ಬೆಳಕಿನ ಹಬ್ಬ ದೀಪಾವಳಿಗೆ ಮಣ್ಣಿನ ಹಣತೆ ಖರೀದಿಸಿದ ಜನತೆ: ಹೂ, ಹಣ್ಣು ಬೆಲೆ ಗಗನಕ್ಕೆ
ದಾವಣಗೆರೆ, ನವೆಂಬರ್ 14: ಕೊರೊನಾ ವೈರಸ್ ಆತಂಕ ಕ್ರಮೇಣ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಜನರು ಹೂ, ಹಣ್ಣು , ಹಣತೆ ಖರೀದಿಯಲ್ಲಿ ಮಗ್ನರಾಗಿದ್ದಾರೆ.
ದಾವಣಗೆರೆ ನಗರದ ಮಾರುಕಟ್ಟೆಯಲ್ಲಿ ಹೂವು-ಹಣ್ಣು ಜೊತೆಗೆ ಆಕಾಶಬುಟ್ಟಿ, ಹಣತೆಗಳಿಗೂ ಹೆಚ್ಚಿನ ಬೇಡಿಕೆ ಕಂಡುಬಂದಿತು. ಹಬ್ಬದ ಸಿದ್ಧತೆಗಳ ಭರಾಟೆಯಲ್ಲಿ ಜನರಲ್ಲಿ ಮಾಸ್ಕ್ ಮಾಯವಾಗಿತ್ತು. ಹಬ್ಬದ ಕಾರಣದಿಂದ ಹೂವಿನ ಬೆಲೆ ದುಬಾರಿಯಾಗಿತ್ತು. ಸೇವಂತಿಗೆ, ಚೆಂಡು ಹೂವು, ಕನಕಾಂಬರ, ಮಲ್ಲಿಗೆ ಹೂವಿಗೆ ಬೇಡಿಕೆ ಹೆಚ್ಚಿದ್ದರಿಂದಾಗಿ ಗ್ರಾಹಕನ ಜೇಬಿಗೆ ಹೊರೆ ಆಗಿದೆ.
ಮೈಸೂರು: ಡಿಸಿಪಿ ಕಾಲಿಗೆ ಬಿದ್ದ ಪಟಾಕಿ ಮಾರಾಟಗಾರ
ಸಾಮಾನ್ಯ ದಿನಗಳಲ್ಲಿ ಮಾರಾಟವಾಗುತ್ತಿದ್ದ ಹೂವಿನ ಬೆಲೆಗೆ ಹೋಲಿಸಿದರೆ ಶನಿವಾರ ದುಪ್ಪಟ್ಟಾಗಿತ್ತು. ಮಾರುಕಟ್ಟೆಯಲ್ಲಿ ಹಣ್ಣಿನ ದರ ಸ್ಥಿರತೆ ಇದ್ದುದು ಕಂಡುಬಂತು. ಒಂದು ಕೆ.ಜಿ ಏಲಕ್ಕಿ ಬಾಳೆ 70, ಸೇಬು 120, ಕಿತ್ತಳೆ 80, ಮೂಸಂಬಿ 100, ಸೀತಾಫಲ 80, ಸೀಬೆಕಾಯಿ 60 ರೂ. ಇತ್ತು. ಮುಂದೆ ಓದಿ..
ಮನೆಯ ಮುಂದೆ ಕಟ್ಟಿ ಬೆಳಕಿನ ಮೆರುಗು
ಹಬ್ಬದ ಹಿನ್ನೆಲೆ ಜನರು ಮನೆ ಹಾಗೂ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡುವುದರಿಂದ ಹೂವು, ಹಣ್ಣುಗಳನ್ನು ಖರೀದಿಸಿದರು. ಬೆಳಕಿನ ಹಬ್ಬಕ್ಕೆ ಮನೆಗಳನ್ನು ಸಿಂಗರಿಸುವುದು ಇತ್ತೀಚೆಗೆ ಟ್ರೆಂಡ್ ಆಗಿದ್ದು, ಆದ್ದರಿಂದ ಮಣ್ಣಿನ ಹಣತೆಗಳ ಜತೆಗೆ, ಬಣ್ಣ ಬಣ್ಣದ ಆಕರ್ಷಕ ಆಕಾಶ ಬುಟ್ಟಿಗಳನ್ನು ಮನೆಯ ಮುಂದೆ ಕಟ್ಟಿ ಬೆಳಕಿನ ಮೆರುಗು ನೀಡಲು ಜನ ಬಯಸುತ್ತಾರೆ.
ಕುಂಬಾರನ ಕುಶಲತೆಯಲ್ಲಿ ಮೂಡಿದ ಹಣತೆ
ಆದ್ದರಿಂದಲೇ ದಾವಣಗೆರೆ ಮಾರುಕಟ್ಟೆಯಲ್ಲಿ ಅತ್ಯಾಕರ್ಷಕ, ವೈವಿಧ್ಯಮಯ ಆಕಾಶ ಬುಟ್ಟಿಗಳನ್ನು ಜನರು ಮುಗಿಬಿದ್ದು ಖರೀದಿಸಿದರು. ಬಣ್ಣ ಹಚ್ಚಿದ, ಹಸೆ ಬಿಡಿಸಿದ ದೀಪಗಳೂ ಮಾರುಕಟ್ಟೆಯಲ್ಲಿ ಇದ್ದವು. ಇದನ್ನೂ ಜನ ಖರೀದಿಸಿದರು. ಈ ಬಾರಿ ಮಾರುಕಟ್ಟೆಯಲ್ಲಿ ಕುಂಬಾರನ ಕುಶಲತೆಯಲ್ಲಿ ಮೂಡಿದ ಆಕರ್ಷಕ ವಿನ್ಯಾಸದ ಹಣತೆಗಳಿಗೂ ನಿರಾಸೆಯಾಗಲಿಲ್ಲ. ಬೆಲೆಗೆ ತಕ್ಕಂತೆ ಹಣತೆಗಳ ಗುಣಮಟ್ಟ ಮತ್ತು ವಿನ್ಯಾಸದಲ್ಲಿ ವೈವಿಧ್ಯವಿತ್ತು.
ಬೃಂದಾವನ ಮಾದರಿಯ ಹಣತೆ
ಸ್ವಸ್ತಿಕ್, ಓಂ, ತುಳಸಿಕಟ್ಟೆ, ಬೃಂದಾವನ ಮಾದರಿಯ ಹಣತೆಗಳು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿವೆ. ಹಬ್ಬದ ಹಿನ್ನೆಲೆಯಲ್ಲಿ ಹಣತೆ ಉದ್ಯಮವನ್ನೇ ನಂಬಿರುವ ವರ್ತಕರಲ್ಲಿ ಹೊಸ ಹೊಳಪು ಕಾಣತೊಡಗಿದೆ. ಮಣ್ಣಿನ ದೀಪದ ಜತೆಗೆ, ಕ್ಯಾಂಡಲ್ ಬಳಸಿ ಮಾಡಿರುವ ಹಣತೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ನೂತನ ದೀಪ ಖರೀದಿಗೆ ಜನರು ಆಸಕ್ತಿ ತೋರಿದ್ದಾರೆ.
ಬಲಿಪಾಡ್ಯಮಿ ಆಚರಣೆ
ಶನಿವಾರ ನರಕ ಚತುದರ್ಶಿ, ಭಾನುವಾರ ಅಮಾವಾಸ್ಯೆ ಹಾಗೂ ಸೋಮವಾರ ಬಲಿಪಾಡ್ಯಮಿ ಆಚರಣೆ ಇದೆ. ಹೀಗಾಗಿ ದೀಪಾವಳಿ ಲಕ್ಷೀ ಪೂಜೆಗಾಗಿ ಮಹಿಳೆಯರು ಶುಕ್ರವಾರದಿಂದಲೇ ಖರೀದಿಯಲ್ಲಿ ತೊಡಗಿದ್ದರು.
Recommended Video