ಬಿಜೆಪಿಯ ಗೆಲುವಿನ ನಾಗಲೋಟ ತಡೆಯಲು ಸಾಧ್ಯವಿಲ್ಲ: ಬಿ.ವೈ ವಿಜಯೇಂದ್ರ
ದಾವಣಗೆರೆ, ಮಾರ್ಚ್ 31: ಬಿಜೆಪಿಯ ಗೆಲುವಿನ ನಾಗಲೋಟ ತಡೆಯಲು ಯಾವುದೇ ಪಕ್ಷದಿಂದಲೂ ಸಾಧ್ಯವಿಲ್ಲ ಎಂದು ಸಿಎಂ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಯಾರೂ ಕೂಡ ಊಹಿಸಿರಲಿಲ್ಲ, 17 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 15 ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ನಮಗೆ ವಿಶ್ವಾಸ ವಿದೆ ಒಂದು ಲೋಕಸಭೆ, ಎರಡು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು.

ಸಿಡಿ ಪ್ರಕರಣ ಯಾವುದೇ ಪರಿಣಾಮ ಬೀರುವುದಿಲ್ಲ
ಬೆಳಗಾವಿ ಲೋಕಸಭೆ ಉಪ ಚುನಾವಣೆ ಮೇಲೆ ಸಿಡಿ ಪ್ರಕರಣ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ವಿಜಯೇಂದ್ರ, ಬೆಳಗಾವಿಯಲ್ಲಿ ದೊಡ್ಡ ಅಂತರದ ಗೆಲ್ಲುತ್ತೇವೆ. ಅಭಿವೃದ್ಧಿ ಆಧಾರದ ಮೇಲೆ, ನಾಯಕತ್ವದ ಆಧಾರದ ಮೇಲೆ ಬೆಳಗಾವಿ ಚುನಾವಣೆ ಗೆಲ್ಲುತ್ತೇವೆ. ಯಾವುದೇ ಪ್ರಕರಣಗಳು ಚುನಾವಣೆ ಮೇಲೆ ಪ್ರಭಾವ ಬೀರಲ್ಲ ಎಂದು ಹೇಳಿದರು.

ಸದ್ಯದಲ್ಲೇ ಸತ್ಯಾಂಶ ಹೊರ ಬರಲಿದೆ
ರಮೇಶ್ ಜಾರಕಿಹೊಳಿ ಅವರ ಸಿಡಿ ಲೇಡಿ ಪ್ರಕರಣದ ಬಗ್ಗೆ ವಿಜಯೇಂದ್ರ ಪ್ರತಿಕ್ರಿಯಿಸಿ, 28 ದಿನಗಳಿಂದ ನಾನಾ ರೀತಿಯ ಚರ್ಚೆಗಳು ನಡೆಯುತ್ತಲೇ ಇವೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ ಎನ್ನುವುದು ಬಹಳಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ. ಎಸ್ಐಟಿ ತನಿಖೆ ನಡೆಯುತ್ತಿದೆ. ಸದ್ಯದಲ್ಲೆ ಸತ್ಯಾಂಶ ಹೊರ ಬರಲಿದೆ. ರಾಜ್ಯದ ಜನತೆ ದಡ್ಡರಲ್ಲ, ಯಾವ ತಿರುವು ಪಡೆಯುತ್ತದೆ ಕಾದು ನೋಡೋಣ ಎಂದರು.

ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ
ಮಸ್ಕಿ ಉಪ ಚುನಾವಣೆಯಲ್ಲಿ ಸಚಿವ ಬಿ.ಶ್ರೀರಾಮುಲು, ಎನ್.ರವಿಕುಮಾರ್ ಮತ್ತು ನಾನು ಉಸ್ತುವಾರಿ ಹೊತ್ತಿದ್ದೇವೆ. ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಆ ಕ್ಷೇತ್ರದ ಜನ ಕೈಬಿಡುವುದಿಲ್ಲ. ಪ್ರತಾಪಗೌಡ ಅವರು ಮಸ್ಕಿಯಲ್ಲಿ ಜಯಭೇರಿ ಬಾರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Recommended Video

ನಾನು ಯಾವುದಕ್ಕೂ ತಲೆ ಕೆಡಸಿಕೊಳ್ಳೋದಿಲ್ಲ
ತಮ್ಮ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ವಿಜಯೇಂದ್ರ ಮಾತನಾಡಿ, ಅದರ ಬಗ್ಗೆ ಮಾಹಿತಿ ಇಲ್ಲ, ನಾನು ಯಾವುದಕ್ಕೂ ತಲೆ ಕೆಡಸಿಕೊಳ್ಳೋದಿಲ್ಲ. ಪಕ್ಷದ ರಾಜ್ಯಾಧ್ಯಕ್ಷರು ನನಗೆ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ, ನಾನು ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಅಷ್ಟೆ ಎಂದರು. ಪಕ್ಷದ ಸಂಘಟನೆ ದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತೇನೆ. ಇದ್ಯಾವುದು ನನಗೆ ಅಡ್ಡಿ ಬರೋದಿಲ್ಲ. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ವಾಗೀಶ್ ಸ್ವಾಮಿ, ದೇವರಮನೆ ಶಿವಕುಮಾರ್, ಪ್ರಸನ್ನ ಕುಮಾರ್ ಇದ್ದರು.












Click it and Unblock the Notifications