ್ ಅವರ 25ನೇ ಚಿತ್ರ ಇದಾಗಿದ್ದು, ಅದ್ಭುತ ಕ್ಯಾಮೆರಾ ವರ್ಕ್ ಜೊತೆಗೆ ಸಾಯಿ ಕಾರ್ತಿಕ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಚಿತ್ರಕ್ಕೆ ಹೊಸ ರೂಪವನ್ನೇ ನೀಡಿವೆ. ಹಿರಿಯನಟ ರಂಗಾಯಣ ರಘು, ಶೋಭರಾಜ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ರವಿಶಂಕರಗೌಡ, ಕುರಿ ಪ್ರತಾಪ್ ಮುಂತಾದವರು ಚಿತ್ರದ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications