ದಾವಣಗೆರೆ; ಹೇಳಿದಂತೆ ಲಸಿಕೆ ತರಿಸಿದ ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಜೂನ್ 03; "ಹತ್ತು ಸಾವಿರ ಜನರಿಗೆ ಆಗುವಷ್ಟು ಕೋವಿಶೀಲ್ಡ್ ಲಸಿಕೆ ತರಿಸಿದ್ದು, ಇನ್ನು ವಾರ ಇಲ್ಲವೇ ಹತ್ತು ದಿನಗಳೊಳಗಾಗಿ 50 ಸಾವಿರ ಲಸಿಕೆ ಬರುತ್ತದೆ. ಪೂನಾ ಮೂಲದ ಕಂಪನಿಗೆ 4 ಕೋಟಿ ರೂಪಾಯಿಗೂ ಅಧಿಕ ಹಣ ಪಾವತಿಸಿದ್ದೇವೆ" ಎಂದು ಶಾಮನೂರು ಶಿವಶಂಕರಪ್ಪ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
ಗುರುವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಒಟ್ಟು 60 ಸಾವಿರ ವ್ಯಾಕ್ಸಿನ್ ನೀಡಲು ಒಪ್ಪಿಗೆ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಅಗತ್ಯ ಬಿದ್ದರೆ ಖರೀದಿಸುತ್ತೆವೆ. ನುಡಿದಂತೆ ನಮ್ಮ ತಂದೆಯವರು ನಡೆದಿದ್ದಾರೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ'' ಎಂದರು.
"ಇನ್ನು ವಾರ ಇಲ್ಲವೇ ಹತ್ತು ದಿನಗಳೊಳಗೆ ಉಳಿದ 50 ಸಾವಿರ ಕೋವಿಶೀಲ್ಡ್ ಬರಲಿವೆ. ಸರ್ಕಾರದಿಂದ ನೀಡಲಾಗುವ ಲಸಿಕೆ ಹಾಗೂ ನಾವು ನೀಡುವ ಲಸಿಕೆಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಎಚ್ಚರ ವಹಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.

"ಮೊದಲ ಹಂತವಾಗಿ 45 ವರ್ಷ ಮೇಲ್ಪಟ್ಟವರಿಗೆ ನೀಡುತ್ತೇವೆ. ಅಗತ್ಯಬಿದ್ದರೆ ದಕ್ಷಿಣ ಮತ್ತು ಉತ್ತರ ಎರಡೂ ಕ್ಷೇತ್ರಗಳ ಜನರಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಾಲೇ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿದ್ದೇವೆ. ಬಡವರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸಲಾಗುವುದು" ಎಂದರು.
"ಎಸ್. ಎಸ್. ಹೈಟೆಕ್ ಹಾಗೂ ಬಾಪೂಜಿ ಆಸ್ಪತ್ರೆಯಲ್ಲೂ ಸದ್ಯದಲ್ಲಿಯೇ ಕೋವಿಶೀಲ್ಡ್ ನೀಡುವ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಹಣ ನಿಗದಿ ಮಾಡಿಲ್ಲ. ಸಿರಿಂಜ್, ವೈದ್ಯಕೀಯ ಸಿಬ್ಬಂದಿ ಖರ್ಚು ಸೇರಿದಂತೆ ಎಲ್ಲವನ್ನೂ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಣವಿದ್ದವರೂ ಲಸಿಕೆ ತೆಗೆದುಕೊಳ್ಳುತ್ತಾರೆ. ಆಗ ಜನರಿಗೂ ತೊಂದರೆ ಆಗುವುದಿಲ್ಲ. ಜನದಟ್ಟಣೆ ಹೆಚ್ಚಾಗದಂತೆ ನೋಡಿಕೊಳ್ಳಲಾಗುವುದು" ಎಂದು ಮಾಹಿತಿ ನೀಡಿದರು.
"ಶುಕ್ರವಾರ ಬೆಳಗ್ಗೆ 12. 30ಕ್ಕೆ ಹಳೆದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಅನ್ನದಾಸೋಹ ಸಭಾಂಗಣದಲ್ಲಿ ಲಸಿಕೆ ನೀಡಲು ಚಾಲನೆ ಸಿಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕೆ. ಸಿ. ಕೊಂಡಯ್ಯ, ಈಶ್ವರ್ ಖಂಡ್ರೆ ಸೇರಿದಂತೆ ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ಈ ಕಾರ್ಯಕ್ಕೆ ಚಾಲನೆ ನೀಡುತ್ತೇವೆ" ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.
"ಕೆಲವರು ಲಸಿಕೆ ತರಿಸುತ್ತಾರೋ?, ಇಲ್ಲವೋ? ಎಂಬ ಬಗ್ಗೆ ಟೀಕೆ ಮಾಡಿದ್ದರು. ಆದರೆ ಈಗ ಲಸಿಕೆ ಬಂದಿವೆ. ನಾಳೆಯಿಂದ ವಾರ್ಡ್ ವಾರು ನೀಡುತ್ತೇವೆ. ಸರ್ಕಾರಕ್ಕೆ ಹಣ ಕೊಡ್ತೇವೆ ಎಂದರೂ ಒಪ್ಪಲಿಲ್ಲ. ಹಾಗಾಗಿ ನಾವೇ ಹಣ ಕೊಟ್ಟು ತರಿಸಿದ್ದೇವೆ" ಎಂದು ಹೇಳಿದರು.












Click it and Unblock the Notifications