ದಾವಣಗೆರೆಗೆ ಬರುವ ಕೇಸರಿ ನಾಯಕರು ಚಪ್ಪರಿಸಲಿದ್ದಾರೆ ಬೆಣ್ಣೆದೋಸೆ, ತರಹೇವಾರಿ ಖಾದ್ಯಗಳು!
ದಾವಣಗೆರೆ, ಸೆಪ್ಟೆಂಬರ್ 17: ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಗಮನ ಸೆಳೆಯುವ ಬಿಜೆಪಿ ಚಿಂಥನ- ಮಂಥನ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಲ್ಲಿಗೆ ಬರುವ ಸಿಎಂ, ರಾಷ್ಟ್ರ ನಾಯಕರು, ಕೇಂದ್ರ ಸಚಿವರು, ಶಾಸಕರು, ಸಂಸದರು, ಎಂಎಲ್ಸಿಗಳು, ರಾಜ್ಯಸಭಾ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಬೆಣ್ಣೆದೋಸೆ, ಮಿರ್ಚಿ ಮಂಡಕ್ಕಿ, ಜೋಳ ಹಾಗೂ ಸಜ್ಜೆ ರೊಟ್ಟಿ ಸೇರಿದಂತೆ ಇಲ್ಲಿನ ಖಾದ್ಯಗಳ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.
ಬೆಣ್ಣೆದೋಸೆಗೆ ದಾವಣಗೆರೆ ಫೇಮಸ್ ಆಗಿದ್ದು, ಜೊತೆಗೆ ಮಿರ್ಚಿ ಮಂಡಕ್ಕಿಗೂ ಅಷ್ಟೇ ಜನಪ್ರಿಯತೆ ಪಡೆದಿರುವ ನಗರಕ್ಕೆ ಬರುತ್ತಿರುವ ಕೇಸರಿ ನಾಯಕರು, ಇಲ್ಲಿನ ಖಾದ್ಯಗಳ ಟೇಸ್ಟ್ ಸವಿಯಲಿದ್ದಾರೆ. ಇದಕ್ಕೆ ಅತ್ಯುತ್ತಮ ಬಾಣಸಿಗರು ಇದ್ದು, ಇಲ್ಲಿಗೆ ಬರುವವರಿಗೆ ವಿಶೇಷ ಆತಿಥ್ಯ ಸಿಗಲಿದೆ.
ಇದೇ ತಿಂಗಳ ಸೆಪ್ಟಂಬರ್ 18ರಂದು ನಡೆಯುವ ಬಿಜೆಪಿ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ, ಕೋರ್ ಕಮಿಟಿ ಮೀಟಿಂಗ್ ಹಾಗೂ 19ರ ಬಿಜೆಪಿ ಕಾರ್ಯಕಾರಿಣಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಲ್ಲಾ ಕಡೆಗಳಲ್ಲಿಯೂ ಪಕ್ಷದ ಬಾವುಟ, ಬ್ಯಾನರ್, ಬಂಟಿಂಗ್ಸ್ ಅಳವಡಿಸಲಾಗಿದೆ. ನಾಯಕರ ಭವ್ಯ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ್ ಹೇಳಿದ್ದಾರೆ.

ಕಾರ್ಯಕಾರಿಣಿ ಸಭೆಗೆ ಧ್ವಜಾರೋಹಣೆ ಮೂಲಕ ಚಾಲನೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಸಂಜೆ 6.30ಕ್ಕೆ ದಾವಣಗೆರೆ ನಗರದ ಅಪೂರ್ವ ರೆಸಾರ್ಟ್ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಜರುಗಲಿದೆ. ಸೆ.19ರ ಬೆಳೆಗ್ಗೆ 10ಕ್ಕೆ ತ್ರಿಶೂಲ್ ಕಲಾಭವನದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಧ್ವಜಾರೋಹಣೆ ಮೂಲಕ ಚಾಲನೆ ನೀಡಲಾಗುತ್ತಿದೆ. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮಾಜಿ ಸಿಎಂ ಯಡಿಯೂರಪ್ಪ, ಸದಾನಂದಗೌಡ ಸೇರಿ ಕೇಂದ್ರ ಹಾಗೂ ರಾಜ್ಯ ಸಚಿವರು ಭಾಗವಹಿಸಲಿದ್ದಾರೆ. ಸಭೆಗೆ 680 ಅಪೇಕ್ಷಿತರಿದ್ದರು, ಆದರೆ 574 ಗಣ್ಯರು ಮಾತ್ರ ಭಾಗವಹಿಸಲಿದ್ದಾರೆ ಎಂದರು.
ಅಪೇಕ್ಷಿತರಿಗೆ ಮಾತ್ರ ಸಭೆಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ನಿಯಮಾವಳಿಗಳ ಮೂಲಕ ಸಭೆ ನಡೆಯಲಿದೆ. ಸಭೆಗೆ ಆಗಮಿಸುವ ಗಣ್ಯರಿಗೆ ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ನಡೆಸಲಾಗಿದೆ. ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಫ್ಲೆಕ್ಸ್ ಹಾಗೂ ಬ್ಯಾನರ್ಗಳೊಂದಿಗೆ ಸ್ವಾಗತ ಕೋರಲಾಗಿದ್ದು, ದಾವಣಗೆರೆ ನಗರದೆಲ್ಲೆಡೆ ಬಿಜೆಪಿ ಪಕ್ಷದ ಬಾವುಟಗಳಿಂದ ಅಲಂಕರಿಸಲಾಗಿದೆ ಎಂದರು.

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಳ ವ್ಯಕ್ತಿ. ಅದಕ್ಕಾಗಿಯೇ ವರಿಷ್ಠರು ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಮುಂದೆ ಇನ್ನೂ ಉತ್ತಮ ಕಾರ್ಯ ಮಾಡುತ್ತಾರೆಂಬ ಭರವಸೆ ಇದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರಶ್ನಾತೀತ ನಾಯಕರು. ಅವರು ಅಧಿವೇಶನದ ನಂತರ ನಾಲ್ಕೈದು ತಂಡಗಳನ್ನು ರಚಿಸಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಮುಂಬರುವ 2023ರ ವಿಧಾನಸಭೆ ಚುನಾವಣೆಯನ್ನು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಿದ್ದೇವೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಸರ್ಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಪದೇ ಪದೇ ತೈಲ ಬೆಲೆ ಬಗ್ಗೆ ಯಾಕೆ ಕೇಳ್ತೀರಾ?
ಪದೇ ಪದೇ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಬಗ್ಗೆ ಕೇಳ್ತೀರಾ. ಬಳಿಕ ಏನಾದರೂ ಹೇಳಿದರೆ ವ್ಯಾಟ್ಸಪ್ಲ್ಲಿ ಹಾಕ್ತೀರಾ. ಕೊರೊನಾ ಸೋಕು ಕಡಿಮೆಯಾದ ಬಳಿಕ ದರವೂ ಕೆಳಗೆ ಬರಲಿದೆ. ಕೊರೊನಾ ಎರಡು ಡೋಸ್, ಬಡವರಿಗೆ ಅಕ್ಕಿ ವಿತರಣೆ, ಜನೌಷಧ ಸೇರಿದಂತೆ ಅತ್ಯುತ್ತಮ ಕಾರ್ಯ ಮಾಡಿದ್ದೇವೆ. ಆ ಬಗ್ಗೆ ಕೇಳುವುದೇ ಇಲ್ಲ. ಬರೀ ಪೆಟ್ರೋಲ್, ಡೀಸೆಲ್ ಬಗ್ಗೆ ಯಾಕೆ ಕೇಳ್ತೀರಾ ಎಂದು ಹೇಳಿದರು.
ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್, ಎಲ್ಲವೂ ಎಂಪಿಗೆ ಗೊತ್ತಾಗಲ್ಲ. ಅಲ್ಲಿಂದ ಯಾರೂ ಫೋನ್ ಮಾಡಲ್ಲ. ನೀನೇ ಎಂಪಿಯಾಗು ಎಲ್ಲವೂ ಗೊತ್ತಾಗುತ್ತೆ ಎಂದು ಸಿದ್ದೇಶ್ವರ್ ತಿರುಗೇಟು ನೀಡಿದರು.
Recommended Video

ಬೇಕಿದ್ದವರು ಹೋಗಿ ಭೇಟಿ ಮಾಡ್ತಾರೆ
ಇನ್ನು ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ, ಯಾರಿಗೆ ಸಚಿವ ಸ್ಥಾನ ಬೇಕೋ, ಅವರು ಹೋಗಿ ನಾಯಕರ ಬಳಿ ಕೇಳುತ್ತಾರೆ. ನನಗೆ ನಾಯಕತ್ವ ವಹಿಸಿ ಅಂತಾ ಈ ವಿಚಾರದಲ್ಲಿ ಯಾರೂ ಕೇಳಿಲ್ಲ. ಕೇಳಿದರೆ ನಾಯಕತ್ವ ವಹಿಸುತ್ತೇನೆ ಎಂದು ತಿಳಿಸಿದರು.
ಇನ್ನು ಮಾಯಕೊಂಡದ ಎಚ್. ರಾಂಪುರದ ಬಿಂದು ಎಂಬ ಯುವತಿ ರಸ್ತೆ ನಿರ್ಮಾಣ ಆಗಿ ಬಸ್ ಬರುವವರೆಗೆ ಶಪಥ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಭೇಟಿ ನೀಡಿ, ಈಗಾಗಲೇ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಮೂರೂವರೆ ಕಿಲೋಮೀಟರ್ ರಸ್ತೆಯಾಗಿದೆ. ಉಳಿದ ಒಂದೂಕಾಲು ಕಿಲೋಮೀಟರ್ ರಸ್ತೆ ಆಗಬೇಕಿದೆ. ರಸ್ತೆನೂ ಮಾಡಿಸ್ತೀನಿ, ಮದುವೆನೂ ಮಾಡಿಸ್ತೀನಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ನಾನು ಡಿಸಿ ಜೊತೆ ಬೆಳಿಗ್ಗೆ ಮಾತನಾಡಿದ್ದೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.












Click it and Unblock the Notifications