ದಾವಣಗೆರೆ: ಹಿರಿಯ ಮುತ್ಸದ್ಧಿ ಹಾಗೂ ಮಾಜಿ ಶಾಸಕ ಕೆ.ಮಲ್ಲಪ್ಪ ವಿಧಿವಶ
ದಾವಣಗೆರೆ, ಅಕ್ಟೋಬರ್ 12: ಹಿರಿಯ ರಾಜಕಾರಣಿ ಹಾಗೂ ಮಾಜಿ ಶಾಸಕ ಕೆ.ಮಲ್ಲಪ್ಪ (92) ಸೋಮವಾರ ಮುಂಜಾನೆ ದಾವಣಗೆರೆಯಲ್ಲಿ ನಿಧನರಾಗಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ಮಲ್ಲಪ್ಪ, ದಾವಣಗೆರೆ ನಗರದ ಆಂಜನೇಯ ಬಡಾವಣೆಯ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ. ಇವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದು, ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ 4.30ಕ್ಕೆ ದಾವಣಗೆರೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.
ಕೆ.ಮಲ್ಲಪ್ಪನವರ ಪರಿಚಯ:
15-04-1929 ರಲ್ಲಿ ಜನಿಸಿದ ಕೆ.ಮಲ್ಲಪ್ಪ, ಮುಂದೆ ಜನಸೇವೆಯಲ್ಲಿ ನಿರತರಾಗಿ ರಾಜಕೀಯ ಪ್ರವೇಶ ಪಡೆದಿದ್ದರು. ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದಿಂದ 1983 ರಲ್ಲಿ, ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ 1985 ರಲ್ಲಿ ಶಾಸಕರಾಗಿ ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ಕೆ.ಮಲ್ಲಪ್ಪನವರು ದೇವರಾಜ್ ಅರಸು ಹಿಂದುಳಿದ ವರ್ಗಗಳ ನಿಗಮ ಹಾಗೂ ಬಯಲು ಸೀಮೆಯ ಅಧ್ಯಕ್ಷರಾಗಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿದ್ದವರು. ಕಾಗಿನೆಲೆ ಮಹಾಸಂಸ್ಥಾನ ಪೀಠ ನಿರ್ಮಾಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿ ಪೀಠ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು.
ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾಗಿ, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಅಂದೇ ಕುರುಬ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎಂದು ಹೋರಾಟ ಮಾಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದ ಕೆ.ಮಲ್ಲಪ್ಪ, ಅಹಿಂದಾ ಸಂಘಟನೆಯ ಪ್ರಮುಖ ರೂವಾರಿಗಳಾಗಿದ್ದರು.
ಅಷ್ಟೆ ಅಲ್ಲದೇ ಕುಸ್ತಿ ಜೀರ್ಣೋದ್ಧಾರಕ ಸಂಘದ ಅಧ್ಯಕ್ಷರಾಗಿ ಹೆಸರುವಾಸಿ ಆಗಿದ್ದ ಮಲ್ಲಪ್ಪನವರು, ನೂರಾರು ಕ್ರೀಡಾಪಟುಗಳನ್ನು ಬೆಳೆಸಿದ್ದರು.












Click it and Unblock the Notifications